Tuesday, July 28, 2009

ನಮಂತಿ ಬುಧಾ ಜನಾ:

ಅಕೃತ್ವಾ ಪರಸಂತಾಪಂ ಅಗತ್ವಾ ಖಲ ನಮ್ರತಾಮ್|

ಅನುತ್ಸೃಜ್ಯಸತಾಂ ವರ್ತ್ಮ| ಯತ್ ಸ್ವಲ್ಪ ಮಿತದ್ಬಹು||

ಬೇರೆಯವರಿಗೆ ನೋವುಂಟುಮಾಡದೆ,ದುಷ್ಟರಿಗೆ ಬಗ್ಗದೆ,ಸಜ್ಜನರು ತುಳಿದ ಮಾರ್ಗವನ್ನು ಬಿಡದೆ, ಸ್ವಲ್ಪವನ್ನೇ ಮಾಡಿದರೂ ಅದು ಮಹತ್ವದ್ದೇ ಸರಿ.

ದುರ್ಜನೇನ ಸಮಂ ಸಖ್ಯಂ ವೈರಂ ಚಾಪಿ ನಕಾರಯೇತ್| ಉಷ್ಣೋ ದಹತಿ ಚಾಂಗಾರ: ಶೀತ: ಕೃಷ್ಣಾಯತೇ ಕರಂ||

ದುರ್ಜನರೊಂದಿಗೆ ಸ್ನೇಹವನ್ನಾಗಲೀ ವೈರವನ್ನಾಗಲೀ ಮಾಡಕೂಡದು.ಉರಿವ ಕೆಂಡ ಕೈಸುಟ್ಟರೆ, ತಣ್ಣಗಿನ ಇದ್ದಿಲು ಕೈಯನ್ನು ಕಪ್ಪು ಮಾಡುತ್ತದೆ.

ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ| ಲೋಚನಾಭ್ಯಾಂ ವಿಹೀನಸ್ಯ ದರ್ಪಣಂ ಕಿಂ ಕರಿಷ್ಯತಿ||

ಸ್ವಂತ ಬುದ್ಧಿ ಇಲ್ಲದವನಿಗೆ ಶಾಸ್ತ್ರಗಳಿಂದ ಏನೂ ಲಾಭವಿಲ್ಲ. ಕಣ್ಣೇ ಇಲ್ಲದವನಿಗೆ ಕನ್ನಡಿಯಿಂದೇನು ಪ್ರಯೋಜನ?

ನಮಂತಿ ಫಲಿತಾ ವೃಕ್ಷಾ:| ನಮಂತಿ ಬುಧಾ ಜನಾ: | ಶುಷ್ಕ ಕಾಷ್ಠಾನಿ ಮೂರ್ಖಾಶ್ಚ| ಭಿದ್ಯಂತೇನ ನಮಂತಿಚ||

ಹಣ್ಣು ಬಿಟ್ಟ ಮರಗಳು ಬಾಗುತ್ತವೆ.ವಿದ್ವಾಂಸರಾದ ಜನರು ವಿನಯದಿಂದ ಬಾಗುತ್ತಾರೆ. ಒಣಕಡ್ಡಿಗಳು ಮುರಿದುಹೋಗುತ್ತವೆ. ಬಾಗುವುದಿಲ್ಲ. ಅಂತೆಯೇ ಮೂರ್ಖ ಜನರು ನಾಶವಾದಾರೇ ಹೊರತು ಬಾಗುವುದಿಲ್ಲ.

Saturday, July 18, 2009

ಮೇಲು-ಕೀಳು ಭಾವನೆಯನ್ನು ವೇದವು ಒಪ್ಪದು

ಬ್ರಾಹ್ಮಣ

ಯಾವಾಗ ಅಜ್ಞಾನವೆಂಬುದು ಹೋಗುತ್ತದೆ,ಆಗ ಜ್ಞಾನವು ಲಭಿಸುತ್ತದೆ,ಈ ಅಜ್ಞಾನದವಿರುದ್ಧ ಹೋರಾಡಿದವನು ಬ್ರಾಹ್ಮಣನೆನಿಸಿದನು. ಇಲ್ಲಿ ಮತ್ತೆ ಜಾತಿ ಗಣನೆಗೆ ಬಾರದು.ಅವನ ಸ್ವಂತ ಯೋಗ್ಯತೆ, ಸಾಧನೆಯ ಮೇಲೆ ಅವನು ಬ್ರಾಹ್ಮಣನಾಗುತ್ತಾನೆ, ಅವನು ಯಾರ ಹೊಟ್ಟೆಯಲ್ಲಿ ಹುಟ್ಟಿದನೆಂಬುದು ಇಲ್ಲಿ ನಗಣ್ಯ. ಅವನು ಶ್ರಮ ವಹಿಸಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾನಾದ್ದರಿಂದ ಅವನು ಇಂಜಿನಿಯರ್, ಅಥವಾ ವೈದ್ಯಕೀಯ ಓದಿದ್ದರೆ ಡಾಕ್ಟರ್ ಅಥವಾ ಮತ್ಯಾರೋ.ಅವನು ಯಾರ ಮಗನೆಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಅಜ್ಞಾನದ ವಿರುದ್ಧವಾಗಿ ಇವನು ಹೋರಾಡುತ್ತಿದ್ದಾನಾದ್ದರಿಂದ ಇವನು ಬ್ರಾಹ್ಮಣ. ಇವನು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದರೇನು? ಅವನ ಹೆಸರು ಮಕಂದರ್ ಆದರೇನು? ಪೀರ್ಆದರೇನು? ಅವನು ಅವನ ಗುಣಕರ್ಮ ಸ್ವಭಾವದಿಂದ ಬ್ರಾಹ್ಮಣತ್ವ ಗಳಿಸಿದ್ದಾನಾದ್ದರಿಂದ ಅವನು ಬ್ರಾಹ್ಮಣ.ಅವರ ಅಪ್ಪ ಯಾರೂ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ.ಅವನ ಸಾಧನೆ ಏನು, ಅವನು ಸಮಾಜದ ಅಜ್ಞಾನ ಹೋಗಲಾಡಿಸಲು ಹೋರಾಡುತ್ತಿದ್ದರೆ, ಅವನು ಬ್ರಾಹ್ಮಣ.

ಕ್ಷತ್ರಿಯ

ಸಮಾಜದಲ್ಲಿರುವ ಎರಡನೆಯ ದುಷ್ಟಶಕ್ತಿ ಅನ್ಯಾಯ-ಅಧರ್ಮ.ಯಾರಲ್ಲಿ ಅನ್ಯಾಯ-ಅಧರ್ಮದ ವಿರುದ್ಧ ಹೋರಾಡುವ ಸ್ವಭಾವ ವಿದೆಯೋ, ಯಾರು ಈ ಹೋರಾಟಮಾಡುತ್ತಿದ್ದಾರೋ ಅವನು ಕ್ಷತ್ರಿಯ.ಯುದ್ಧದಲ್ಲಿ ಕಾದಾಡಿ ರುಂಡವನ್ನು ಚಂಡಾಡುವವನು ಕ್ಷತ್ರಿಯ ಎಂಬುದು ರೂಢಿಯಲ್ಲಿದೆ. ಆದರೆ ನಿಜವಾದ ಕ್ಷತ್ರಿಯ ಯಾರು? ಕ್ಷತಾತ್ ತ್ರಾಯತೇ ಇತಿ ಕ್ಷತ್ರಿಯ:, ಆಘಾತಗಳಿಂದ,ಅನ್ಯಾಯಗಳಿಂದ,ತೊಂದರೆಗಳಿಂದ ರಕ್ಷಿಸುವವನು ಕ್ಷತ್ರಿಯ.ತನ್ನ ಪ್ರಾಣವನ್ನು ಪಣವಾಗಿಟ್ಟು ಅನ್ಯಾಯ-ಅಧರ್ಮಗಳ ವಿರುದ್ಧ ಯಾರು ಹೋರಾಡುತ್ತಾನೋ ಅವನು ಕ್ಷತ್ರಿಯ. ಇಲ್ಲಿಯೂ ಕೂಡ ಅವನು ಹುಟ್ಟಿನಿಂದ ಯಾವ ಜಾತಿ[ ಈಗ ರೂಢಿಯಲ್ಲಿರುವಂತೆ] ಎಂಬುದು ನಗಣ್ಯ. ಯಾರಲ್ಲಿ ಈ ಗುಣಸ್ವಭಾವ ಇದೆಯೋ ಅವನು ಕ್ಷತ್ರಿಯ.

ವೈಶ್ಯ

ಇನ್ನೊಂದು ದುಷ್ಟ ಶಕ್ತಿ ಎಂದರೆ ಅಭಾವ. ಅಭಾವವೆಂದರೆಭಗವಂತನು ಕೊಟ್ತಿಲ್ಲ ವೆಂದು ಅಭಾವವಿದೆಯೆಂದಲ್ಲ.ಭಗವಂತನು ಕೊಟ್ಟಿದ್ದರೂ ಅದು ಸರಿಯಾಗಿ ಹಂಚಿಕೆಯಾಗಿಲ್ಲ.ಎಲ್ಲೋ ಒಂದುಕಡೆ ಹೆಚ್ಚು, ಮತ್ತೊಂದುಕಡೆ ಕಮ್ಮಿ, ಹೀಗೆ ಅಭಾವ ಸೃಷ್ಟಿಯಾಗಿದೆ.ಪ್ರಪಂಚದಲ್ಲಿರುವ ಸಂಪತ್ತನ್ನು ಕ್ರೋಢೀಕರಿಸಿ,ಅದನ್ನು ಬೆಳಸಿ ಸಮಾಜದಲ್ಲಿ ಸಮಾನವಾಗಿ ಹಂಚಿಕೆಮಾಡಿ ಯಾರು ಇಂತಾ ಅಭಾವವನ್ನು ನಾಶಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೋ ಅವನು ವೈಶ್ಯನೆನಸಿಕೊಳ್ಳುತ್ತಾನೆ. ಪಶುಪಾಲನೆ,ಗೋಪಾಲನೆ, ಕೃಷಿ, ಇವೆಲ್ಲಾ ವೈಷ್ಯನ ಕೆಲಸ.ಸಮಾಜದಲ್ಲಿ ಅಭಾವದ ವಿರುದ್ಧ ಹೋರಾಡುವ ಯಾವನೇಆಗಲೀ ಅವನು ವೈಷ್ಯ ನೆನಸಿಕೊಳ್ಳುತ್ತಾನೆ.

ಶೂದ್ರ

ಸಮಾಜದಲ್ಲಿರುವ ನಾಲ್ಕನೇ ಮತ್ತು ಅತಿ ದುಷ್ಟಶಕ್ತಿ ಎಂದರೆ ಆಲಸ್ಯ. ಆಲಸ್ಯ, ಸೋಮಾರಿತನ, ನಿಶ್ಕ್ರಿಯತೆಯ ವಿರುದ್ಧ ಹೋರಾಡುವವನು ಶೂದ್ರನೆನಸಿಕೊಳ್ಳುತ್ತಾನೆ.ಲವಲವಿಕೆಯಿಂದ ಕೆಲಸವನ್ನು ಮಾಡುತ್ತಾ, ಎಲ್ಲರಲ್ಲೂ ಸ್ಫೂರ್ತಿಯನ್ನುಂಟುಮಾಡುತ್ತಾ,ಎಲ್ಲರೂ ಕೂಡ ಉದ್ಯಮಶೀಲರಾಗುವುದಕ್ಕೆ ಪ್ರೋತ್ಸಾಹವನ್ನು ಕೊಡುವವನು ಶೂದ್ರ.ಇಲ್ಲೂ ಕೂಡ ಅವನು ಯಾವ ಜಾತಿಯಲ್ಲಿ[ಈಗಿನ ರೂಢಿಯಂತೆ] ಹುಟ್ಟಿದನೆಂಬುದು ಲೆಕ್ಖಕ್ಕೆ ಬರಲಿಲ್ಲ.

ಹೀಗೆ ಸಮಾಜದಲ್ಲಿರುವ ನಾಲ್ಕು ದುಷ್ಟಶಕ್ತಿಗಳಾದ ಅಜ್ಞಾನ,ಅನ್ಯಾಯ, ಅಭಾವ ಮತ್ತು ಆಲಸ್ಯದ ವಿರುದ್ಧ ಹೋರಾಡುವ ಕ್ರಿಯೆಗಳಲ್ಲಿ ತಮ್ಮ ತಮ್ಮ ಗುಣಸ್ವಭಾವಗಳಿಗನುಗುಣವಾಗಿ ಜೋಡಿಸಿಕೊಳ್ಳುವವರನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ವಿಭಾಗಿಸಲಾಯ್ತು. ಇಲ್ಲಿ ಸಮಾಜದಈ ದುಷ್ಟಶಕ್ತಿಗಳ ವಿರುದ್ಧವಾಗಿ ಸಮಾನವಾಗಿ ಹೋರಾಡುತ್ತಿರುವ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ, ಇವರಲ್ಲಿ ಮೇಲ್ಯಾರು? ಕೀಳ್ಯಾರು?

ಕಾಲಗತಿಯಲ್ಲಿ ಯಾರೋ ಅವಿವೇಕಿಗಳು ಈ ವರ್ಣವ್ಯವಸ್ಥೆಯಲ್ಲಿ ಮೇಲು ಕೀಳೆಂಬ ಭೇದ ಉಂಟುಮಾಡಿ ರೂಢಿಗೆ ಬಂದಿರುವುದು ಸುಳ್ಳಲ್ಲ. ಆದರೆ ಇದನ್ನು ವೇದವು ಒಪ್ಪುವುದಿಲ್ಲ.

ವೇದವು ಸ್ಪಷ್ಟವಾಗಿಹೇಳಿದೆ....

ಅಜ್ಯೇಷ್ಠಾಸೋ ಅಕನಿಷ್ಠಾಸ: ಏತೇ ಸಂಭ್ರಾತರೋ ವಾವೃಧು: ಸೌಭಗಾಯ| ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿ: ಸುದಿನಾ ಮರುಧ್ಭ್ಯ:||

[ಋಕ್.೫.೬೦.೫]

ಅಜ್ಯೇಷ್ಠಾಸೋ ಅಕನಿಷ್ಠಾಸ:

ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ, ಈ ಜೀವನಕ್ರಮವನ್ನು ಪಾಲನೆಮಾಡುವವರಲ್ಲಿ ಯಾರೂ ದೊಡ್ದವರಲ್ಲ, ಯಾರೂ ಚಿಕ್ಕವರೂ ಅಲ್ಲ.ಯಾರೂ ಮೇಲೂ ಅಲ್ಲ. ಯಾರೂ ಕೀಳೂ ಅಲ್ಲ.

ಭ್ರಾತರೋ:

ಎಲ್ಲರೂ ಪರಸ್ಪರ ಸೋದರರು.

ಸೌಭಗಾಯ ಸಂ ವಾವೃಧು:

ನಿಮ್ಮೆಲ್ಲರ ಸೌಭಾಗ್ಯಕ್ಕಾಗಿ,ನಿಮ್ಮೆಲ್ಲರ ಏಳಿಗೆಗಾಗಿ ಒಟ್ಟಿಗೆ ನಡೆಯುವವರಾಗಿ.

ಪುರುಷಸೂಕ್ತದ ಈ ಒಂದು ಮಂತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದರಂತೆ ನಡೆದದ್ದೇ ಆದರೆ ಸಮಾಜವು ಅಂದೇ ಸ್ವರ್ಗವಾಗುವುದಿಲ್ಲವೇ?

ನಾವೆಲ್ಲಾ ಹೇಗೆ ಸಹೋದರರು?

ಯುವಾ ಸ್ವಪಾ ರುದ್ರ: , ಏಷಾಂ ಪಿತಾ:

ಅಜರನೂ, ಆತ್ಮರಕ್ಷಕನೂ,ದುಷ್ಟರಿಗೆ ದಂಡನೀಡುವವನೂ ಆದ ಪ್ರಭುವು ಇವರೆಲ್ಲರ ತಂದೆ.ಆದ್ದರಿಂದಆಭಗವಂತನ ಮಕ್ಕಳಾದ ನಾವೆಲ್ಲಾ ಸೋದರರು.

ಸುದುಘಾ ಪೃಶ್ನಿ: ಸುದಿನಾ ಮರುಧ್ಭ್ಯ:

ಭೂತಾಯಿಯು ಈ ಮಾನವರಿಗೆಲ್ಲಾ ಉತ್ತಮಶಕ್ತಿಯನ್ನೆರೆಯುವವಳೂ, ಉತ್ತಮ ದಿನಗಳನ್ನು ತೋರಿಸುವವಳೂಆಗಿದ್ದಾಳೆ.

ನಮಗೆಲ್ಲಾ ಒಂದೇ ಭೂಮಿ. ನಮಗೆಲ್ಲಾ ಆಶ್ರಯವನ್ನು ಕೊಟ್ಟು, ಬದುಕಲು ದವಸಧಾನ್ಯಗಳನ್ನು ಕೊಟ್ಟು ಕಾಪಾಡುತ್ತಿರುವವಳು ಒಬ್ಬಳೇ ಭೂಮಾತೆ.ಆದ್ದರಿಂದ ನಾವೆಲ್ಲಾ ಒಬ್ಬನೇ ಭಗವಂತನ ಮಕ್ಕಳು.

ಸುಜಾತಾಸೋ ಜನುಷಾ ಪೃಶ್ನೀಮಾತರೋ ದಿವೋ ಮರ್ಯಾ:

[ಋಕ್.೫.೫೯.೬]

ಪೃಶ್ನೀಮಾತರ:

ಭೂತಾಯಿಯನ್ನೇ ತಾಯಿಯಾಗಿ ಹೊಂದಿದವರೂ

ದಿವ: ಮರ್ಯಾ:

ಜ್ಯೋತಿರ್ಮಯ ಪ್ರಭುವಿನ ಮಕ್ಕಳಾದ ಕಾರಣ

ಜನುಷಾ ಸುಜಾತಾಸ:

ಜನ್ಮದಿಂದ ಉತ್ತಮ ಕುಲದವರೇ ಆಗಿದ್ದಾರೆ.

ಅಥರ್ವವೇದವು ಹೇಳಿದೆ...

ಸಮಾನ ಮಂತ್ರ: ಸಮಿತಿ: ಸಮಾನೀ

ಸಮಾನ ವ್ರತಂ ಸಹ ಚಿತ್ತ ಮೇಷಾಂ|

ಸಮಾನೇನ ವೋ ಹವಿಷಾ ಜುಹೋಮಿ

ಸಮಾನಂ ಚೇತೋ ಅಭಿಸಂವಿಶಧ್ವಮ್||

[ಅಥರ್ವ ವೇದ ೬.೬೪.೨]

ಮಂತ್ರ:ಸಮಾನ:

ಎಲ್ಲರ ಮಂತ್ರವೂ ಸಮನಾಗಿರಲಿ

ಸಮಿತಿ: ಸಮಾನೀ

ಸಮಿತಿ ಸಮಾನವಾಗಿರಲಿ

ವ್ರತಂಸಮಾನಮ್

ವ್ರತವೂ ಸಮಾನವಾಗಿರಲಿ

ಏಷಾ ಚಿತ್ತಂ ಸಹ

ಇವರೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ

ವ: ಸಮಾನೇನ ಹವಿಷಾ ಜುಹೋಮಿ

ನಿಮ್ಮೆಲ್ಲರಿಗೂ ಸಮಾನವಾದ ಖಾದ್ಯಪೇಯಗಳನ್ನೇ ದಾನ ಮಾಡುತ್ತೇನೆ

ಸಮಾನಂ ಚೇತ:

ಸಮಾನವಾದ ಚೈತನ್ಯದಲ್ಲಿಯೇ

ಅಭಿಸಂವಿಶಧ್ವಮ್

ಎಲ್ಲೆಡೆಯಿಂದಲೂ ಪ್ರವೇಶಿಸಿರಿ

ಭಗವಂತನು ಇಷ್ಟು ಸ್ಪಷ್ಟವಾಗಿ ಸಮಾನತೆಯ ಸಂದೇಶವನ್ನು ಸಾರುತ್ತಿರುವಾಗ ಮಾನವರಲ್ಲಿ ಮೇಲ್ಯಾರು? ಕೀಳ್ಯಾರು? ಎಲ್ಲರೂ ಸೋದರರೇ ಅಲ್ಲವೇ?

[ಆಧಾರ: ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸ ಮತ್ತು ಪಂ.ಸುಧಾಕರ ಚತುರ್ವೇದೀ ಇವರ ಗ್ರಂಥ " ವೇದೋಕ್ತ ಜೀವನ ಪಥ"]

ಚಾತುರ್ವರ್ಣ

ಋಗ್ವೇದ ಸಂಹಿತೆಯ ೧೦ನೇಮಂಡಲದ ೮ನೇ ಅಷ್ಟಕದ ೯೦ನೇ ಸೂಕ್ತದ ೧೨ನೇ ಮಂತ್ರ...

ಬ್ರಾಹ್ಮಣೋಸ್ಯ ಮುಖಮಾಸೀತ್ |ಬಾಹೂ ರಾಜನ್ಯಕೃತ:| ಊರೂ ತದಸ್ಯಯದ್ವೈಶ್ಯ:| ಪದ್ಭ್ಯಾಂ ಶೂದ್ರೋ ಅಜಾಯತ|

ವೇದದಲ್ಲಿ ಪುಸುಷಸೂಕ್ತದ ಈ ಮಂತ್ರಭಾಗವು ನಮಗೆಲ್ಲಾ ಪರಿಚಿತ. ಕಾಲಕ್ರಮದಲ್ಲಿ ಬಹಳಷ್ಟು ಅಪಾರ್ಥಕ್ಕೆ ಕಾರಣವಾಗಿರುವುದೂ ಇದೇ ಭಾಗ.

ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ-ಇವು ಹುಟ್ಟಿನಿಂದ ಬರುವಂತಹದ್ದಲ್ಲ.ರೂಢಿಯಲ್ಲಿ ಜಾತಿಎಂದು ಗುರುತಿಸಿಕೊಂಡಿರುವ ಈ ವ್ಯವಸ್ಥೆ ಜಾತಿಯಲ್ಲ. ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ-ಎಂಬುದು ವರ್ಣವ್ಯವಸ್ಥೆ. ಜಾತಿಯೇ ಬೇರೆ.ವರ್ಣವೇ ಬೇರೆ.ಅನೇಕ ವಿದ್ವಾಂಸರುಗಳೂ ಕೂಡ ಈ ಎರಡು ಪದಗಳ ಅರ್ಥವನ್ನು ಸರಿಯಾಗಿ ಮಾಡದಿರುವುದರಿಂದ ನಾವೆಲ್ಲಾ ಗೊಂದಲದಲ್ಲಿ ಸಿಲುಕಿದ್ದೇವೆ. ಜಾತಿ ಎಂದರೆ ಹುಟ್ಟಿನಿಂದ ಬರುವಂತಹದ್ದು ಎಂದು ಅರ್ಥ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ-ಎಂಬುದು ಹುಟ್ಟಿನಿಂದ ಬರುವಂತದ್ದಲ್ಲ. ಇದನ್ನು ವರ್ಣ ಎಂದು ಹೇಳುವರು. ವರ್ಣ ವೆಂದರೇನು? ಅದರ ಮೂಲಧಾತುವಿನಿಂದ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ವರ್ಣದ ಮೂಲಧಾತು ವೃ-ವರಣೆ ಅಂದರೆ ಆರಿಸುವಿಕೆ.ಯಾವುದನ್ನು ಆರಿಸಿಕೊಳ್ಳುತ್ತೇವೋ ಅದು ವರ್ಣ.ಆರಿಸಿಕೊಳ್ಳಲು ಇಲ್ಲಿ ಅವಕಾಶವಿದೆ ,ಎಂಬುದು ಗಮನಾರ್ಹ.ನಮಗೆ ಇಲ್ಲಿ ಆರಿಸಿಕೊಳ್ಳುವುದಕ್ಕೆ ಸ್ವಾತಂತ್ರ್ಯವಿದೆ.ಆರಿಸಿಕೊಂಡು ಸಾಧನೆಮಾಡಿ ತನ್ನದಾಗಿಸಿಕೊಳ್ಳುವುದು ವರ್ಣ. ಹುಟ್ಟಿನಿಂದ ಬರುವುದು ಜಾತಿ. ಇಲ್ಲಿ ಆರಿಸಿಕೊಳ್ಳಲು ಸಾಧ್ಯವಿಲ್ಲ.ಒಂದು ಸಣ್ಣ ಉಧಾಹರಣೆ ನೋಡೋಣ. ಆಗತಾನೇ ಹುಟ್ಟಿದ ಹತ್ತು ಮಕ್ಕಳನ್ನು [ಅದು ಈಗ ನಾವು ಹೇಳುವಂತೆ ಯಾವುದೇ ಜಾತಿಗೆ ಸೇರಿರಲಿ]ಒಟ್ಟಿಗೆ ಮಲಗಿಸಿದಾಗ ಇದು ಬ್ರಾಹ್ಮಣ, ಇದು ಲಿಂಗಾಯಿತ, ಇದು ಮುಸ್ಲಿಮ್, ಇದು ಕ್ರೈಸ್ತ ಮಗುವೆಂದು ವಿಭಾಗಿಸಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಅದರೆ ಅದೇ ಮಕ್ಕಳೊಡನೆ ಒಂದು ನಾಯಿಮರಿ, ಒಂದು ಬೆಕ್ಕಿನಮರಿಯನ್ನು ಮಲಗಿಸಿದರೆ,ಆಗ ಇದು ಮನುಷ್ಯ, ಇದು ನಾಯಿ, ಇದು ಬೆಕ್ಕು ಎಂದು ವಿಭಾಗಿಸಲು ಸಾಧ್ಯ. ಅಲ್ಲವೇ? ಆದ್ದರಿಂದ ಹುಟ್ಟಿನಿಂದ ಬಂದಿದ್ದು ಮನುಷ್ಯ ಜಾತಿ ಮಾತ್ರ ಎಂದಾಯ್ತಲ್ಲವೇ? ಜಾತಿ ಎಂದರೇನು? "ಸಮಾನ ಪ್ರಸವಾತ್ಮಿಕಾ ಜಾತಿ:" ಅಂದರೆ ತನ್ನಂತದೇ ಸಂತಾನಕ್ಕೆ ಜನ್ಮನೀಡುವುದು ಜಾತಿ.ಕುರಿಯೊಂದು ಕುರಿಮರಿಗೆ, ಆಡು ಆಡಿಗೆ, ಕೋತಿಯು ಕೋತಿಗೆ ಮತ್ತು ಮನುಷ್ಯ ಮನುಶ್ಯನಿಗೆ ಜನ್ಮ ನೀಡುವುದರಿಂದ ಇವುಗಳನ್ನು ಕುರಿ,ಆಡು, ಕೋತಿ ಮತ್ತು ಮನುಷ್ಯ ಜಾತಿ ಎಂದು ಬೇರೆ ಬೇರೆ ಹೇಳಬಹುದು. ಹುಟ್ಟಿನಿಂದ ಬರುವ, ತನ್ನದೇರೀತಿಯ ಮರಿಗೆ ಸಂತಾನ ನೀಡುವ , ಸಾಯುವ ವರೆಗೂ ಹಾಗೆಯೇ ಇರುವುದಕ್ಕೆ ಜಾತಿ ಎಂದು ಹೇಳುವರು. ಕುರಿಯೊಂದು ಕುರಿಮರಿಗೆ ಮಾತ್ರವೇ ಜನ್ಮ ನೀಡಬಲ್ಲದು ಮತ್ತು ಸಾಯುವ ವರೆಗೂ ಅದು ಕುರಿಯೇ ಆಗಿರುತ್ತದೆ. ಅದರ ಜಾತಿ ಬದಲಾವಣೆ ಆಗುವುದಿಲ್ಲ. ಜಾತಿ ಪದದ ಅರ್ಥ ಇರುವುದು ಹೀಗೆ. ಜನ್ಮನ ಜಾತಿ: ಅಂದರೆ ಹುಟ್ಟಿನಿಂದ ಜಾತಿ.ನಾವು ಜಾತಿ ಎಂದು ವಿಚಾರ ಮಾಡುವುದೇ ಆದರೆ ಹುಟ್ಟಿನಿಂದ ಬಂದದ್ದು ಅದು ಮನುಷ್ಯ ಜಾತಿ ಮಾತ್ರ.ಇದು ಸಹಜವಾಗಿ ಪ್ರಾಕೃತವಾಗಿ ಉಂಟಾಗಿರುವ ವಿಭಾಗ. ವರ್ಣ ವಾದರೋ ನಮ್ಮ ಗುಣಕರ್ಮಕ್ಕನುಸಾರವಾಗಿ, ನಮ್ಮ ಆಸಕ್ತಿ, ಸಾಮರ್ಥ್ಯಕ್ಕನುಗುಣವಾಗಿ ನಾವು ಆರಿಸಿಕೊಂಡಿದ್ದು.ಆದರೆ ತಪ್ಪು ಹೇಗಾಗಿದೆ ಎಂದರೆ ಬ್ರಾಹ್ಮಣನ ಮಗನೂ ಬ್ರಾಹ್ಮಣ,ಶೂದ್ರನ ಮಗ ಶೂದ್ರ, ಹೀಗೆಲ್ಲಾ ತಪ್ಪು ರೂಢಿಯಲ್ಲಿ ಬಂದುಬಿಟ್ಟಿದೆ. ಇದು ಎಷ್ಟು ಮೂರ್ಖತನದ ಪರಮಾವಧಿ ಎಂದರೆ ವೈದ್ಯನಮಗ ವೈದ್ಯ, ಇಂಜಿನಿಯರ್ ಮಗ ಇಂಜಿನಿಯರ್ ಎಂದರೆ ಎಷ್ಟು ಹೊಂದುವುದಿಲ್ಲವೋ ಇದೂ ಹಾಗೆಯೇ ಹೊಂದದ ವಿಚಾರ.ಅಪ್ಪ ಇಂಜಿನಿಯರ್ ಆದ ಮಾತ್ರಕ್ಕೆ ಮಗ ಇಂಜಿನಿಯರ್ ಆಗಲು ಸಾಧ್ಯವಿಲ್ಲ. ಇದು ಅವನ ಆರಿಸಿಕೊಳ್ಳುವಿಕೆ, ಶ್ರಮ, ಸಾಧನೆಯಿಂದ ಮಾತ್ರ ಬರುವಂತಹದ್ದು, ಆರಿಸಿಕೊಂಡಿದ್ದು ವರ್ಣ.

ಜೀವನ ಕ್ರಮದ ವೆತ್ಯಾಸವನ್ನು ಒಂದು ಸೂತ್ರರೂಪದಲ್ಲಿ ಹೀಗೆ ಹೇಳಬಹುದು.

ಸಮಾಜವನ್ನು ನಾಶಮಾಡುವ ನಾಲ್ಕು ದುಷ್ಟಶಕ್ತಿಗಳಿವೆ. ಯಾವ ಸಮಾಜದಲ್ಲಿಈ ನಾಲ್ಕು ದುಷ್ಟಶಕ್ತಿಗಳು ನಾಶವಾಗುತ್ತದೋ ಆ ಸಮಾಜವು ಪ್ರಗತಿಯನ್ನು ಹೊಂದುತ್ತದೆ.ಆ ದುಷ್ಟಶಕ್ತಿಗಳೆಂದರೆ...

ಒಂದು ಅಜ್ಞಾನ,ಎರಡನೆಯದು ಅನ್ಯಾಯ,ಮೂರನೆಯದು ಅಭಾವ ಮತ್ತು ನಾಲ್ಕನೆಯದು ಆಲಸ್ಯ. ಈ ನಾಲ್ಕೂ ದುಷ್ಟಶಕ್ತಿಗಳಿದ್ದಾಗ ಯಾವ ಸಮಾಜವು ಪ್ರಗತಿಹೊಂದಲು ಸಾಧ್ಯ?

ಯಾವಾಗ ಅಜ್ಞಾನವೆಂಬುದು ಹೋಗುತ್ತದೆ,ಆಗ ಜ್ಞಾನವು ಲಭಿಸುತ್ತದೆ,ಈ ಅಜ್ಞಾನದವಿರುದ್ಧ ಹೋರಾಡಿದವನು ಬ್ರಾಹ್ಮಣನೆನಿಸಿದನು. ಇಲ್ಲಿ ಮತ್ತೆ ಜಾತಿ ಗಣನೆಗೆ ಬಾರದು.ಅವನ ಸ್ವಂತ ಯೋಗ್ಯತೆ, ಸಾಧನೆಯ ಮೇಲೆ ಅವನು ಬ್ರಾಹ್ಮಣನಾಗುತ್ತಾನೆ, ಅವನು ಯಾರ ಹೊಟ್ಟೆಯಲ್ಲಿ ಹುಟ್ಟಿದನೆಂಬುದು ಇಲ್ಲಿ ನಗಣ್ಯ. ಅವನು ಶ್ರಮ ವಹಿಸಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾನಾದ್ದರಿಂದ ಅವನು ಇಂಜಿನಿಯರ್, ಅಥವಾ ವೈದ್ಯಕೀಯ ಓದಿದ್ದರೆ ಡಾಕ್ಟರ್ ಅಥವಾ ಮತ್ಯಾರೋ.ಅವನು ಯಾರ ಮಗನೆಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಅಜ್ಞಾನದ ವಿರುದ್ಧವಾಗಿ ಇವನು ಹೋರಾಡುತ್ತಿದ್ದಾನಾದ್ದರಿಂದ ಇವನು ಬ್ರಾಹ್ಮಣ. ಇವನು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದರೇನು? ಅವನ ಹೆಸರು ಮಕಂದರ್ ಆದರೇನು? ಪೀರ್ಆದರೇನು? ಅವನು ಅವನ ಗುಣಕರ್ಮ ಸ್ವಭಾವದಿಂದ ಬ್ರಾಹ್ಮಣತ್ವ ಗಳಿಸಿದ್ದಾನಾದ್ದರಿಂದ ಅವನು ಬ್ರಾಹ್ಮಣ.ಅವರ ಅಪ್ಪ ಯಾರೂ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ.ಅವನ ಸಾಧನೆ ಏನು, ಅವನು ಸಮಾಜದ ಅಜ್ಞಾನ ಹೋಗಲಾಡಿಸಲು ಹೋರಾಡುತ್ತಿದ್ದರೆ, ಅವನು ಬ್ರಾಹ್ಮಣ.

--------------------------------------------------------

ಅನ್ಯಾಯ, ಅಭಾವ, ಆಲಸ್ಯ ಗಳ ವಿರುದ್ಧ ಹೋರಾಡುವವರ ಬಗ್ಗೆ ಮುಂದಿನ ಭಾಗದಲ್ಲಿ ಬರೆಯುವೆ.

Monday, July 13, 2009

ಮನದಾಳದ ಮಾತು

ಒಂದರೆಗಳಿಗೆ ನಮ್ಮ ರಾಜಕಾರಣಿಗಳು ತಾವು ರಾಜಕಾರಣಿಗಳಲ್ಲಾ,ಎಂದುಭಾವಿಸಲಿ; ಸಾಹಿತಿಗಳು ತಮ್ಮ ಪೂರ್ವಾಗ್ರಹ ಮರೆತು ಚಿಂತಿಸಲಿ, ಸರ್ಕಾರಿ ನೌಕರರು/ಅಧಿಕಾರಿಗಳು ಯಾರಿಗೂ ಅಂಜದೆ ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಲಿ, ನ್ಯಾಯವಾದಿಗಳು/ಪೋಲೀಸರು ತಮ್ಮ ಆತ್ಮಸಾಕ್ಷಿಯನ್ನು ನೆನಪು ಮಾಡಿಕೊಳ್ಳಲಿ.................. ಈಗ ತಾವು ರಾಜಕಾರಣಿ, ಸಾಹಿತಿ,ಇತ್ಯಾದಿ ಎಂಬುದನ್ನು ಮರೆತು ತಮ್ಮ ಕುಟುಂಬದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ.... ೧] ತಮ್ಮ ಕುಟುಂಬವು ಪರಿಪೂರ್ಣ ಆರೋಗ್ಯವಾಗಿ ನೆಮ್ಮದಿಯಿಂದ ಇದೆಯೇ? ೨] ಮಕ್ಕಳೊಡನೆ ಸಂತಸವಾಗಿದ್ದೇವೆಯೇ? ೩] ತಮ್ಮ ಮಕ್ಕಳು ನಿಜವಾಗಿಯೂ ಋಜುಮಾರ್ಗದಲ್ಲಿ ಸಾಗುತ್ತಿದ್ದಾರೆಯೇ? ನಮ್ಮ ಆತ್ಮಸಾಕ್ಷಿ ಏನು ನುಡಿದೀತು? ಎಲ್ಲವೂ ಉತ್ತಮ ವಾಗಿದೆ, ಎಂಬುವುದಾದರೆ ಈ ಬರಹವನ್ನು ಮುಂದೆ ಓದುವ ಅಗತ್ಯವಿಲ್ಲ. ಇಲ್ಲವೆಂದಾದರೆ........ ೧] ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಮ್ಮ ಸ್ಥಿತಿ ಹೀಗೇಕೆ? ೨] ನಮ್ಮ ಮೂಲ ಸಂಸ್ಕೃತಿ-ಪರಂಪರೆಗಳನ್ನು ಮರೆಯುತ್ತಾ ಬಂದ ಪರಿಣಾಮವೇ? ೩]ಆಧುನಿಕ ಶಿಕ್ಷಣದ ಅವಾಂತರವೇ? ೪] ವೈಜ್ಞಾನಿಕ ಅನ್ವೇಷಣೆಗಳ ಅತಿ ಅನುಭೋಗದ ಕಾಣಿಕೆಯೇ? ಹೌದೆಂದಾದರೆ ಪರಿಹಾರವೇನು? ಎಲ್ಲರೂ ಚಿಂತನ-ಮಂಥನ ನಡೆಸೋಣ. ಎಲ್ಲರ ಮನದಾಳದ ಮಾತುಗಳಿಗೆ ಅಕ್ಷರವನ್ನು ಕೊಡಿ.ಸ್ನೇಹ ಮಿಲನದಲ್ಲಿ ನಾವುಗಳು ಸೇರಿದಾಗ ಈ ಚಿಂತನೆಗಾಗಿ ಒಂದು ಗಂಟೆ ಅವಧಿಯನ್ನಾದರೂ ಮೀಸಲಿರಿಸಿ, ಬೆಂಗಳೂರಿನ ಯಾರಾದರೂ ಚಿಂತಕರನ್ನು ಕರೆಸಿ ಅವರು ನಮ್ಮೆಲ್ಲರ ಮನದಾಳದ ಮಾತುಗಳನ್ನು ಕ್ರೂಢೀಕರಿಸಿದರೆ ಒಂದು ಸೂತ್ರ ಹೊರಬಂದೀತು. ನೆನಪಿರಲಿ: ಒಂದರೆಗಳಿಗೆ ನಮ್ಮ ಪೂರ್ವಾಗ್ರಹ ಬದಿಗಿರಲಿ. ನಾವು ಮಕ್ಕಳಾಗೋಣ.ಮೆಚ್ಚುಗೆಗಾಗಿಯೂ ಬರೆಯುವುದು ಬೇಡ, ಚುಚ್ಚುವುದಂತೂ ಬೇಡವೇ ಬೇಡ. ನಮ್ಮ ಮಾತು ಬಿಚ್ಚುಮನಸ್ಸಿನಿಂದ ಮಕ್ಕಳ ತೊದಲು ಮಾತಿನಂತಿದ್ದರೂ ಚೆನ್ನ. [ಈ ವಿಚಾರದಲ್ಲಿ ಚಿಂತನ- ಮಂಥನ ನಡೆದರೆ ಒಳ್ಳೆಯದು ಎಂಬುದು ನನ್ನ ಅಭಿಮತವಷ್ಟೆ. ಆಗ್ರಹವಲ್ಲ] ಮನವಿ:- ಈ ಚುಟುಕು ಬರಹ ಚೆನ್ನಾಗಿದೆ,ಇತ್ಯಾದಿ ಮಾತುಗಳ ಬದಲು " ನಮ್ಮ ಸಮಾಜವು ಆರೋಗ್ಯಪೂರ್ಣ ವಾಗಬೇಕೆಂದರೆ ದಾರಿ ಯಾವುದು? ನಿಮ್ಮ ಮಾತಿನಲ್ಲಿ ತಿಳಿಸಿ

ಯಾವುದೋ ಹಳೆಯಪುಸ್ತಕ ಓದುತ್ತಿದ್ದೆ. ಅದರಲ್ಲಿದ್ದ ಒಂದು ಕಾಗದ ನನ್ನನ್ನು ಆಕರ್ಷಿಸಿತು.೧೯೪೫ ರಲ್ಲಿ ನಮ್ಮ ಸೋದರಮಾವ ನಮ್ಮ ತಾತನಿಗೆ ಬರೆದಿರುವ ಪತ್ರವದು. ಆ ಮೋಡಿ ಅಕ್ಷರವನ್ನು ಸಂಪದ ಓದುಗರಿಗೆ ತೋರಿಸ ಬೇಕೆನಿಸಿತು. ಫೋಟೋ ತೆಗೆದು ಅಪ್ ಲೋಡ್ ಮಾಡಿರುವೆ. ನನಗೆ ಅದರಲ್ಲಿ ಇನ್ನೂ ಹೆಚ್ಚು ಆಕರ್ಷಿಸಿದ್ದು-" ಇದು ನಾಜೂಕಿನ ಕಾಲ, ಮದುವೆಯನ್ನು ಒಂದೇ ದಿನ ಮಾಡಿದರೆ ಸಾಕು, ಹೊಳೇನರಸೀಪುರದಲ್ಲಾದರೆ ಖರ್ಚು ಜಾಸ್ತಿ, ಮಾವಿನಕೆರೆಯಲ್ಲಿ ಮಾಡೋಣ. ಬೆಳಿಗ್ಗೆಯೇ ವರಪೂಜೆ ಮಾಡಿಕೊಂಡು ಅಂದೇ ಮದುವೆ ಮಾಡಿ ಮುಗಿಸೋಣ" ಇದು ಕಾಗದದಲ್ಲಿ ನಾನು ಓದಿದ್ದು. ಚಿತ್ರವನ್ನು ದೊಡ್ದದು ಮಾಡಿಕೊಂಡು ಪೂರ್ಣ ಓದಬಹುದು.ಇಂದಿನ ಮದುವೆಯ ಸಂಬ್ರಮ, ಅದರಖರ್ಚು, ಎಲ್ಲವನ್ನೂ ನೋಡಿದರೆ, ಅಂದಿನ ಸ್ಥಿತಿ ಹೇಗಿತ್ತು! ನೋಡಿ. ನಮ್ಮ ಕಾಲದಲ್ಲಿ ಮದುವೆ ಎಂದರೆ ಒಂದ ವಾರ ನಡೆಯುವ ಕಾರ್ಯಕ್ರಮ ಎನ್ನುವವರೂ ಇದ್ದಾರೆ. ಆದರೆ ಈ ಕಾಗದ ಅಂದಿನ ಹಣಕಾಸಿನ ಮುಗ್ಗಟ್ಟಿಗೆ ಹಿಡಿದ ಕನ್ನಡಿಯಲ್ಲವೇ?

ಮಸ್ತಕದಲ್ಲೊಂದು ಸಂಕ್ರಮಣ

ಮಕರ ಸಂಕ್ರಾಂತಿಗೆ ಮುನ್ನಾದಿನವಾದ ಇಂದು ಸಂಪದದ ನನ್ನ ಮಿತ್ರರಿಗೆ ಶುಭಕೋರಬೇಕೆನ್ನುವ ಆಲೋಚನೆ ಬಂದಾಗ ಮಸ್ತಕದಲ್ಲೊಂದು ಸಂಕ್ರಮಣ ನಡೆದಿದೆ. ಕಾಟಾಚಾರಕ್ಕೆ ಶುಭ ಕೋರುವುದೇ? ಒಂದು ದಶಕಗಳಿಂದ ನಮ್ಮ ದೇಶದಲ್ಲಿ ಎಷ್ಟು ಅಲ್ಲೋಲ ಕಲ್ಲೋಲವಾಗುತ್ತಿದೆ! ಇತ್ತೀಚಿನ ಭಯೋತ್ಪಾದನೆಯ ಹೇಯ ಕೃತ್ಯವನ್ನಂತೂ ಮರೆಯಲು ಸಾಧ್ಯವಾಗುತ್ತಲೇ ಇಲ್ಲ.ಏಕೆ ಹೀಗೆ? ನಮ್ಮ ದೇಶಕ್ಕೆ ಏನಾಗಿದೆ? ಎಲ್ಲೋ ಏನೋ ತಪ್ಪಾಗಿದೆ. ಆಗ ನನ್ನ ಮನಸ್ಸಿನ ಪರದೆಯೆದುರು ಒಂದುಕಡೆ ಲಾರ್ಡ್ ಮೆಕಾಲೆ, ಜವಾಹರಲಾಲ್ ನೆಹರು, ಮಹಾತ್ಮ ಗಾಂಧೀಜಿ ಮತ್ತೊಂದು ಕಡೆ ಅನೇಕ ಕ್ರಾಂತಿ ಕಾರಿಗಳ ಚಿತ್ರಗಳು ಸುಳಿದಾಡುತ್ತವೆ! ಇದೇನು! ನನಗೇ ನಾಗಿದೆ ? ನನ್ನ ಮನದಲ್ಲಿ ಏನೋ ಕೋಲಾಹಲ!! ನನ್ನ ಮನಸ್ಸಿನ ಭಾವನೆಗಳನ್ನು ಸಂಪದಿಗರ ಮುಂದೆ ಬಿಚ್ಚಿಡುವ ಮನಸ್ಸಾಗುತ್ತದೆ.......... ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳಾಯ್ತು. ಸ್ವಾತಂತ್ರ್ಯ ಬಂದಾಗ ಹುಟ್ಟಿದ ಒಂದು ಮಗು ಬೆಳೆದು ದೊಡ್ದವನಾಗಿ ಒಂದು ಕುಟುಂಬದ ಯಜಮಾನನಾಗಿ , ಈಗ ವಾನಪ್ರಸ್ತಾಶ್ರಮದ ಕಡೆ ಸಾಗುವ ಪ್ರಯತ್ನದಲ್ಲಿದ್ದಾನೆ. ಆದರೆ ಇದೇ ಅವಧಿಯಲ್ಲಿ ನಮ್ಮ ದೇಶದ ಪ್ರಗತಿ ಏನು? ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಜನ ಪ್ರಾಣ ತೆತ್ತಿದ್ದಾರೆ! ಭಗತ್ಸಿಂಗ್,ಸಖದೇವ್, ರಾಜಗುರು, ಸಾವರ್ಕರ್, ಚಂದ್ರಶೇಖರ ಆಜಾದ್... ಇಂತಹ ಸಹಸ್ರಾರು ಜನ ದೇಶಭಕ್ತರು ತಮ್ಮ ಪ್ರಾಣವನ್ನು ಬಲಿಕೊಟ್ಟು ಗಳಿಸಿದ ಸ್ವಾತಂತ್ರ್ಯದ ಹಿಂದೆ ಅವರ ಗುರಿ ಏನಿತ್ತು? ಅವರ ಕನಸು ಏನಿತ್ತು? ದೇಶದ ಪ್ರಗತಿ ಎಂದರೆ ಏನು? ದೊಡ್ದ ದೊಡ್ದ ಕಾರ್ಖಾನೆಗಳೇ? ದೊಡ್ದ ದೊಡ್ದ ಕಟ್ಟಡಗಳೇ? ಜಲಾಶಯಗಳೇ? ರಸ್ತೆಗಳೇ? ....ಏನು? ಹಾಗಾದರೆ ನಮ್ಮ ರಾಷ್ಟ್ರದ ಆಂತರಿಕ ಪ್ರವಾಹ ಯಾವುದು? ಬೇರೆಲ್ಲಾ ರಾಷ್ಟ್ರಗಳಿಗಿಂತ ನಮ್ಮ ರಾಷ್ಟ್ರದ ಈ ಅಂತರ್ಪ್ರವಾಹವು ಬಹಳ ಬಿನ್ನವಾದುದು. ಇದರಮೂಲ ಋಷಿಗಳ ಪದತಲದಲ್ಲಿದೆ.ಆತ್ಮ ಚಿಂತನೆಯನ್ನು ಮಾಡುತ್ತಾ, ಇಂದ್ರಿಯಗಳನ್ನು ನಿಗ್ರಹಿಸಿ, ಸತ್ಯದಶೋಧನೆಗಾಗಿ ನೂರಾರು ವರ್ಷಗಳು ಸತತ ತಪಸ್ಸನ್ನಾಚರಿಸಿ ಸತ್ಯದ ಶೋಧನೆ ಮಾಡಿದರು, ಎಲ್ಲರಿಗೂತಿಳಿಸಿದರು, ಜಗತ್ತಿಗೇ ಒಳ್ಳೆಯದಾಗಲೀ ಎಂದು ಒಂದು ಜೀವನ ಕ್ರಮವನ್ನು ನಮಗೆ ಕೊಟ್ಟರು ಅದು " ಹಿಂದುಸಂಸ್ಕೃತಿ, ಸನಾತನ ಸಂಸ್ಕೃತಿ, ಋಷಿಸಂಸ್ಕೃತಿ," ಎಂದು ಕರೆಯಲ್ಪಟ್ಟಿತು. ಇಂತಹ ಒಂದು ಸಂಸ್ಕೃತಿಯು ನಮ್ಮ ದಾಗಿರುವುದರಿಂದ ನಮ್ಮ ಮೇಲೆ ಸಹಸ್ರಾರು ವರ್ಷಗಳು ಪರಕೀಯರ ಆಕ್ರಮಣ ನಡೆದರೂ ನಮ್ಮ ಅಂತರ್ಯದಲ್ಲಿ ಬೆಸೆದು ಹೋಗಿರುವ ನಮ್ಮ ಸಂಸ್ಕೃತಿಯನ್ನು ಯಾರಿಗೂ ನಾಷಮಾಡಲಾಗಲಿಲ್ಲ. ನಮ್ಮ ಮೇಲಿನ ದಾಳಿ ಕ್ರಿ.ಪೂ.೩೨೭ ರಲ್ಲೇ ಅಲೆಗ್ಸಾಂಡರಿನಿಂದಲೇ ಆರಂಭವಾಗಿದೆ. ಆದರೆ ಅವನ ಸೈನ್ಯವನ್ನು ನಮ್ಮ ದೇಶದ ಚಂದ್ರಗುಪ್ತ ಚಾಣಕ್ಯರು ೬-೭ ವರ್ಷಗಳ ಸತತ ಹೋರಾಟದಿಂದ ಹೊಡೆದಟ್ಟಿದರು. ಕ್ರಿ.ಶ. ಒಂದನೆಯ ಶತಮಾನದಲ್ಲಿ ಮಧ್ಯ ಏಶ್ಯಾದಿಂದ ಬಂದ ಹೂಣರು, ಶಕರೊಡನೆ ಇಲ್ಲಿನ ವಿಕ್ರಮಾದಿತ್ಯ, ಶಾಲಿವಾಹನರು ಹೋರಾಡಿದರು ಹೂಣರು, ಶಕರು ನಮ್ಮ ಸಂಸ್ಕೃತಿಯಲ್ಲಿ ಬೆರೆತು ಹೋದರು. ಆದರೆ ಕ್ರಿ.ಶ. ೭ ನೇ ಶತಮಾನದ ಪ್ರಾರಂಭದಲ್ಲಿ ಘಸ್ನಿ ಮಹಮದನಿಂದ ಶುರುವಾದ ಆಕ್ರಮಣ, ಮೊಗಲರು, ತುರ್ಕರು, ಪಾರಸಿಯರು ಮುಂತಾದವರಿಂದ ಸತತ ಒಂದು ಸಹಸ್ರ ವರ್ಷಗಳು ನಮ್ಮ ಮೇಲೆ ಧಾಳಿ ನಡೆಯಿತು. ಆಗೆಲ್ಲಾ ರಾಜಾಸ್ಥಾನದ ಮಹಾರಾಣಾ ಕುಂಭ, ರಾಣಪ್ರತಾಪಸಿಂಹ, ದಕ್ಷಿಣದಲ್ಲಿ ವಿಜಯನಗರದ ವಿದ್ಯಾರಣ್ಯರಿಂದ ಕೃಷ್ಣದೇವರಾಯನವರಗೆ, ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ, ಪಂಜಾಬಿನಲ್ಲಿ ಗುರುಗೋವಿಂದಸಿಂಹ, ಬಂದಾಬೈರಾಗಿ ಇವರೆಲ್ಲರ ಸತತ ಹೋರಾಟದ ಪ್ರಭಾವವು ಹೇಗಿತ್ತೆಂದರೆ ಮೊಹಮದ್ ಇಕ್ಬಾಲ್ ಹೇಳುತ್ತಾನೆ -"ಇಸ್ಲಾಮ್ ನೌಕೆಯು ಸಪ್ತ ಸಮುದ್ರವನ್ನು ದಾಟಿಬಂದರೂ ಈ ವಿಜಯಯಾತ್ರೆ ಭಾರತದ ಗಂಗೆಯ ಪ್ರವಾಹದಲ್ಲಿ ಮುಳುಗಿಹೋಯಿತು"ಆದರೂ ಆ ಸಮಯದಲ್ಲಿ ನಮ್ಮ ದೇಶದಲ್ಲಿ ದಾಳಿಕೊರರಿಂದ ಸ್ತ್ರೀಯರ ಮೇಲೆ ನಡೆದ ಅತ್ಯಾಚಾರ! ನಮ್ಮ ಸಂಪತ್ತಿನ ಲೂಟಿ !! ಅಬ್ಭಾ, ದಾಳಿಕೋರರ ಉಪಟಳ! ಮತಾಂತತರದ ಪರಾಕಾಷ್ಠೆ!! ಆನಂತರದ ದಾಳಿ ಬ್ರಿಟಿಷರದು. ಹದಿನೆಂಟನೆಯ ಶತಮಾನದ ಆದಿಯಲ್ಲಿ ತಕ್ಕಡಿ ಹಿಡಿದು ಕಾಲಿಟ್ಟ ಬ್ರಿಟಿಷರು ಕೊನೆಗೆ ಎರಡು ಶತಮಾನಗಳು ನಮ್ಮನ್ನಾಳಿದರು.ಆದರೆ ಆಗ ನಾವು ಸಾಂಸ್ಕೃತಿಕವಾಗಿ ಎಷ್ಟು ಸಮೃದ್ಧವಾಗಿದ್ದೆವೆಂದರೆ ೧೮೩೫ ರ ಫೆಬ್ರವರಿ ೨ ರಂದು ಲಾರ್ಡ್ ಮೆಕಾಲೆಯು ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣ ವನ್ನು ಗಮನಿಸಬೇಕು-" ನಾನು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ, ನಾನುಒಬ್ಬ ಬಿಕ್ಷುಕನನ್ನು ನೋಡಲಿಲ್ಲ, ಒಬ್ಬ ಕಳ್ಳನನ್ನು ನೋಡಲಿಲ್ಲ,. ಭಾರತವು ಸಂಪದ್ಭರಿತವಾಗಿದೆ. ಭಾರತೀಯರನೈತಿಕತೆಯು ಅತ್ಯಂತ ಶ್ರೇಷ್ಠವಾದ ಮಟ್ಟದ್ದು, ಆದ್ದರಿಂದ ಭಾರತೀಯರ ನೈತಿಕ ಶಕ್ತಿಗೆ ಬೆನ್ನೆಲುಬಾಗಿರುವುದುಭಾರತದ ಅಂತ: ಶಕ್ತಿ, ಅಲ್ಲಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಪರಂಪರೆ. ಈ ಅಂತ:ಶಕ್ತಿಯನ್ನು ನಮ್ಮ ಆಂಗ್ಲಶಿಕ್ಷಣದಿಂದ ನಾಶ ಪಡಿಸಿ ಇಂಗ್ಳೀಶ್ ಶಿಕ್ಷಣದ ವ್ಯಾಮೋಹವನ್ನು ಎಷ್ಟರ ಮಟ್ಟಿಗೆ ಬೆಳೆಸ ಬೇಕೆಂದರೆ ಭಾರತದಸಂಸ್ಕೃತಿಯ ಬಗ್ಗೆ ಅಲ್ಲಿನ ಪರಂಪರೆಯ ಬಗ್ಗೆ ಅವರಿಗೆ ತಿರಸ್ಕಾರ ಬರಬೇಕು, ಆಗಮಾತ್ರ ನಾವು ಆಳಲು ಅವರನ್ನುಸಾಧ್ಯ." ಬ್ರಿಟಿಶರು ಈ ಒಂದು ಪ್ರಯತ್ನದಲ್ಲಿ ಎಷ್ಟು ಸಫಲರಾದರೆಂದರೆ ಅವರ ಶಿಕ್ಷಣದ ಮೂಲಕ ಒಂದು ಬುದ್ಧಿವಂತವರ್ಗವನ್ನು ಇಲ್ಲಿಯೇ ಸೃಷ್ಟಿಸಿ, ಅವರ ಮೂಲಕವೇ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವ, ಪಾಷ್ಚಿಮಾತ್ಯ ಸಂಸ್ಕೃತಿಯೆಂದರೆ ಶ್ರೇಷ್ಠವೆಂದು ಭ್ರಮಿಸುವಂತೆ ಮಾಡಿ, ಕೊನೆಗೆ ಯಾವ ಹಂತವನ್ನು ನಾವು ತಲುಪಿದೆ ವೆಂದರೆ ಮೆಕಾಲೆ ಹೇಳಿದಂತೆ " ಚರ್ಮ ಮಾತ್ರ ಭಾರತೀಯರದಾಗಿರಬೇಕು, ಆದರೆ ಒಳಗೆಲ್ಲಾ ಇಂಗ್ಳೀಶ್ ಮಯವಾಗಿಬಿಡಬೇಕು,". ಈಗಲೂ ಮೆಕಲೆ ಅನುಯಾಯಿಗಳು ಮಾಡುತ್ತಿರುವ ಕೆಲಸ ಇದನ್ನೇ..... ಆದರೆ ಭಾರತಮಾತೆ ಬಂಜೆಯಲ್ಲ.ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಜಾಗೃತಿಯ ಪರ್ವ ಆರಂಭವಾಯ್ತು. ಪಂಜಾಬಿನಲ್ಲಿ ದಯನಂದ ಸರಸ್ವತಿಯವರ ಆರ್ಯಸಮಾಜ, ರಾಮಕೃಷ್ಣಪರಮಹಂಸರು, ಸ್ವಾಮಿ ರಾಮತೀರ್ಥರು, ರಮಣ ಮಹರ್ಷಿಗಳು, ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಜಾಗೃತಿಯನ್ನುಂಟುಮಾಡಿದರೆ, ಬಂಗಾಳದ ಬಂಕಿಮಚಂದ್ರ ಚಟರ್ಜಿ ವಂದೇ ಮಾತರಮ್ ಮೂಲಕ ರಾಷ್ಟ್ರ ಜಾಗೃತಿಯನ್ನುಂಟುಮಾಡಿದರು.ವಾಸುದೇವ ಬಲವಂತ ಫಡಕೆ, ವೀರಸಾವರ್ಕರ್, ಚಂದ್ರಶೇಖರ ಆಜಾದ್, ರಾಸ ಬಿಹಾರಿ ಬೋಸ್. ಲಾಲ್ -ಬಾಲ್ -ಪಾಲ್. ಅರವಿಂದ ಘೋಷ್ ,ಭಗತ್ ಸಿಂಗ್, ಮುಂತಾದವರ ಹೋರಾಟದ ಪರಿಣಾಮ ಮುಂದೆ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ತಳಹದಿಯಾಯ್ತು. ಅಂತೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಹಿನ್ನೆಲೆಯನ್ನು ಗಮನಿಸಬೆಕು, ಅದು ಪುಕ್ಕಟೆ ಬರಲಿಲ್ಲ ಸಹಸ್ರಾರು ದೇಶಭಕ್ತರ ಬೆವರು-ನೆತ್ತರಿನ ಫಲ ನಮ್ಮ ದೇಶದ ಸ್ವಾತಂತ್ರ್ಯ. ಆದರೆ ಈಗ ನಡೆದಿರುವುದೇನು? ಗ್ರಾಮರಾಜ್ಯ-ರಾಮರಾಜ್ಯ ಬಯಸಿದ್ದ ಗಾಂಧೀಜಿಯವರ ಕನಸು ನನಸಾಯಿತೇ? ಅಂದು ನೆಹರು ಮಾಡಿದ ಒಂದು ತಪ್ಪಿನ ಘೋರ ಪರಿಣಾಮ ಎಷ್ಟು ಗೊತ್ತೇ? ನಮ್ಮ ಪರಂಪರೆ ನೆಲೆಸಿರುವುದು ಹಳ್ಳಿಗಳಲ್ಲಿ, ಎಂಬ ಸತ್ಯವನ್ನು ಮರೆತು ಯಂತ್ರಗಳಿಂದ ದೇಶದ ಪ್ರಗತಿಯಾಗುತ್ತದೆಂಬ ಭ್ರಮೆಯಲ್ಲಿ ಕೈಗಾರಿಕೆಗಳನ್ನು ಹುಟ್ಟುಹಾಕಿದ ಪರಿಣಾಮವಾಗಿ ಇಂದು ನಮ್ಮ ಪಾರಂಪರಿಕ ಕಸುಬುಗಳಾದ ಕುಂಬಾರಿಕೆ, ಬಡಗಿ ವೃತ್ತಿ, ಚಮ್ಮಾರಿಕೆ , ಮಡಿವಾಳಿಕೆ, ಮುಂತಾದ ಹಲವು ವೃತ್ತಿಗಳು ಕಣ್ಮರೆ ಯಾದವು. ಎಲ್ಲಕ್ಕೂ ಯಂತ್ರಗಳು. ದೊಡ್ದ ದೊಡ್ದ ಕೈಗಾರಿಕೆಗಳು. ಗುಡಿಕೈಗಾರಿಕೆಗಳು ಮಾಯವಾದವು. ನಮ್ಮ ಸಾಂಸ್ಕೃತಿಕ ನೆಲಗಟ್ಟನ್ನು ಸಂಪೂರ್ಣ ದಿಕ್ಕರಿಸಲಾಯ್ತು. ಕೃಷಿ ಕ್ಷೇತ್ರದಲ್ಲಂತೂ ನಮ್ಮ ಪಾರಂಪರಿಕ ಪದ್ದತಿಗಳನ್ನು ಬಿಟ್ಟು ಹೆಚ್ಚು ಹೆಚ್ಚು ಆಹಾರ ಉತ್ಪಾದನೆಯ ಹೆಸರಲ್ಲಿ ಭೂಮಿಗೆ ವಿಷವನ್ನು ಬಿತ್ತಲಾಯ್ತು. ನಾಡಹಸುಗಳು ಮಾಯವಾಗಿ ಹೆಚ್ಚು ಹಾಲು ಕೊಡುವ ವಿದೇಶೀ ತಳಿಗಳು ಕಾಣಿಸಿ ಕೊಂಡವು. ಭೂಮಿಯನ್ನು ಉಳಲು ಯಂತ್ರಗಳು ಬಂದವು. ಅದರಿಂದ ಆಹಾರದ ಮೇಲಾಗಿರುವ ದುಷ್ಪರಿಣಾಮಗಳು ಸರ್ವ ವೇದ್ಯ. ಅಂತೂ ಸ್ವಾತಂತ್ರ್ಯ ಬಂದು ಆರು ದಶಕಳಾಗಿದ್ದರೂ ನಮ್ಮ ತನದಲ್ಲಿ, ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವುದರಲ್ಲಿ ನಾವು ಸೋತಿದ್ದೇವೆ. ನಮ್ಮ ಪಾರಂಪರಿಕವಾದ ಯೋಗ, ವೇದ, ಸಂಗೀತ, ನೃತ್ಯ,ಕಲೆ, ಮುಂತಾದ ವಿದ್ಯೆಯನ್ನು ಕಲಿಯಲು ಪಾಶ್ಚಿಮಾತ್ಯರು ಹಾತೊರೆಯುತ್ತಿರುವಾಗ ನಮ್ಮದೇಶದಲ್ಲಿರುವ ಮೆಕಾಲೆ ಸಂಜಾತರು ಪ್ರಗತಿಯೆಂದರೆ ಪಾಶ್ಚಿಮಾತ್ಯ ದೇಶಗಳ ಕಡೆ ಬೆರಳು ತೋರಿಸುವುದನ್ನು ನಿಲ್ಲಿಸಿಯೇ ಇಲ್ಲ. ನಮ್ಮ ಮೇಲಿನ ಸಾಂಸ್ಕೃತಿಕ ಧಾಳಿ ಈಗಲೂ ಸಾಗಿದೆ. ಸಿನೆಮಾ, ದೂರದರ್ಶನ ಮಾಧ್ಯಮಗಳಲ್ಲಿ ನಮ್ಮ ಸಂಸ್ಕೃತಿಯನ್ನು ಹೀಗಳೆಯುವ ಕಾರ್ಯಕ್ರಮಗಳು, ಸ್ವೇಚ್ಛಾಚಾರದ ಕುಣಿತದ ದೃಶ್ಯಗಳು ಮನಬಂದಂತೆ ನಡೆಯುತ್ತಿದ್ದು ನಮ್ಮ ಯುವ ಪೀಳಿಗೆಯಮೇಲೆ ಅತ್ಯಂತ ಅನಾರೋಗ್ಯಕರ ಪರಿಣಾಮ ಬೀರಿದೆ. ಸಮಾಜದ ಹಾಗೂ ವ್ಯಕ್ತಿಯ ಆರೋಗ್ಯ ಕೆಡುತ್ತಲೇ ಇದೆ. ನಾವು ಇಂದೂ ಯಾವುದೋ ಭ್ರಮಾ ಲೋಕದಲ್ಲಿಯೇ ವಿಹರಿಸುತ್ತಿದ್ದೇವೆ. ಸಂಕ್ರಾಂತಿ ಬಂದಿದೆ. ಸೂರ್ಯನೇನೋ ದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತ ಭೊಮಿಗೆ ಹಗಲು ಹೆಚ್ಚು ಮಾಡುತ್ತಾನೆ. ಕತ್ತಲೆ ಕಡಿಮೆಯಾಗಿ ಬೆಳಕು ಹೆಚ್ಚುತ್ತಾ ಹೋಗುವ ಈ ಸಂಕ್ರಮಣ ಕಾಲದಲ್ಲಿ ನಮ್ಮೊಳಗಿನ ಆರಿವಿನ ಬೆಳಕು ಪ್ರಜ್ವಲಿಸಬೇಕು. ದೇಶವು ಸತ್ಯಪಥದಲ್ಲಿ ಸಾಗುತ್ತಾ ಮತ್ತೊಮ್ಮೆ ನಮ್ಮ ಸಂಸ್ಕೃತಿ ಪರಂಪರೆಗಳಿಂದ ವಿಶ್ವದ ಮುಂದೆ ಪ್ರಜ್ವಲಿಸುತ್ತಾ ತಲೆ ಎತ್ತಿ ನಿಲ್ಲುವಂತಾಗಲೆಂಬುದು ಭಗವಂತನಲ್ಲಿ ನನ್ನ ಪ್ರಾರ್ಥನೆ.ಸಂಪದದ ಎಲ್ಲಾ ನನ್ನ ಮಿತ್ರರಿಗೂ ಸಂಕ್ರಾಂತಿಯ ಶುಭಾಷಯಗಳು.

ಮಂಗಲ ದ್ರವ್ಯಗಳ ಪಾವಿತ್ರ್ಯ

ನಮ್ಮಲ್ಲೆಲ್ಲಾ ಒಂದು ಸಂಪ್ರದಾಯ ಬೆಳೆದು ಬಂದಿದೆ. ಮನೆಗೆ ಮುತ್ತೈದೆ ಬಂದರೆ ಅವರಿಗೆ ಒಂದು ರವಿಕೆ ಪೀಸ್, ಹೂವು, ಅರಿಶಿನ-ಕುಂಕುಮದ ಒಂದು ಪ್ಯಾಕೆಟ್, ಕೆಂಪು ಅಥವಾ ಹಸಿರು ಬಣ್ಣದ ಗಾಜಿನ ಬಳೆಗಳನ್ನು ಕೊಡುವ ಪದ್ದತಿ.ಆದರೆ ತುಂಬಾ ಜನ ಮುತ್ತೈದೆಯರಿಗೆ ಇದು ವೇಸ್ಟ್. ಮನೆಗೆ ತೆಗೆದುಕೊಂಡು ಹೋಗಿ ಒಂದುಕಡೆ ಇಡದೆ ಗತ್ಯಂತರವಿಲ್ಲ. ಅದೇರೀತಿ ದೇವಾಲಯಗಳ ಪ್ರಸಾದದಗತಿ ಕೂಡ. ಯಾವುದನ್ನು ಅತ್ಯಂತ ಪವಿತ್ರವೆಂದು ನಾವು ಭಾವಿಸುತ್ತೇವೋ ಅದಕ್ಕೆ ನಾವು ಕೊಡುತ್ತಿರುವ ಮಹತ್ವ ವೆಷ್ಟು? ಈ ಬಗೆಗೆ ಒಂದು ಚಿಂತನೆ. ಮನೆಯಲ್ಲಿ ಎಲ್ಲೆಂದರಲ್ಲಿ ಅರಿಶಿನ ಕುಂಕುಮದ ಪ್ಯಾಕೆಟ್ ಗಳು, ಗಾಜಿನ ಬಳೆಗಳು, ರವಿಕೆಪೀಸ್ ಗಳು,ದೇವಾಲಯಗಳಿಂದ ತಂದ ಹೂವು-ಕುಂಕುಮ ಪ್ರಸಾದಗಳು ಎಲ್ಲೆಂದರಲ್ಲಿ ಚಲ್ಲಾಟ. ಯಾವುದಾದರೂ ಪುಣ್ಯಕ್ಷೇತ್ರಗಳಿಂದಲೋ ದೇವಾಲಯಗಳಿಂದಲೋ ಬಂದರೆ ತೆಂಗಿನಕಾಯಿಗಳ ಹೋಳುಗಳು, ಬಾಳೆಹಣ್ಣುಗಳು, ಧರ್ಮಸ್ಥಳ, ಹೊರನಾಡು ಗಳಿಗೆ ಹೋಗಿಬಂದರೆ ಸಾಕು, ಅಲ್ಲಿಯ ಪ್ರಸಾದಗಳು!! ಅಬ್ಭಾ!! ಯಾಕಾದರೂ ಇಷ್ಟೊಂದು ಪ್ರಸಾದ ಕೊಡುತ್ತಾರೆಯೋ!! ಇನ್ನು ನಮ್ಮ ಬಂಧುಗಳಲ್ಲಿ ಕಾಶಿಯಾತ್ರೆ ಮಾಡಿಬಂದರೆ ಸಾಕು ಅವರು ಯಾವುದಾದರೊಂದು ದೇವರ ವಿಗ್ರಹ ಕೊಡುವುದು ಗ್ಯಾರಂಟಿ. ಎಷ್ಟು ಅಂತಾ ದೇವರವಿಗ್ರಹ ಇಟ್ಟುಕೊಳ್ಳುವುದು? ಇನ್ನು ದೇವರ ಚಿತ್ರವಿರುವ ಪ್ಲಾಸ್ಟಿಕ್ ಕವರ್ ಗಳು, ಇನ್ವಿಟೇಶನ್ ಗಳು!!ಅಕ್ಕಿ ಚೀಲದ ಮೇಲೆ ಗಣಪತಿ, ದುರ್ಗಿ,ಓಂಕಾರ ಚಿತ್ರಗಳು.ಇವುಗಳ ವಿಲೇವಾರಿ ಮಾಡುವುದಾದರೂ ಹೇಗೆ? ನಮ್ಮ ಶ್ರದ್ಧೆಯ ಕೆಲವು ಅಂಶಗಳನ್ನು ಅವುಗಳ ಪಾವಿತ್ರ್ಯದ ಕಡೆ ಗಮನ ಹರಿಸದೆ ಎಲ್ಲೆಂದರಲ್ಲಿ ಕಂಡಾಗ ನನಗೆ ನಿಜವಾಗಿ ಮನಸ್ಸಿಗೆ ಖೇದ ಉಂಟಾಗುತ್ತದೆ." title="<--break-->" class="mce_plugin_drupalbreak_break" width="100%" height="12"> ನಮ್ಮ ಮನೆಯಲ್ಲಂತೂ ಇದೇ ವಿಚಾರಕ್ಕೆ ಪತ್ನಿಯೊಡನೆ ಮುನಿಸು. ಪತ್ನಿಗಂತೂ ಅತಿಯಾದ ಭಕ್ತಿ. ಧಾರ್ಮಿಕ ಆಚರಣೆಗೆ ತುಂಬಾ ಮಹತ್ವ ಕೊಡುವ ಆಕೆ , ಅವಳಿಂದಾದ ಪಾವಿತ್ರ್ಯದ ಲೋಪದ ಬಗೆಗೆ ತಲೆ ಕೆಡಸಿಕೊಳ್ಳುವುದೇ ಇಲ್ಲ. ಯಾವುದೂ ಅತಿಯಾದಾಗ ನನ್ನ ದೃಷ್ಟಿಯಲ್ಲಿ ಅದು ಕೊಳಕಿಗೆ ದಾರಿ ಮಾಡುತ್ತದೆ. ದೇವರ ಪ್ರಸಾದವಾದರೇನು, ಅದರ ಸಮಯ ಮೀರಿದರೆ ಅದು ಕೆಡಲೇ ಬೇಕಲ್ಲವೇ? ಪುಣ್ಯಕ್ಶೇತ್ರಗಳಿಂದ ತಂದ ಪ್ರಸಾದವೆಂದು ಮುಗ್ಗಲು ವಾಸನೆ ಬರುತ್ತಿರುವ ಪ್ರಸಾದ ಕೈಗಿತ್ತಾಗ ಏನು ಮಾಡಬೇಕು?! ಕಣ್ಣು ಮುಚ್ಚಿ ಬಾಯಿಗೆ ಹಾಕಿಕೊಳ್ಳಬೇಕಂತೆ! ಇಂತಹ ಅಂಧಶ್ರದ್ಧೆಗೆ ಏನೆನ್ನ ಬೇಕು? ಕೆಲವರ ಮನೆಯಲ್ಲಿರುವ ಪೂಜಾಗೃಹದಲ್ಲಿರುವ ಫೋಟೋ ಮತ್ತು ವಿಗ್ರಹಗಳಮೇಲೆ ಕುಂಕುಮ -ಅರಿಶಿನ ಮುಚ್ಚಿ ಹೋಗಿರುವುದನ್ನು ನೋಡಿದ್ದೇನೆ. ಪೂಜಾಗೃಹದಲ್ಲಿ ಅಗರಬತ್ತಿಯ ಹೊಗೆಯಿಂದ, ದೀಪದ ಎಣ್ಣೆಯು ಚೆಲ್ಲಿರುವುದರಿಂದ, ಮಂಗಳದ್ರವ್ಯಗಳ ಚೆಲ್ಲಾಟದಿಂದ, ಕರ್ಪೂರದ ಹೊಗೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನೂ ಗಮನಿಸಬೇಕು. ನಿಮ್ಮ ಮನೆಯಲ್ಲಿ ಹೀಗಾಗಿಲ್ಲವೇ?

ಕುಟುಂಬ ಮಿಲನ"

೨೪.೧.೨೦೦೯ ಶನಿವಾರ ಮತ್ತು ೨೫.೧.೨೦೦೯ ಭಾನುವಾರಗಳಂದು ಹಾಸನದ ನನ್ನ ಮಿತ್ರ ಅನಂತನಾರಾಯಣ ಇವರ ಮನೆಯಲ್ಲಿ ಒಂದು ವಿಶಿಷ್ಠ ಕಾರ್ಯಕ್ರಮ.ಹೆಸರು" ಕುಟುಂಬ ಮಿಲನ". ಅವರ ಬಂಧು ಬಾಂಧವರನ್ನೆಲ್ಲಾ ಅಂದು ಹಾಸನದ ಸಮೀಪ ಇರುವ ಕೌಶಿಕ ಗ್ರಾಮದಲ್ಲಿ ಸೇರಿಸುತ್ತಾರೆ.ಇದು ಐದನೆಯ ವರ್ಷದ ಕಾರ್ಯಕ್ರಮ. ಸುಮಾರು ೧೦೦ ರಿಂದ ೧೫೦ ಜನ ಬಂಧುಗಳು ಒಟ್ಟಾಗಿ ಸೇರುತ್ತಾರೆ.ಭಾವನಾತ್ಮಕವಾಗಿ ಒಂದಿಷ್ಟು ಚಿಂತನ-ಮಂಥನ ನಡೆಸುತ್ತಾರೆ. ನಮ್ಮ ಮನೆಗಳಲ್ಲಿ ಉತ್ತಮ ಜೀನಕ್ಕಾಗಿ ಏನೇನು ಪರಿವರ್ತನೆಗಳನ್ನು ಮಾಡಿಕೊಳ್ಳಬಹುದೆಂದು ಮುಕ್ತವಾಗಿ ಚಿಂತನೆ ನಡೆಸುತ್ತಾರೆ. ಯಾರಾದರೂ ಹಿರಿಯರು ಮಾರ್ಗದರ್ಶನ ಮಾಡುತ್ತಾರೆ.ನಶಿಸಿ ಹೋಗುತ್ತಿರುವ ನಮ್ಮ ಕೌಟುಂಬಿಕ ವ್ಯವಸ್ಥೆಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಪುನಶ್ಚೇತನವನ್ನೇದರೂ ಕೊಡಬಹುದೇನೋ, ಅ ಕಾರ್ಯಕ್ರಮಕ್ಕೆ ನನ್ನನ್ನೂ ಆಮಂತ್ರಿಸಿದ್ದಾರೆ. ಅದರೆ ನಾನು ಅದೇ ದಿನ ಶಿರಡಿಗೆ ಹೋಗುವವನಿದ್ದೇನೆ. ನನಗೆ ಆ ಕಾರ್ಯಕ್ರಮ ತಪ್ಪುತ್ತಿದೆ.ನಮ್ಮ ಸಂಪದ ಮಿತ್ರರಿಗೆ ಈ ಕಾರ್ಯಕ್ರಮವು ಕಿಂಚಿತ್ ಪ್ರೇರಣೆ ನೀಡಬಹುದೇನೋ ಎಂದು ಈ ಒಂದು ಚುಟುಕು ಬರಬ ಮಾಡಿರುವೆ. ಚಿತ್ರವನ್ನು ದೊಡ್ದದು ಮಾಡಿಕೊಂಡು ಓದಿದರೆ ಅಲ್ಲಿ ಪ್ರೇರಣಾ ದಾಯಕ ಅಂಶಗಳಿವೆ.

ಯಾಕೆ ಕಾರಣ ವಿಲ್ಲದೆ ಬೇಜಾರಾಗುತ್ತದಲ್ಲ?

ಯಾಕೆ ಕಾರಣ ವಿಲ್ಲದೆ ಬೇಜಾರಾಗುತ್ತದಲ್ಲ? ಇದ್ದಕ್ಕಿದ್ದಂತೆ ಮನಸ್ಸಿಗೆ ನೋವಾಗುತ್ತದಲ್ಲ? ಈ ಪ್ರಶ್ನೆಯನ್ನು ಗುರುಗಳಿಗೆ ಶಿಷ್ಯನೊಬ್ಬ ಕೇಳಿದ. ಗುರುಗಳು ಹೇಳಿದರು: ಯಾವಾಗ ಇತರರಲ್ಲಿ ಹೀಗಾಗಬೇಕು ಅಂತಾ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತೇವೆಯೋ ಆಗ ಮನಸ್ಸಿಗೆ ಬೇಸರವೂ ಆಗುತ್ತೆ, ನೋವೂ ಆಗುತ್ತೆ. ಆದ್ದರಿಂದ ಬೇರೆಯವರಿಂದ ಹೀಗೇ ಆಗಬೇಕು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳುವುದೇ ನಾವು ಮಾಡುವ ಮೊದಲ ತಪ್ಪು. ಮನೆಯಲ್ಲಿ ಪತಿಯಿಂದ ಪತ್ನಿ, ಮಕ್ಕಳಿಂದ ತಂದೆತಾಯಿ....ಹೀಗೆ ಯಾರಿಂದ ಯಾರೇ ಆಗಲೀ ನಿರೀಕ್ಷೆಯನ್ನು ಇಟ್ಟುಕೊಂಡಾಗ ಹೀಗಾಗುತ್ತೆ. ನಿಮಗೆ ಸರಿ ಅನಿಸಿದ್ದನ್ನು ನಿಮ್ಮ ಮಕ್ಕಳು, ಪತ್ನಿ ಮಾಡಲಿ, ಎಂದು ನೀವು ನಿರೀಕ್ಷಿಸುತ್ತೀರಿ. ಅದು ಅವರ ದೃಷ್ಟಿಯಲ್ಲಿ ಸರಿ ಇರದೆಯೂ ಇರಬಹುದು.ನಿಮ್ಮ ದೃಷ್ಟಿಕೋನದಂತೆ ಇತರರೂ ಇರಬೇಕೆಂಬುದೇ ತಪ್ಪು. ನೀವು ನಿರೀಕ್ಷೆ ಇಟ್ಟುಕೊಂಡಾಗ ಮಾತ್ರ ಅದು ಆಗದಿದ್ದಾಗ ನಿಮ್ಮ ಮನದೊಳಗೆ ಯುದ್ಧ ಶುರುವಾಗುತ್ತದೆ –“ ಅಯ್ಯೋ ನಾನು ಇಷ್ಟು ಒಳ್ಳೆಯ ವಿಚಾರ ಹೇಳಿದಾಗಲೂ ಮನೆಯವರು ಕೇಳಲಿಲ್ಲವಲ್ಲಾ!” ಎಂಬ ನೋವು ನಿಮ್ಮನ್ನು ಕಾಡುತ್ತದೆ. ನಿಮ್ಮಂತೆ ಅವರ ಚಿಂತನೆ ಇಲ್ಲದಿದ್ದಾಗ ಅವರ-ನಿಮ್ಮ ನಡುವೆ ಬಿನ್ನಾಭಿಪ್ರಾಯು ಉಂಟಾಗುತ್ತದೆ.ಅದರ ಪರಿಣಾಮ ಎಷ್ಟು ಘೋರವಾಗಿರುತ್ತದೆ ಎಂದರೆ ನೀವು ಯಾವ ಒಳ್ಳೆಯ ಉದ್ದೇಶದಿಂದ ನಿಮ್ಮ ಪತ್ನಿ/ಪತಿ/ಮಕ್ಕಳಲ್ಲಿ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತೀರೋ ಅದು ಈಡೇರದ ಪರಿಣಾಮವನ್ನು ನೀವು ಸಹಿಸಲು ಅಸಮರ್ಥರಾಗಿರುತ್ತೀರಿ. ನಿಮ್ಮ ಮನಸ್ಸು ವ್ಯಗ್ರವಾಗಿರುತ್ತದೆ. ನೀವು ನೀವಾಗಿರುವುದೇ ಇಲ್ಲ. ಒಂದು ಚಿಕ್ಕ ಘಟನೆ ಕೇಳಿ. - ಒಬ್ಬ ವ್ಯಕ್ತಿಯು ಮರವೊಂದನ್ನು ತಬ್ಬಿಕೊಂಡು , ಕೂಗಾಡಲು ಶುರು ಮಾಡಿದ ನಂತೆ “ ಯಾರಾದರೂ ಬಂದು ಸಹಾಯ ಮಾಡಿ , ಈ ಮರವು ನನ್ನನ್ನು ಬಿಡುತ್ತಲೇ ಇಲ್ಲಾ!!” ನಮ್ಮ ಕಥೆಯೂ ಹಾಗೆಯೇ, ನಾವು ಸಂಸಾರವೆಂಬ ಮರವನ್ನು ತಬ್ಬಿಕೊಂಡು ಅದು ನಮ್ಮನ್ನು ಬಿಡುತ್ತಿಲ್ಲವೆಂದರೆ ಆಗುತ್ತದೆಯೇ? ನಾವೇ ಬಿಡಬೇಕು. ಬಿಡುಗಡೆಯತ್ತ ನಾವು ಸಾಗಬೇಕು. ಯಾವುದೇ ವಿಷಯವನ್ನು ಅಂಟಿಸಿಕೊಂಡಿದ್ದಾಗ ನಲಿವಿಗಿಂತ ನೋವೇ ಹೆಚ್ಚು. ಆದರೆ ಅಂಟಿಸಿಕೊಳ್ಳದಿದ್ದರೆ ನೋವೂ ಇಲ್ಲ. ನಲಿವೂ ಇಲ್ಲ. ಈ ಸ್ಥಿತಿಗೆ ನೀವು ಏನು ಬೇಕಾದರೂ ಕರೆಯಿರಿ…..

ನಮ್ಮ ಸಂಸ್ಕೃತಿ-ಪರಂಪರೆಗಳೇ ನಮಗೆ ಶ್ರೀರಕ್ಷೆ

[ಹೊಳೇನರಸೀಪುರದಲ್ಲಿನ ಶ್ರೀ ಲಕ್ಷ್ಮೀನರಸಿಂಹ ವಿದ್ಯಾಮಂದಿರವು ಎರಡು ದಶಕಗಳ ಹಿಂದೆ ಆರಂಭವಾದ ಕೆಲವು ಗೆಳೆಯರ ಆಶಯದ ಕೂಸು. ನಾವು ಗೆಳೆಯರು ನೆಟ್ಟ ಸಸಿ ಫಲಕೊಡಲು ಆರಂಭಿಸಿದೆ. ಅದೇ ಸಂತಸದಲ್ಲಿ ಶಾಲೆಯ ಒಂದು ಸ್ಮರಣ ಸಂಚಿಕೆ ಹೊರ ಬರುತ್ತಿದೆ. ಶಾಲೆಯ ಆರಂಭದಲ್ಲಿದ್ದ ನಾನು ಸಸಿ ನೆಡುವಾಗಷ್ಟೇ ಇದ್ದೆ. ಆಮೇಲೆಲ್ಲಾ ಮರವಾಗಿ ಬೆಳೆಸಿದವರು ನೂರಾರು ಮಂದಿ ಸಹೃದಯಿಗಳು. ಆದರೂ ಸಂಚಿಕೆಗಾಗಿ ನನ್ನ ಎರಡು ಮಾತು ಬರೆದಿರುವೆ. ಸಂಪದಿಗರಲ್ಲೂ ಅದನ್ನೇ ಹಂಚಿಕೊಂಡಿರುವೆ] ನನ್ನ ಮಗನ ಉಪನಯನದ ಸಂದರ್ಭ. ಆಮಂತ್ರಣಹಿಡಿದು ಪತ್ನಿಸಮೇತ ಹಾಸನ ನಗರದ ನನ್ನ ಬಂಧು-ಮಿತ್ರರನ್ನು ಕರೆಯಲು ಹೊರಟಿದ್ದೆ.ಒಂದು ಮನೆ ಬಾಗಿಲು ತಟ್ಟುತ್ತೇವೆ.ಐದು ನಿಮಿಷವಾದರೂ ಬಾಗಿಲು ತೆರೆಯಲಿಲ್ಲ.ಕರೆಗಂಟೆ ಒತ್ತುತ್ತೇವೆ. ಅದು ಶಬ್ಧಮಾಡಿತೋ ಇಲ್ಲವೋ ತಿಳಿಯಲಿಲ್ಲ. ಒಳಗಿನಿಂದ ಮಾತು ಕೇಳಿ ಬಂತು-“ ಗೀತಾ,ಯಾರೋ ಬಾಗಿಲು ತಟ್ಟುತ್ತಿದ್ದಾರೆ.ಬಾಗಿಲು ತೆಗೆ.” ಉಹೂ…ತೆರೆಯಲಿಲ್ಲ. ಇನ್ನೈದು ನಿಮಿಷದಲ್ಲಿ ಮನೆಯಾಕೆ ಬಂದು ಬಾಗಿಲು ತೆಗೆಯುತ್ತಾ-“ ಈ ಟಿ.ವಿ. ಗಲಾಟೆಯಲ್ಲಿ ಯಾರು ಬಂದರೂ ಗೊತ್ತಾಗುಲ್ಲಾ,ಊಟ ಮಾಡ್ತಾ ಇದ್ದೆ, ಬಾಗಿಲು ತೆಗೆದದ್ದು ತಡವಾಯ್ತೇನೋ, ತುಂಬಾಕಾಯಿಸಿದೆನೇನೋ!” ನಾನು ಉತ್ತರಿಸಿದೆ -“ಇಲ್ಲಾ ಬಿಡಿ ಒಂದು ಹತ್ತು ನಿಮಿಷ ಆಗಿರ ಬಹುದಷ್ಟೆ. ಒಳಗೆ ಕಾಲಿಡುತ್ತೇವೆ. ಇರುವ ಒಂದೇ ಒಂದು ದಿವಾನ್ ಮೇಲೆ ಮನೆಯಾತ ಕುಳಿತು ಟಿ.ವಿ.ನೋಡುತ್ತಿದ್ದಾರೆ. ಪಿ.ಯು.ಸಿ. ಓದುವ ಮಗಳು ಅಪ್ಪನ ತೊಡೆಯ ಮೇಲೆ ಮಲಗಿ ಟಿ.ವಿ.ನೋಡುತ್ತಿದ್ದಾಳೆ. ಮನೆಯಾತ ನಮಗೆ ದಿವಾನದ ಕಡೆಗೆ ತೋರಿಸುತ್ತಾ ಹೇಳುತ್ತಾರೆ “ ಕುಳಿತುಕೊಳ್ಳಿ”. ದಿವಾನದ ಪೂರ್ತಿ ಮಗಳು ಮಲಗಿರುವಾಗ ನಮಗೆ ತೋರಿಸಿದ ಜಾಗ ಮಗಳ ಕಾಲ ಬಳಿ. ನಾನು ಹೇಳಿದೆ- “ ಪರವಾಗಿಲ್ಲ” ಮಾತು ಪ್ರಾರಂಭವಾಗಿಯೇ ಇಲ್ಲ ಟಿ.ವಿ. ವಾಲ್ಯೂಮ್ ಜೋರಾಗುತ್ತದೆ. ಇನ್ನು ನಿಂತಿರುವುದೂ ಸೂಕ್ತವಲ್ಲವೆಂದರಿತ ನಾವು ಆಮಂತ್ರಣ ಕೈಗೆ ಕೊಟ್ಟು ಹೊರಟು ಬಿಟ್ಟೆವು. ನಮ್ಮ ಇಂದಿನ ಶಿಕ್ಷಣ-ಸಂಸ್ಕಾರಗಳ ಪರಿಣಾಮದ ಒಂದು ಪುಟ್ಟ ನಿದರ್ಶನವಿದು. ಎರಡು ದಶಕಗಳ ಹಿಂದಿನಮಾತು. ಅಂದು ಕಾನ್ವೆಂಟ್ ಗೀಳು ಉತ್ತುಂಗದಲ್ಲೇ ಇತ್ತು. ನನ್ನ ಮಕ್ಕಳೂ ಶಾಲೆಗೆ ಸೇರಬೇಕಾದ ಸಂದರ್ಭ.ಆದರೆ ಮನದೊಳಗೇ ಚಿಂತೆ.ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಕೊರತೆ. ಕಾನ್ವೆಂಟ್ ಗಳಲ್ಲಿ ನಮ್ಮ ಸಂಸ್ಕೃತಿಗೆ ತಿಲಾಂಜಲಿ.ಅಲ್ಲಿ ಕಲಿಸುವ ಮಮ್ಮಿ-ಡ್ಯಾಡಿ ಪದಗಳು ನಮ್ಮ ಚಿಂತನೆಗೆ ಒಗ್ಗುವಂತಹುದಲ್ಲ.ಸಹಸ್ರಾರು ವರ್ಷಗಳ ನಮ್ಮ ಋಷಿಮುನಿಗಳ ತಪಸ್ಸಿನಿಂದ ಮೂಡಿಬಂದ ಸಂಸ್ಕೃತಿಯೊಂದು ಕಾನ್ವೆಂಟ್ ಕಲ್ಚರ್ನ ಹೊಡೆತಕ್ಕೆ ಸಿಲುಕಿದೆಯಲ್ಲಾ! ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ನನ್ನ ಮನದೊಳಗೆ ಚಿಂತೆ ಕಾಡಿತ್ತು. ನಾವೇ ಏಕೆ ಒಂದು ಶಾಲೆ ಪ್ರಾರಂಭಮಾಡಬಾರದು? ಅಲ್ಲಿ ಮುಂದುವರೆದ ಶಿಕ್ಷಣದಜೊತೆಗೆ ನಮ್ಮ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಕಲಿಸಿಕೊಡಬಹುದಲ್ಲಾ! ನಾಲ್ಕಾರು ಮಿತ್ರರು ಕುಳಿತು ಚರ್ಚಿಸಿದೆವು. ಆ ಹೊತ್ತಿಗೆ ಮಿತ್ರ ರಮೇಶ್ ಸಂಘದ ಪ್ರಚಾರಕನಾಗಿ, ನಂತರ ಸ್ವಂತ ಉದ್ಯೋಗ ನಿಮಿತ್ತ ದೇಶ ಸುತ್ತಿ ಸಾಕಾಗಿ ಊರಿಗೆ ಹಿಂದಿರುಗಿದ್ದ. ರಮೇಶನ ತಲೆಯಲ್ಲಿ ಈ ಚಿಂತನೆಯನ್ನು ಬಲವಾಗಿಯೇ ಬಿತ್ತಿದೆವು. ನಮ್ಮ ನೈತಿಕ ಬೆಂಬಲ ನಿಮಗಿರುತ್ತದೆ, ನೀವು ಒಂದು ಶಿಶು ವಿಹಾರ ಆರಂಭಿಸಿ ಬಿಡಿ. ಹಿರಿಯಣ್ಣ ಲಕ್ಷ್ಮಿನರಸಿಂಹಶಾಸ್ತ್ರಿಗಳೊಡನೆ ಸಮಾಲೋಚಿಸಿ ಒಂದು ಶುಭ ಮಹೂರ್ತದಲ್ಲಿ ಆರಂಭವಾಗಿಯೇ ಬಿಟ್ಟಿತು “ ಶ್ರೀ ಲಕ್ಷ್ಮೀ ನರಸಿಂಹವಿದ್ಯಾಮಂದಿರ” ದ ಹೆಸರಿನಲ್ಲಿ ಶಿಶುವಿಹಾರ. ನಂತರ ವರ್ಷ ವರ್ಷಕ್ಕೆ ಒಂದನೇ ತರಗತಿಯಿಂದ ಶುರುವಾಗಿ ಇದೀಗ ಪ್ರೌಢ ಶಾಲೆ ಯ ವರಗೆ ನಿರಂತರ ವಿಸ್ತಾರಗೊಂಡು ನಮ್ಮೆದುರು ಒಂದು “ ವಿದ್ಯಾ ಸಂಸ್ಥೆ” ಎದ್ದು ನಿಂತಿರುವುದು ಅದರ ನಿರಂತರ ಬೆಳವಣಿಗೆಯ ದ್ಯೋತಕವಾಗಿದೆ. ನಮ್ಮ ಈ ವಿದ್ಯಾಸಂಸ್ಥೆಯಿಂದ ಹೊಳೇನರಸೀಪುರದ ಮಕ್ಕಳು ಆದರ್ಶವಾಗಿ ಬೆಳೆದು ಹೆತ್ತ ತಂದೆ-ತಾಯಿಯರಿಗೆ, ಹೊತ್ತ ನೆಲಕ್ಕೆ ಋಣಿಯಾಗಿ, ನಮ್ಮ ದೇಶಕ್ಕೆ ಆಸ್ತಿಯಾಗಲೀ ಎಂದು ಆಶಿಸುವೆ. -ಹರಿಹರಪುರ ಶ್ರೀಧರ್ ಹಾಸನ

ಶೃಂಗೇರಿ ಶಾರದಾ ಪೀಠದ ಗುರುಪರಂಪರೆ

http://www.sringeri.net/gallery/Acharyas/Abhinava_Vidyatirtha/abhinava_vidyatirtha_swami_05.jpg

ಚಿತ್ರ: ಉತ್ತರ ಭಾರತ ಪ್ರವಾಸದಲ್ಲಿ ಸಾಧುಗಳೊಡನೆ ಶ್ರೀ ಅಭಿನವ ವಿದ್ಯಾತೀರ್ಥರು

ಜ್ವಾಲಾಮುಖಿ ಕನ್ನಡಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮಾಹಿತಿಯನ್ನು ಚಾಮರಾಜನಗರ ಜಿಲ್ಲೆಯ ರಾಮಸಮುದ್ರದ ಶ್ರೀ ಮತಿ ಆರ್.ಸುಮಿತ್ರಮ್ಮ ಮತ್ತು ಗಮಕ ವಿದ್ವಾನ್ ಶ್ರೀ ಆರ್.ಕೆ.ರಾಜಗೋಪಾಲ್ ಎಂಬುವರು ಮುದ್ರಿಸಿ ಹಂಚಿದ್ದ ಒಂದು ಅಪರೂಪದ ಮಾಹಿತಿಯು ಹಾಸನದ ಶ್ರೀ ಶಂಕರ ಮಠದಲ್ಲಿ ನನ್ನ ಕಣ್ಣಿಗೆ ಬಿತ್ತು. ಸಂಪದಿಗರಿಗಾಗಿ ಅದೇ ಮಾಹಿತಿಯನ್ನು ನೀಡಿರುವೆ. ಆದಿ ಶಂಕರಾಚಾರ್ಯರಿಂದ ಮೊದಲ್ಗೊಂಡು ಇಂದಿನ ಶ್ರೀ ಭಾರತೀ ತೀರ್ಥರ ವರಗೆ ಒಂದುಸಾವಿರದ ಇನ್ನೂರು ವರ್ಷಗಳಲ್ಲಿ ನಿರಂತರವಾಗಿ ೩೬ ಜನ ಪೀಠಾಧಿಪತಿಗಳ ಮಾಹಿತಿ ಸಿಕ್ಕಿರುವುದು ಒಂದು ಅಚ್ಚರಿಯೇ ಸರಿ. ಆದರೆ ಶ್ರೀ ಶಂಕರರ ಜನ್ಮವನ್ನೇ ಅವರ ಸನ್ಯಾಸ ಸ್ವೀಕರಿಸಿದ ದಿನವೆಂದು ನಮೂದಿಸಿದಂತೆ ಕಾಣುತ್ತದೆ. ಉಳಿದಂತೆ ಸನ್ಯಾಸ ಸ್ವೀಕರಿಸಿದ ವರ್ಷವಿರಬಹುದು.ಹನ್ನೊಂದನೆಯ ಗುರುಗಳಾದ ಶ್ರೀ ಭಾರತೀ ಕೃಷ್ಣ ತೀರ್ಥರು ಸುಮಾರು ೧೦೫ ವರ್ಷಗಳು ಪೀಠವನ್ನಲಂಕರಿಸಿದ್ದರೆಂದು ತಿಳಿದು ಬರುತ್ತದೆ. ಆರನೂರೈವತ್ತು ವರ್ಷಗಳಿಗೂ ಹಿಂದೆ ಅವರು ಸುಮಾರು ನೂರಿಪ್ಪತ್ತು ವರ್ಷಗಳು ಬದುಕಿದ್ದಿರಲೂ ಬಹುದು. ಶ್ರೀ ನರಸಿಂಹ ಭಾರತೀ ಹೆಸರು ಏಳು ಭಾರಿ ಪುನರಾವೃತ್ತಿಯಾಗಿದೆ. ವಂಶ ಪರಂಪರೆಯಲ್ಲಿ ಮೂರು ನಾಲ್ಕು ತಲೆಮಾರುಗಳ ಹೆಸರನ್ನು ಮಕ್ಕಳು ಮೊಮ್ಮಕ್ಕಳಿಗೆ ಇಡುವುದು ಸಾಮಾನ್ಯವಾಗಿದ್ದು ಗುರುಪರಂಪರೆಯಲ್ಲೂ ಹಿಂದಿನ ಗುರುಗಳ ಹೆಸರನ್ನೇ ಎರಡು-ಮೂರು-ಏಳು ಭಾರಿ ಕರೆದಿರಬಹುದು. ಈಗ ಪಟ್ಟಿ ನೋಡಿ. ಪೀಠಾಧಿಪತಿಗಳು---- ಸನ್ಯಾಸ ಸ್ವೀಕಾರ--- ದೇಹ ಮುಕ್ತಿ 1ಶ್ರೀ ಶಂಕರ ಭಗವತ್ಪಾದರು: 788-- 820 2 ಶ್ರೀ ಸುರೇಶ್ವರಾಚಾರ್ಯ :813-- 834 3 ಶ್ರೆ ನಿತ್ಯ ಭೋಧ ಘನ :818---848 4 ಶ್ರೀಜ್ಞಾನ ಘನ :846---910 5 ಶ್ರೀಜ್ಞಾನೋತ್ತಮ :905---954 6 ಶ್ರೀಜ್ಞಾನ ಗಿರಿ :950---1038 7 ಶ್ರೀ ಸಿಂಹಗಿರಿ :1036---1098 8 ಶ್ರೀ ಈಶ್ವರ ತೀರ್ಥ :1097---1146 9 ಶ್ರೀ ನರಸಿಂಹ ತೀರ್ಥ :1146---1229 10 ಶ್ರೀ ವಿದ್ಯಾಶಂಕರ ತೀರ್ಥ :1228---1333 11 ಶ್ರೀ ಭಾರತೀ ಕೃಷ್ಣ ತೀರ್ಥ :1328---1380 12 ಶ್ರೀ ವಿದ್ಯಾರಣ್ಯ :1331---1386 13 ಶ್ರೀ ಚಂದ್ರಶೇಖರ ಭಾರತೀ-೧:1368---1389 14 ಶ್ರೀನರಸಿಂಹ ಭಾರತೀ-೧ :1388---1408 15 ಶ್ರೀ ಪುರುಷೋಮ ಭಾರತೀ-೧ :1406---1448 16 ಶ್ರೀ ಶಂಕರ ಭಾರತೀ :1429---1455 17 ಶ್ರೀ ಚಂದ್ರಶೇಖರ ಭಾರತೀ-೨ :1449---1464 18 ಶ್ರೀನರಸಿಂಹ ಭಾರತೀ-೨ :1464---1479 19 ಶ್ರೀ ಪುರುಷೋಮ ಭಾರತೀ-೨ :1473---1517 20 ಶ್ರೀ ರಾಮಚಂದ್ರ ಭಾರತೀ :1508---1560 21 ಶ್ರೀನರಸಿಂಹ ಭಾರತೀ-೩ :1557---1573 22 ಶ್ರೀನರಸಿಂಹ ಭಾರತೀ-೪ :1563---1576 23 ಶ್ರೀನರಸಿಂಹ ಭಾರತೀ-೫ :1576---1600 24 ಶ್ರೀ ಅಭಿನವ ನರಸಿಂಹ ಭಾರತೀ-೧ :1559---1623 25 ಶ್ರೀಸಚ್ಚಿದಾನಂದ ಭಾರತೀ-೧ :1622---1663 26 ಶ್ರೀನರಸಿಂಹ ಭಾರತೀ-೬ :1663---1706 27 ಶ್ರೀಸಚ್ಚಿದಾನಂದ ಭಾರತೀ-೨ :1706---1741 28 ಶ್ರೀ ಅಭಿನವ ಸಚ್ಚಿದಾನಂದ ಭಾರತೀ-೧ :1741--- 1767 29 ಶ್ರೀನರಸಿಂಹ ಭಾರತೀ-೭ :1767---1770 30 ಶ್ರೀಸಚ್ಚಿದಾನಂದ ಭಾರತೀ-೩ :1770----1814 31 ಶ್ರೀ ಅಭಿನವ ಸಚ್ಚಿದಾನಂದ ಭಾರತೀ-೨ :1814---1817 32 ಶ್ರೀನರಸಿಂಹ ಭಾರತೀ-೮ :1817---1879 33 ಶ್ರೀಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತೀ:1866- 1912 34 ಶ್ರೀ ಚಂದ್ರಶೇಖರ ಭಾರತೀ-೩ :1912---1954 35 ಶ್ರೀ ಅಭಿನವ ವಿದ್ಯಾ ತೀರ್ಥ :1931---1989 36 ಶ್ರೀ ಭಾರತೀ ತೀರ್ಥ: 1974 ರಲ್ಲಿ ಸನ್ಯಾಸ ಸ್ವೀಕಾರ. ಮಾಹಿತಿ ಕೃಪೆ :ಜ್ವಾಲಾಮುಖಿ ಪತ್ರಿಕೆ

ಮುಂದುವರೆದಂತೆ:

ಈ ಲೇಖನವನ್ನು ಪ್ರಕಟಿಸಿದ ಮೇಲೆ ಇದೇ ಲೇಖನ ಹೋಲುವ ಮತ್ತೊಂದು ಲೇಖನ ೨೦೦೭ ರಲ್ಲಿಯೇ ಸಂಪದದಲ್ಲಿ ಪ್ರಕಟ ವಾಗಿದೆ.ಎಂಬುದು ಇದೇ ಪುಟದಲ್ಲಿ ಗೋಚರವಾಯ್ತು. ಅದರ ಲೇಖಕರು ಅನ್ಯಥಾ ಭಾವಿಸ ಬಾರದಾಗಿ ವಿನಂತಿಸುವೆ.

ಕೇಸರೀಕರಣ-ಹಾಗೆಂದರೇನು?

ಮೊನ್ನೆಹಾಸನದಲ್ಲೊಂದು ವಿಶಿಷ್ಟ ಕಾರ್ಯಕ್ರಮ.ಸಂಜೆ ಐದರ ವೇಳೆ.ಸೂರ್ಯನಿನ್ನೂ ತಂಪಾಗಿಯೇ ಇಲ್ಲ. ಬಿಸಿಲಿನ
ಝಳ. ಸುಮಾರು ಎರಡುಸಾವಿರ ಯುವಕರು ಕಣ್ಣು ಮಿಟುಕಿಸದೆ ಕುಳಿತು ಭಾಷಣ ಕೇಳುತ್ತಿದ್ದಾರೆ.ಕಂಚಿನಕಂಠದಿಂದ ಹೊರಬರುತ್ತಿರುವ ಮಾತುಗಳನ್ನು ಆ ತರುಣರಷ್ಟೇ ಅಲ್ಲ ಹಾಸನದ ಜನತೆಕೂಡ ಆ ಬಿಸಿಲಿನ ಝಳವನ್ನು ಲೆಕ್ಕಿಸದೆ ಕೇಳುತ್ತಾ ಕುಳಿತಿದ್ದಾರೆ.ಕಾರಣ ತಂಪಗಿನ ಮಾತು ಕೇಳಬರುತ್ತಿದೆ.ಮನಸ್ಸಿಗೆ ಹಿತವಾಗಿದ್ದ ಭರವಸೆಯ ಮಾತುಗಳು. ಬ್ರಷ್ಠ ರಾಜಕಾರಣಿಗಳ ಮಾತುಗಳೇ ಕೇಳಿಬರುತ್ತಿದ್ದ ಹಾಸನದ ಹೈಸ್ಕೂಲ್ ಮೈದಾನದಲ್ಲಿ ಒಬ್ಬ ಶಿಷ್ಟ ತಪಸ್ವಿಯ ಬಾಯಿಂದ ಬರುತ್ತಿದ್ದ ಮಾತುಗಳು ಅಲ್ಲಿದ್ದ ಸಾವಿರಾರು ಮಂದಿಯನ್ನು ಕಟ್ಟಿಹಾಕಿತ್ತು.ಜಯಕಾರ ಮಾಡುವಂತಿಲ್ಲ. ಕಾರ್ಯಕ್ರಮದ ಪ್ರಾರಂಭದಲ್ಲೇ ಸಂಘಟಕರು ಸೂಚನೆ ಬೇರೆ ಕೊಟ್ಟುಬಿಟ್ಟಿದ್ದರು. ಭಾಷಣಕಾರರು ಶ್ರೀ ಸು.ರಾಮಣ್ಣ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು.ಸಂಘ ಕಾರ್ಯಾಲಯದ ಕಟ್ಟಡ "ಪಾಂಚಜನ್ಯದ" ಉದ್ಘಾಟನೆಯ ನಿಮಿತ್ತ ಹಮ್ಮಿಕೊಂಡಿದ್ದ ಜಿಲ್ಲಾ ತರುಣ ಸಮಾವೇಶದಲ್ಲಿ ಗುಡುಗಿದ ಎಪ್ಪತ್ತು ವರ್ಷದ ತರುಣ ಸು.ರಾಮಣ್ಣನವರು ಇಂಜಿನಿಯರಿಂಗ್ ಪದವಿ ಮುಗಿಸಿ, ದುಡಿಮೆಗೆ ಮನಸ್ಸು ಮಾಡದೆ, ಮದುವೆಯಾಗದೆ ತಮ್ಮ ಇಡೀ ಜೀವನವನ್ನು ಸಂಘದ ಕಾರ್ಯಕ್ಕೆ ಸಮರ್ಪಿಸಿ ಕೊಂಡವರು. ಸಂಘದಲ್ಲಿ ಇಂತಹ ಸಹಸ್ರಾರು ಪ್ರಚಾರಕರು.ತಮ್ಮ ಸರ್ಪಿತ ಜೀವನವೇ ತಮ್ಮ ನಾಲಿಗೆಗೆ ಶಕ್ತಿ. ಅದಕ್ಕಾಗಿಯೇ ತರುಣರಿಗೆ ಅಷ್ಟೊಂದು ಆಕರ್ಷಣೆ.ಅಲ್ಲಿದ್ದ ಸಂಘದ ಕಾರ್ಯಕರ್ತರ ಪಡೆಯನ್ನು ನೋಡಿದಾಗ ರಾಮಣ್ಣನವರ ಬಾಯಿಂದ ಹೊರಟಿದ್ದು " ಸಾವಿರದ ಸ್ವಯಂಸೇವಕರು" ಸಾವಿರ ಸಂಖ್ಯೆ ಎಂದು ಸಭಾಸದರು
ಭಾವಿಸಿಯಾರು ಎಂದು ಮತ್ತೊಮ್ಮೆ ಹೇಳಿದರು " ಸಾವ್ ಇರದ ಸ್ವಯಂ ಸೇವಕರು" ಮುಂದುವರೆದು ಹೇಳಿದರು "ಯಾವುದೇ ಸಂಘಟನೆಗೆ ಬೇಕಾದವರು ಸಾವಿರಾರು ಕಾರ್ಯಕರ್ತರಲ್ಲ. ಸಾವು ಇರದ ಕಾರ್ಯಕರ್ತರು.ಇಂತಹ ಸಂಟನೆಗಳು ದೇಶಕ್ಕೆ ಆಸ್ತಿಯಾಗುತ್ತವೆ. ಅನೇಕ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಆಸ್ತಿ ಕೂಡಿಡಬೇಕೆಂದು ಅಪೇಕ್ಷಿಸುತ್ತಾರೆ. ಮಕ್ಕಳಿಂದಲೂ ಅದನ್ನೇ ಬಯಸುತ್ತಾರೆ. ಆದರೆ ಆಸ್ತಿಮಾಡುವುದಲ್ಲ, ಅವರೇ ಕುಟುಂಬಕ್ಕೆ ಆಸ್ತಿಯಾಗಬೇಕು, ಅಂತಹ ಕುಟುಂಬಗಳು ದೇಶಕ್ಕೆ ಆಸ್ತಿಯಾಗುತ್ತವೆ. ಸಣ್ಣಪುಟ್ಟ ಆಸೆ ಇಟ್ಟುಕೊಳ್ಳುವುದು ಸಣ್ಣತನ.ಮಹತ್ವಾಕಾಂಕ್ಷೆ ನಮ್ಮದಾಗಬೇಕು.ಆಸ್ತಿಯನ್ನು ಗಳಿಸುವುದಲ್ಲ, ನಾವೇ ದೇಶಕ್ಕೆಆಸ್ತಿಯಾಗಬೇಕು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಚ್ಛೆ ಯೆಂದರೆ ಸಾವ್ ಇರದ ಸ್ವಯಂಸೇವಕರು ಸಂಘಕ್ಕೆಆಸ್ತಿ, ಇಂತಹ ಸಂಘಟನೆಗಳು ದೇಶಕ್ಕೆ ಆಸ್ತಿ. ಸಂಘದ ಕಾರ್ಯಾಲದ ಪ್ರರಂಭದಬಗ್ಗೆ ಹೇಳುತ್ತಾ, - ಶಿವ ಇರುವಲ್ಲಿ ಶಿವಾಲಯ, ದೇವ ಇರುವಲ್ಲಿ ದೇವಾಲಯ,ಹಾಗೆಯೇ ಕಾರ್ಯ ಇರುವಲ್ಲಿ ಕಾರ್ಯಾಲಯವಾಗಬೇಕು , ಪಾಂಚಜನ್ಯ ಕಾರ್ಯಾಲಯ ಕೇಂದ್ರವಾಗಿ ರಾಷ್ಟ್ರಕಾರ್ಯ ಇನ್ನೂಉತ್ಸಾಹದಿಂದ ನಡೆಯಬೇಕೆಂದು ಯುವಕರಲ್ಲಿ ಉತ್ಸಾಹ ತುಂಬಿದರು.ಸಂಘದ ಕಾರ್ಯಾಲಯದ ಆವರಣವಂತೂ ಚೆನ್ನಾಗಿದೆ.
ಅದರಲ್ಲಿ ಹೂರಣ ತುಂಬುವ ಕೆಲಸ ತ್ವರಿತಗತಿಯಲ್ಲಿ ಆಗಬೇಕೆಂದುಆಶಿಸಿದರು.ಮಹಾಭಾರತದಲ್ಲಿ ಶ್ರೀ ಕೃಷ್ಣನು
ಪಾಂಚಜನ್ಯವನ್ನು ಮೊಳಗಿಸಿದಂತೆ ರಾಷ್ಟ್ರ ಜಾಗೃತಿಯ ಕೆಲಸವು ಹಾಸನದ ಪಾಂಚಜನ್ಯದಿಂದಾಗಬೇಕು. ಸಮಾರಂಭಕ್ಕೆ
ಮುನ್ನ ನಗರದಲ್ಲಿ ನಡೆದಆಕರ್ಷಣೀಯ ಪಥಸಂಚಲನದ ಬಗ್ಗೆ ತಮ್ಮದೇಆದ ರೀತಿಯಲ್ಲಿ ರಾಮಣ್ಣನವರು ವ್ಯಾಖ್ಯಾನಿಸಿದರು.-"
ಮಹಾಭಾರತದ ಒಂದು ಪ್ರಸಂಗ. ಪಾಂಡವರು ವನವಾಸದಲ್ಲಿದ್ದಾಗ ಅವರ ವನವಾಸದ ಸಂಕಟವನ್ನು ಕಂಡು ಸಂತೋಷ ಪಡಲು ವಿಘ್ನಸಂತೋಷಿಗಳಾಗಿ ದುರ್ಯೋದನಾದಿಗಳು ಕಾಡಿಗೆ ಬಂದರು. ತಮ್ಮ ದುರಹಂಕಾರದ ಅವಿವೇಕದ ನಡೆಯಿಂದ ಯಕ್ಷರ ಬಂಧಿಗಳಾದರು. ಈ ವಿಷಯ ಧರ್ಮರಾಯನಿಗೆ ತಿಳಿಯಿತು. ಆಗ ಧರ್ಮರಾಯನು ತನ್ನ ಸೋದರರಿಗೆ ಹೇಳುತ್ತಾನೆ-"
ಹೋಗಿ ದುರ್ಯೋದನಾದಿಗಳನ್ನು ಬಂಧನದಿಂದ ಬಿಡಿಸಿಕೊಂಡು ಬನ್ನಿ. ನಾವು ಮತ್ತು ಕೌರವರು ಮಾತ್ರವಿದ್ದಾಗ .ನಾವು ಐವರು ಹಾಗೂ ಅವರು ನೂರು ಮಂದಿ. ಆದರೆ ಹೊರಗಿನವರು ಆಕ್ರಮಣ ಮಾಡಿದಾಗ ನಾವು ನೂರೈದು ಮಂದಿ. ವಯಂ ಪಂಚಾಧಿಕಂ ಶತಮ್ .ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆ ಇದೇಆಗಿದೆ. ಇಂದಿರಾ ಗಾಂಧಿಯವರು ಅಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಹಿಷ್ಕಾರ ಮಾಡಿದ್ದರೂ ಸಹ ಪಾಕೀಸ್ಥಾನದ ಯುದ್ಧದ ಸಂದರ್ಭದಲ್ಲಿ ಬಾಂಗ್ಲಾ ನಿರಾಶ್ರಿತರ ಪಡೆಗೆ ಸಹಾಯಮಾಡಿ ಪಾಕೀಸ್ಥಾನದ ಸೊಂಟವನ್ನು ಮುರಿದ ಇಂದಿರಾ ಗಾಂಧಿಯವರನ್ನು ವಿರೋಧ ಪಕ್ಷದಲ್ಲಿದ್ದ ಶ್ರೀಆಟಲ್ ಬಿಹಾರಿ ವಾಜಪೇಯಿಯವರು "ದುರ್ಗಾ"ಎಂದು ಕರೆದರು. ದೇಶಕ್ಕೆಆಪತ್ತು ಬಂದಾಗ ನಾವೆಲ್ಲಾ ಒಂದೇ.ದೇಶದ ನಮ್ಮೆಲ್ಲರ ಹೊಣೆ. ಯಾರಲ್ಲಿಯೂ ವಿರೋಧ ಕಾಣ ಬಾರದು.ಕಾರ್ಗಿಲ್ ನಲ್ಲಿ ಹಿಂದಿನಿಂದ ಮೋಸದಿಂದ ಪಾಕ್ ಪಡೆ ನುಗ್ಗಿ ಯುದ್ಧವಾದಾಗ ಅಮೇರಿಕಾ ಅಧ್ಯಕ್ಷರುಭಾರತದ ಪ್ರಧಾನಿ ವಾಜಪೇಯಿಯವರನ್ನೂ, ಹಾಗೂ ಪಾಕ್ ಅಧ್ಯಕ್ಷ ನವಾಝ್ ಷರೀಫರನ್ನೂ ಸಂಧಾನಕ್ಕೆ ಕರೆದರು, ಕೂಡಲೇ ನವಾಝ್ ಷರೀಫ್ ಅಮೇರಿಕಾಕ್ಕೆ ಧಾವಿಸಿದರೆ, ವಾಜಪೇಯಿಯವರು ಹೇಳಿದರು" ನಾನು ಭಾರತದ ಪ್ರಧಾನಿ. ಈ ದೇಶ ನನ್ನ ಮಾತೃಭೂಮಿ.ನನಗೊಂದು ಜವಾಬ್ದಾರಿ ಇದೆ. ವಿದೇಶೀ ಆಕ್ರಮಣಕಾರರು ನಮ್ಮ ಮೇಲೆ ಆಕ್ರಮಣ ಮಾಡಿರುವಾಗ ಒಬ್ಬ ಶತ್ರು ಸೈನಿಕನು ನಮ್ಮ ಗಡಿಯೊಳಗಿದ್ದರೂ ನಾನು ಭಾರತ ಬಿಟ್ಟು ಬರಲಾರೆ" ಆದರೆ ಸ್ವಾತಂತ್ರ್ಯ ಬಂದದಿನದಿದಿಂದ ನಮ್ಮನ್ನಾಳಿದ ಕಾಂಗ್ರೆಸ್ಸಿಗರು ಅಂದು ಹೇಳಿದ್ದೇನು- ಬಿ.ಜೆ.ಪಿ. ನಾಯಕರ ಅವಿವೇಕದಿಂದ ಕಾರ್ಗಿಲ್ ಯುದ್ಧದಲ್ಲಿ ನಾವು ನೂರಾರು ಸೈನಿಕರನ್ನು ಕಳೆದುಕೊಂಡೆವು.
ದೇಶವು ಆಪತ್ತು ಎದುರಿಸುತ್ತಿದ್ದಾಗ ಸರ್ಕಾರಕ್ಕೆ ಬೆಂಬಲಕೊಡುವುದರ ಬದಲು ಆಗಲೂ ಕ್ಷುದ್ರರಾಜಕಾರಣ
ನಡೆಯಬೇಕೆ? ೧೯೨೫ ರಲ್ಲಿ ಆರಂಭವಾದ ಸಂಘವು ಇಂದಿನವರಗೆ ಹಾಗೂ ಮುಂದೂ ಕೂಡ ಕ್ಷುದ್ರ ರಾಜಕಾರಣದಿಂದ ಗಾವುದದಷ್ಟು ದೂರ.ಅಧಿಕಾರಕ್ಕಾಗಿ ಪಕ್ಷ ರಾಜಕಾರಣದಿಂದ ದೂರ. ನಮ್ಮದು ಶುದ್ಧ ರಾಷ್ಟ್ರಕಾರಣ.ಯಾರನ್ನೂ ವಿರೋಧ ಮಾಡುವುದು ನಮ್ಮ ನೀತಿಯಲ್ಲ. “ಸರ್ವೇಶಾಂ ಅವಿರೋಧೇನಾ”-ಯಾರನ್ನೂ ವಿರೋಧ ಮಾಡುವ ಮಾತೇ ಇಲ್ಲ.ಹಾಸನದಲ್ಲಿ ನಡೆದ ಪಥಸಂಚಲನವನ್ನು ಸಂತೋಷದಿಂದ ನೋಡುತ್ತಿದ್ದ ನೂರಾರು ಮುಸಲ್ನಾನ ಬಂಧುಗಳನ್ನೂ ನಾ ಕಂಡೆ.ಅವರಲ್ಲಿ ಆತಂಕದ ಲವಲೇಶವೂ ಇರಲಿಲ್ಲ. ಆದರೆ ವಿಚಾರ ವಾದಿಗಳೆಂದು ಕರೆದುಕೊಳ್ಳುವರು ಹೇಳುವುದೇನು? ಆರ್.ಎಸ್.ಎಸ್. ರೂಟ್ ಮಾರ್ಚ್ ಮಾಡುವುದು ಮುಸಲ್ಮಾನರನ್ನು ಬೆದರಿಸುವುದಕ್ಕೆ. ಒಂದು ವಿಚಾರವು ಸಮಾಜಕ್ಕೆ ಗೊತ್ತಿದೆ. ಆರ್.ಎಸ್.ಎಸ್. ಯಾರಲ್ಲೂ ಭಯವನ್ನು ಉಂಟುಮಾಡಲು ತನ್ನ ಕಾರ್ಯಕ್ರಮಗಳನ್ನು ಮಾಡುವುದಿಲ್ಲ, ಬದಲಿಗೆ “ ಜನರಲ್ಲಿ ಭರವಸೆಯನ್ನು ಉಂಟುಮಾಡಲು ತನ್ನೆಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತೆ. ಪಥಸಂಚಲನದಲ್ಲಿ
ಭಾಗವಹಿಸುವಂತಹ ವೃದ್ಧರು ತಮ್ಮ ಮುಪ್ಪನ್ನು ಮರೆತುಬಿಡುತ್ತಾರೆ. ಪಥಸಂಚಲನದಲ್ಲಿಪಾಲ್ಗೊಳ್ಳುವ ತರುಣರು
ಜೀವನವಿಡೀ ತಮ್ಮ ತಾರುಣ್ಯವನ್ನು ಕಾಪಾಡಿಕೊಳ್ಳುವ ಸಂಕಲ್ಪವನ್ನು ಮಾಡುತ್ತಾರೆ. ತಮ್ಮಲ್ಲಿ ಹಾಗೂ ಸುತ್ತಲ
ಸಮಾಜದಲ್ಲಿ ಆತ್ಮವಿಶ್ವಾಸವನ್ನು ತುಂಬಲು ಇಂತಹ ಕಾರ್ಯಕ್ರಮಗಳನ್ನು ಸಂಘವು ಆಯೋಜಿಸುತ್ತೆ. ನಮ್ಮದು
ಅಪಮಾನದ ಇತಿಹಾಸವಲ್ಲ.ಹಲವಾರು ಆಕ್ರಮಣಗಳು ನಮ್ಮ ದೇಶದ ಮೇಲೆ ಆಗಿದೆ.ಆದರೆ ಎಲ್ಲಾ ಕಾಲದಲ್ಲೂ
ಸಂಘರ್ಷವನ್ನು ಮಾಡುತ್ತಾ ಬಂದಿದ್ದೇವೆ.ನಮ್ಮದು ಸೋಲಿನ ಇತಿಹಾಸವಲ್ಲ. ಸಂಘರ್ಷದ ಇತಿಹಾಸ. ಶಕ್ತಿಯ
ಆರಾಧನೆ ಈ ದೇಶದ ಗುಣಸ್ವಭಾವ. “ಅಹಿಂಸಾ ಪರಮೋಧರ್ಮ:”-ಎಂಬುದು ಒಳ್ಳೆಯ ತತ್ವ. ಇದನ್ನು ಯಾರು ಹೇಳಬೇಕು? ಭಲಹೀನರೇ? ದುರ್ಬಲರಿಗೆ ಇದನ್ನು ಹೇಳುವ ಯೋಗ್ಯತೆ ಇಲ್ಲ. ಅಹಿಂಸಾ ಪರಮೋಧರ್ಮ ಎಂದು ಹೇಳಲು ಯೋಗ್ಯತೆ ಬೇಕು. ಅವನಲ್ಲಿ ಸಾಮರ್ಥ್ಯ ಬೇಕು. ಎಲ್ಲಿ ಶಕ್ತಿಯ ಚಮತ್ಕಾರವಿದೆ, ಅಲ್ಲಿ ಭಕ್ತಿಯ ಪುರಸ್ಕಾರವಿದೆ.ಇಲ್ಲದಿದ್ದರೆ ಕೇವಲ ತಿರಸ್ಕಾರ. ಮುಂಬೈನಲ್ಲಿ ಬಾಂಬ್ ಸ್ಪೋಟ ವಾದನಂತರ ಭಾರತಸರ್ಕಾರವು ಪಾಕೀಸ್ಥಾನಕ್ಕೆ ಎಚ್ಛರಿಕೆ ಕೊಟ್ಟಿತು. ಭಯೋತ್ಪಾದಕರ ಒಂದು ಪಟ್ಟಿಯನ್ನು ಪಾಕ್ ಗೆ ಕೊಟ್ಟು ಇಷ್ಟು ಜನರನ್ನು ಭಾರತದ ವಶಕ್ಕೆ ಕೂಡಲೆ ಕೊಡಿ-ಇಲ್ಲ ಪರಿಣಾಮ ಎದುರಿಸಿ” ಎಂದು ಗುಡುಗಿತು.ನಮಗೆಲ್ಲಾ ನಮ್ಮ ಸರ್ಕಾರದ ಬಗ್ಗೆ ಅಭಿಮಾನವೆನಿಸಿತು. ಆದರೆ ಪಾಕ್ ನಮ್ಮ ಸರ್ಕಾರದ ಮಾತಿಗೆ ಕಿವಿಗೊಟ್ಟಿತೇ?ಇಲ್ಲ. ಶಕ್ತಿಯ ಚಮತ್ಕಾರ ವಿಲ್ಲದಿದ್ದರೆ ಪುರರ್ಸ್ಕಾರವಿಲ್ಲ.ಕೇವಲ ತಿರಸ್ಕಾರ. ಒಂದು ಪುಟ್ಟ ಇಸ್ರೇಲ್ ದೇಶವು ನಮಗೆ ಉಧಾಹರಣೆ ಯಾಗಬೇಡವೇ?ಇಸ್ರೇಲ್ ದೇಶವು ಹನ್ನೊಂದು ಅರಬ್ ದೇಶಗಳಿಂದ ಆವರಿಸಲ್ಪಟ್ಟಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಅಪಾಯದ ಗಂಟೆಗಳೇ! ಆದರೆ ಇಸ್ರೇಲ್ ಹೆದರಲಿಲ್ಲ.ಅದರಮೇಲೆ ಪಕ್ಕದ ದೇಶದಿಂದ ಆಕ್ರಮಣ ವಾದಾಗಲೆಲ್ಲಾ ಸಮರ್ಥವಾಗಿ ಎದುರಿಸಿತು. ಭಾರತವೂ ಅಷ್ಟೇ. ಅದೊಂದು ಶಕ್ತಿಶಾಲಿ ದೇಶವಾಗಬೇಕು.ಶಕ್ತಿ ಇರುವುದು ಸಂಘಟನೆಯಲ್ಲಿ. ಇಂಗ್ಳೀಶಿನಲ್ಲಿ ಒಂದು
ಮಾತಿದೆ. “ ಕಾಳಗ ಮಾಡುವುದು ಬಂದೂಕಲ್ಲ, ಅದನ್ನು ಹಿಡಿದಿರುವ ಕೈ, ಕಾಳಗ ಮಾಡುವುದು ಕೈ ಅಲ್ಲ, ಅದರಹಿಂದಿರುವ ಗುಂಡಿಗೆ.ಅವನ ಹೃದಯ.ವ್ಯಕ್ತಿಯ ಒಳಗಿರುವ ತಾಕತ್ತು.ಒಳಗಿನಶಕ್ತಿ ಇದ್ದಾಗ ಬಾಂಬಾಗಲೀ, ಬಂದೂಕಾಗಲೀ ಅಗತ್ಯಬೀಳುವುದಿಲ್ಲ.ಆದ್ದರಿಂದ ಒಳಗಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕೆಲಸವಾಗಬೇಕು. ಆ ಕೆಲಸವನ್ನು
ಸಂಘವು ಮಾಡುತ್ತಿದೆ. ಪಥಸಂಚಲನವೆಂದರೆ ಒಂದು ಸಂಘಟಿತ ಶಕ್ತಿಯ ಒಂದು ವ್ಯಕ್ತರೂಪ. ಸರಿಯಾದ ಸಮಯಕ್ಕೆ
ಹೊರಟು, ನಿಷ್ಚಿತ ಮಾರ್ಗದಲ್ಲಿ ಕ್ರಮಿಸಿ, ಸರಿಯಾದ ಸಮಯಕ್ಕೆ ನಿಷ್ಚಿತ ಸ್ಥಳವನ್ನು ಸೇರುತ್ತೆ. ಮಾರ್ಗದಲ್ಲಿ
ಯಾವುದೇ ಉತ್ತೇಜನಕ್ಕೆ ಒಳಗಾಗುವುದಿಲ್ಲ.ಯಾರು ಹೂವು ಎರಚಿದರೂ ದೃಷ್ಟಿಯನ್ನು ಅಕ್ಕಪಕ್ಕಕ್ಕೆ ಹೊರಳಿಸುವುದಿಲ್ಲ,
ಕಲ್ಲು ಎಸೆದರೂ ಕೆರಳುವುದಿಲ್ಲ.ಶಿಸ್ತುಬದ್ಧವಾಗಿ ಗುರಿಯನ್ನು ತಲಪುತ್ತೆ. ಘೋಷಣೆಗಳನ್ನು ಕೂಗಿ ಶಕ್ತಿಯನ್ನು
ವ್ಯರ್ಥ ಮಾಡಿಕೊಳ್ಳುವುದಿಲ್ಲ, ಬದಲಿಗೆ ಶಕ್ತಿಯ ಸಂಚಯಮಾಡಿಕೊಳ್ಳಲಾಗುತ್ತದೆ.ನೋಡುವವರಿಗೆ ಭಯವಾಗುವುದಿಲ್ಲ.
ಬದಲಿಗೆ ಭರವಸೆ ಮೂಡುತ್ತದೆ.ಪಥಸಂಚಲ ವೆಂದರೆ ಸಕ್ರಿಯ, ಸಚೇತ, ಜಾಗೃತ ದೇಶಭಕ್ತಿಯ ಒಂದು ವ್ಯಕ್ತರೂಪ.ಸಂಘಟನೆ
ಬಲವಾಗಲು ಹಾಗೂ ಸಜ್ಜನರಲ್ಲಿ ಭರವಸೆಯನ್ನು ಮೂಡಿಸಲು ಆಗಾಗ ಪಥಸಂಚಲನವಾಗುತ್ತದೆ.ನಮ್ಮದೇಶದಲ್ಲಿರುವ
ಬುದ್ಧಿಜೀವಿಗಳೆಂದು ಕರೆದುಕೊಳ್ಳುವವರು, ಸುಕ್ಯುಲರಿಸ್ಟರು ಮತ್ತು ಕಮ್ಯುನಿಸ್ಟರ ಬಾಯಲ್ಲಿ ಒಂದೇ ಮಾತು “ ಕೇಸರೀಕರಣ”. ಹಾಗೆಂದರೇನು? ಕೇಸರಿಯ ಮಹತ್ವವನ್ನು ಈ ದೇಶದ ಜನರಿಗೆ ತಿಳಿಸಿಕೊಡಬೇಕಾಗಿದೆ.ಕೇಸರೀ
ಬಣ್ಣ ಎಂದಾದರೂ ಯಾರಿಗಾದರೂ ಆತಂಕ ಉಂಟುಮಾಡಿದೆಯೇ? ಕೇಸರಿ ಬಣ್ಣವು ಮೂರು ಮಹಾನ್ ಗುಣಗಳ ಪ್ರತೀಕವಾಗಿದೆ.ಮೂರು ಭಾರತೀಯ ಜೀವನ ಮೌಲ್ಯಗಳು.ಮೊದಲನೆಯದು ಜೀವನವು ಪಾವನವಾಗುವುದು ಸಂಗ್ರಹ ಮಾಡುವುದರಿಂದಲ್ಲ, ದಾನಮಾಡುವುದರಿಂದ.ದೇಶವು ನಿನಗೆ ಏನು ಕೊಡುತ್ತದೆ, ಎಂದು ಅಪೇಕ್ಷಿಸುವುದಲ್ಲ, ನೀನು ದೇಶಕ್ಕೆ ಏನು ಕೊಡುತ್ತೀಯಾ? ಎಲ್ಲವನ್ನೂ ಕೊಟ್ಟಿರುವ ದೇಶಕ್ಕೆ ನಿನ್ನ ಕೊಡುಗೆ ಏನು? ದೇಶವು ಶಕ್ತಿಯುತವಾದರೆ ನೀನು ಸಹಜವಾಗಿ ಶಕ್ತಿಯುತನಾಗುವೆ. ಈದೇಶದ ಸಾದುಸಂತರೆಲ್ಲಾ ತಮ್ಮ ಸ್ವಂತಕ್ಕೆ ಏನೂ ಬಯಸದೆ ಸಮಾಜಕ್ಕಾಗಿ ಸರ್ವಸ್ವವನ್ನೂ ಕೊಟ್ಟರು. ಸಿದ್ದಗಂಗಾ ಮಠಾದೀಶರು ಇದಕ್ಕೊಂದು ಉದಾಹರಣೆಯಲ್ಲವೇ? ಅವರ ಸ್ವಂತಕ್ಕೆಂದು ಏನಿದೆ? ಎಲ್ಲವೂ ಸಮಾಜಕ್ಕಾಗಿ.ಅದರಿಂದಲೇ ಜನರು ಅವರಿಗೆ ನಡೆದಾಡುವ ದೇವರೆಂದು ಹೇಳಿದರು. ಕೇಸರಿಯ ಸಂದೇಶವೇ ದೇಶಕ್ಕಾಗಿ ಬದುಕುವುದು.ಕೇಶವ ಬಲಿರಾಮ ಹೆಡಗೇವಾರರು ನಮಗೆ ಕಲಿಸಿಕೊಟ್ಟ ಪಾಠವೇ ದೇಶಕ್ಕಾಗಿ ಬದುಕು.ದೇಶದ ಉನ್ನತಿಯೇ ನಿನ್ನ ಉನ್ನತಿ. ದೇಶ ದುರ್ಬಲವಾದರೆ ನೀನು ಸತ್ತಂತೆ. ಇದು ನಾವು ಕಲಿಯುತ್ತಿರುವ ಪಾಠ. ದೇಶಕ್ಕಾಗಿ ಕೊಟ್ಟವನು ಸತ್ತಮೇಲೂ ಅಮರನಾಗುತ್ತಾನೆ.ಅವನ ಹೆಸರು ಚಿರಸ್ಥಾಯಿ. ಲಕ್ಷ-ಲಕ್ಷ ಸಂಪಾದಿಸಲು ಯೋಗ್ಯತೆ ಇರುವ ಸಹಸ್ರಾರು ಯುವಕರು ತಮ್ಮ ಸಂಪಾದನೆಯನ್ನು ಎಡಗಾಲಲ್ಲಿ ಒದ್ದು ಇಂದಿಗೂ ಸಂಘಕಾರ್ಯದಲ್ಲಿ ಧುಮುಕಿ ರಾಷ್ಟ್ರಕಾರ್ಯದಲ್ಲಿ ಮಗ್ನರಾಗಿದ್ದಾರೆ.ಇಂಥಹ ಉಧಾಹರಣೆ ಪ್ರಪಂಚದಲ್ಲಿ ಮತ್ತೊಂದು ಸಿಗುವುದಿಲ್ಲ.ಕೇಸರೀ ಕರಣವೆಂದರೆ ಇದು. ಕೇಸರಿಯ ಇನ್ನೊಂದು ಸಂದೇಶವಿದೆ. ನಮ್ಮ ದೇಶದ ಎಲ್ಲಾ ವೀರಪುರುಷರು ಆಕ್ರಮಣಕಾರರ ಹುಟ್ಟಡಗಿಸುವುದಕ್ಕಾಗಿ, ಧರ್ಮದ ಸಂರಕ್ಷಣೆಗಾಗಿ, ಸಜ್ಜನರ ಸಂರಕ್ಷಣೆಗಾಗಿ ಕ್ಷಾತ್ರತೇಜದಿಂದ ಹೋರಾಟವನ್ನು ಕೇಸರಿ ಬಣ್ಣದ ಭಗವಾಧ್ವಜದಡಿಯಲ್ಲೇ ಮಾಡಿದರು.ಧರ್ಮವನ್ನು ಎತ್ತಿಹಿಡಿಯಲು ಅವರೆಲ್ಲರಿಗೂ ಪ್ರೇರಣೆಯ ಸ್ರೋತ ಭಗವಾಧ್ವಜವೇ ಆಗಿತ್ತು.ಕೇಸರೀ ಬಣ್ಣವು ಸಜ್ಜನ ಶಕ್ತಿಯ ಪ್ರತೀಕ.ಕೇಸರೀಕರಣ ವಾಗುತ್ತಿದೆ ಎಂದರೆ ಈ ದೇಶದಲ್ಲಿ ದೈವೀಶಕ್ತಿಯ ನಿರ್ಮಾಣವಾಗುತ್ತಿದೆ ಎಂದೇ ಅರ್ಥ.ಭಗವಾಧ್ವಜದ ಮತ್ತೊಂದು ಗುಣ ವೆಂದರೆ ಸಾಮರಸ್ಯ. ಭಗವಾಧ್ವಜದ ಪ್ರಭಾವವಿರುವಲ್ಲಿ ಧನಿಕ-ಬಡವ, ಉಚ್ಛ-ನೀಚ, ಸ್ಪೃಶ್ಯ-ಅಸ್ಪೃಶ್ಯವೆಂಬ ಭೇಧಕ್ಕೆ ಆಸ್ಪದವಿರುವುದಿಲ್ಲ. ಸಂಘದಲ್ಲಿ ಧನಿಕರು, ಬಡವರು, ಎಲ್ಲಾಜಾತಿಯವರೂ ಇದ್ದಾರೆ. ಅವರಲ್ಲಿ ಸಂಘರ್ಶವಿಲ್ಲ.ಬದಲಿಗೆ ಸಾಮರಸ್ಯವಿದೆ.ಇಲ್ಲಿ ಒಂದು
ಸುಂದರವಾದ ಕೌಟುಂಬಿಕ ಭಾವವಿದೆ.ಅದಕ್ಕೇ ಇರಬೇಕು ನಮ್ಮನ್ನು ಎಲ್ಲರೂ ಸಂಘ ಪರಿವಾರವೆಂದು ಗುರುತಿಸಿದ್ದಾರೆ.
ಇಂತಹಾ ಕೇಸರೀ ಕರಣವಾಗಬೇಕು. ಭಾರತವು ಕೇಸರೀಕರಣವನ್ನು ಮಾನ್ಯಮಾಡಿದಾಗ ಜಗತ್ತೂ ಕೇಸರೀ ಕರಣವನ್ನು
ಒಪ್ಪುತ್ತದೆ.ಭಾರತದ ಆತ್ಮ ವೆಂದರೆ ಧರ್ಮ.ಈ ಧರ್ಮವನ್ನು ನಂಬಿರುವವರು ನಾವು. ಧರ್ಮವೆಂದರೆ ಜಾತಿ, ಪಂಥ, ಸಂಪ್ರದಾಯಗಳಲ್ಲ.ಜೀವನದಲ್ಲಿ ಮಾಡಲೇ ಬೇಕಾದ ಕರ್ತವ್ಯವನ್ನು ಧರ್ಮವೆಂದು ಕರೆದಿದ್ದೇವೆ.ನಮ್ಮದು
ರಾಷ್ಟ್ರವಾದ. ಅದರ ಆವಾಹನೆಮಾಡಿರುವ ನಾವು ಅದಕ್ಕಾಗಿ ಕಂಕಣಬದ್ಧರಾಗಿದ್ದೇವೆ. ದೇವನೊಬ್ಬ ನಾಮ ಹಲವು, ಜಾತಿಗಳು ನೂರಾರಿದ್ದರೂ ನೀತಿಯೊಂದೇ.ಭಾಷೆಗಳು ಹಲವಾದರೂ ಭಾವ ವೊಂದೇ.ಪ್ರಾಂತಗಳು ಹಲವಿದ್ದರೂ
ದೇಶ ಒಂದೇ.ದೇಶಗಳು ಹಲವಾರಿದ್ದರೂ ಜಗತ್ತು ಒಂದೇ.ಇಂತಹಾ ಒಂದು ಸಮನ್ವಯವೇ ನಮ್ಮ ದೇಶದ ವಿಚಾರರಲಹರಿ. ಜಾತಿಗಳ ಹೆಸರಲ್ಲಿ,ಭಾಷೆಗಳಹೆಸರಲ್ಲಿ, ಪ್ರಾಂತಗಳ ಹೆಸರಲ್ಲಿ ಹೊಡೆದಾಡಿ ರಕ್ತ ಹರಿಸುವುದು ನಮ್ಮ ದೇಶದ ಸಂಸ್ಕೃತಿಯಲ್ಲ. ರಾಷ್ಟ್ರೀಯತೆಯ ಜಾಗೃತಿ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ|

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ|

ನೀನಿರುವ ಕಾಲದಲಿ ಪರಿಮಳವ ಹರಡಿ

ಬಹುಬೇಗ ನೀ ಬಾಡುವೆಯಲ್ಲಾ|

ನಿನ್ನನಾರು ಬಹುಕಾಲ ಇರಬೇಡವೆಂದವರು?

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ||೧||

ನಿನ್ನನೇ ತೇಯುತ್ತಾ ಕರಗಿ ಹೋಗುವೆ ನೀನು

ಅಳಿಯುವಾಗಲೂ ಅಳದೆ ಕೊಡುವೆ ಶ್ರೀ ಗಂಧವನು|

ನಿನ್ನಕೊರಡೆಂದ ನಾ ಕೊನೆಗಾಲದಲ್ಲಿ

ಸುಟ್ಟುಬೂದಿಯಾಗದಿರೆ ಕೊಳೆತು ನಾರುವೆನಿಲ್ಲಿ

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ||೨||

ನಿನ್ನನೇ ಉರಿಸುತ್ತಾ ಕೊಡುವೆ ಬೆಳಕನ್ನು|

ನಿನ್ನನರಿಯದೆ ಆದೆ ಬಿರುಗಾಳಿ ನಾನು |

ಭೇಧಭಾವ ಅರಿಯದ ಜ್ಯೋತಿ ನೀನು|

ನಿನ್ನ ಬೆಳಕಲಿ ಬದುಕು ಸವೆಸುವವ ನಾನು

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ||೩||

ಮೆಕಾಲೆ ಶಿಕ್ಷಣದಿಂದ ಮಹರ್ಷಿ ಶಿಕ್ಷಣದ ಕಡೆಗೆ

[ಮಿತ್ರ ಅನಂತನಾರಯಣ ಒಂದು ಲೇಖನ ಕಳಿಸಿಕೊಟ್ಟಿದ್ದಾರೆ.ಶಾಲೆಯ ಸ್ಮರಣ ಸಂಚಿಕೆಗಾಗಿ ಬರೆದಿರುವ ಈ ಲೇಖನವನ್ನು ಪ್ರಕಟಿಸಿರುವೆ]

ದೆಹಲಿಯಲ್ಲಿ ಅಂತರ್ ಶಾಲಾ ಚಿತ್ರಕಲಾಸ್ಪರ್ಧೆ ಯೊಂದು ನಡೆದಿತ್ತು. ಪ್ರಥಮ ಬಹುಮಾನಕ್ಕೆ ಒಂದು ಚಿತ್ರ ಆಯ್ಕೆಯಾಯ್ತು. ಸಂಘಟಕರು ಆಚಿತ್ರವನ್ನು ನೋಡಿದವರೇ ಬಹುಮಾನ ಘೋಷಣೆ ಯಾಗುವ ಮುಂಚೆ ಚಿತ್ರ ಬರೆದ ಮಗುವನ್ನು ಕರೆಸಿದರು. ಮಗುವಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.

-" ಮಗು ಈ ಚಿತ್ರ ಯಾವುದು?"

ಮಗು-" ರಾಷ್ಟ್ರಪತಿಗಳು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಿರುವ ದೃಶ್ಯ."

-ಧ್ವಜ ಸ್ಥಂಭದ ಬುಡದಲ್ಲಿರುವ ಚಿತ್ರ ಯಾವುದು?

ಮಗು-" ಅದು ಬಾಂಬ್"

-ಧ್ವಜಾರೋಹಣದ ಸಮಯದಲ್ಲಿ ಬಾಂಬ್ ಏಕೆ?

ಮಗು-" ರಾಷ್ಟ್ರಪತಿಗಳು ಧ್ವಜಾರೋಹಣಮಾಡುವಾಗ ಬಾಂಬ್ ಸಿಡಿಯುತ್ತೆ, ರಾಷ್ಟ್ರಪತಿಗಳು ಸಾಯುತ್ತಾರೆ, ಶಾಲೆಗೆ ರಜಾ ಕೊಡುತ್ತಾರೆ"

-ಅಲ್ಲಾ ಮಗು ಬಾಂಬ್ ಸಿಡಿದರೆ ರಾಷ್ಟ್ರಪತಿಗಳಷ್ಟೇ ಅಲ್ಲ ಅಲ್ಲಿರುವ ಎಲ್ಲಾ ಜನಗಳೂ ಸಾಯುತ್ತಾರೆ, ಅಲ್ಲಿರುವ ನೀನೂ ಕೂಡ.

ಆಗ ಮಗು ಸ್ವಲ್ಪ ಯೋಚಿಸಿ-" ಚಿತ್ರವನ್ನು ಕೊಡಿ ಸರಿಮಾಡಿ ಕೊಡುತ್ತೇನೆ" ಎಂದು ಹೇಳಿ ಚಿತ್ರವನ್ನು ಹಿಂದಿರುಗಿ ಪಡೆಯತ್ತದೆ. ತೀರ್ಪುಗಾರರು ಭಾವಿಸುತ್ತಾರೆ " ಬಾಂಬ್ ಚಿತ್ರವನ್ನು ಮಗು ಅಳಿಸಬಹುದೆಂದು". ಮಗು ಚಿತ್ರವನ್ನು ಸರಿಪಡಿಸಿ ಹಿಂದಿರುಗಿಸುತ್ತೆ. ತೀರ್ಪುಗಾರರು ನೋಡುತ್ತಾರೆ. ಅದರ ಮೇಲೆ " ಮೇಡ್ ಇನ್ ಇಂಡಿಯಾ" ಎಂದು ಬರೆದಿದೆ. ಮಗು ಹೇಳುತ್ತೆ " ಈಗ ನೋಡಿ ಬಾಂಬ್ ಸಿಡಿಯುವುದೇ ಇಲ್ಲ"

ನೋಡಲು ಇದೊಂದು ಚಿಕ್ಕ ಘಟನೆ. ಆದರೆ ಇದರ ಹಿಂದೆ ಅದೆಂತಹಾ ಮನಸ್ಥಿತಿ ಇದೆ! ದೇಶದ ಅತ್ಯುನ್ನತ ಹುದ್ಧೆಯ ಬಗ್ಗೆ ಮಗುವಿನ ಮನೋಭಾವ ಏನು? ರಾಷ್ಟ್ರಪತಿ ಸತ್ತರೆ ಶಾಲೆಗೆ ಒಂದು ದಿನ ರಜೆ! ಮಗುವಿಗೆ ಆನಂದ. ಇದು ನಮ್ಮಇಂದಿನ ಶಿಕ್ಷಣದ ಶಿಕ್ಷಣದ ಪರಿಣಾಮ.

ಹದಿನೆಂಟನೆಯ ಶತಮಾನದ ಆದಿಯಲ್ಲಿ ತಕ್ಕಡಿ ಹಿಡಿದು ಕಾಲಿಟ್ಟ ಬ್ರಿಟಿಷರು ಕೊನೆಗೆ ಎರಡು ಶತಮಾನಗಳು ನಮ್ಮನ್ನಾಳಿದರು.ಆದರೆ ಆಗ ನಾವು ಸಾಂಸ್ಕೃತಿಕವಾಗಿ ಎಷ್ಟು ಸಮೃದ್ಧವಾಗಿದ್ದೆವೆಂದರೆ ೧೮೩೫ ರ ಫೆಬ್ರವರಿ ೨ ರಂದು ಮೆಕಾಲೆಯು ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣ ವನ್ನು ಗಮನಿಸಬೇಕು-" ನಾನು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ, ನಾನುಒಬ್ಬ ಬಿಕ್ಷುಕನನ್ನು ನೋಡಲಿಲ್ಲ, ಒಬ್ಬ ಕಳ್ಳನನ್ನು ನೋಡಲಿಲ್ಲ,. ಭಾರತವು ಸಂಪದ್ಭರಿತವಾಗಿದೆ. ಭಾರತೀಯರ ನೈತಿಕತೆಯು ಅತ್ಯಂತ ಶ್ರೇಷ್ಠವಾದ ಮಟ್ಟದ್ದು, ಆದ್ದರಿಂದ ಭಾರತೀಯರ ನೈತಿಕ ಶಕ್ತಿಗೆ ಬೆನ್ನೆಲುಬಾಗಿರುವುದು ಭಾರತದ ಅಂತ: ಶಕ್ತಿ, ಅಲ್ಲಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಪರಂಪರೆ. ಈ ಅಂತ:ಶಕ್ತಿಯನ್ನು ನಮ್ಮ ಆಂಗ್ಲಶಿಕ್ಷಣದಿಂದ ನಾಶ ಪಡಿಸಿ ಇಂಗ್ಳೀಶ್ ಶಿಕ್ಷಣದ ವ್ಯಾಮೋಹವನ್ನು ಎಷ್ಟರ ಮಟ್ಟಿಗೆ ಬೆಳೆಸ ಬೇಕೆಂದರೆ ಭಾರತದಸಂಸ್ಕೃತಿಯ ಬಗ್ಗೆ ಅಲ್ಲಿನ ಪರಂಪರೆಯ ಬಗ್ಗೆ ಅವರಿಗೆ ತಿರಸ್ಕಾರ ಬರಬೇಕು, ಆಗಮಾತ್ರ ನಾವು ಅವರನ್ನು ಆಳಲು ಸಾಧ್ಯ."
ಬ್ರಿಟಿಶರು ಈ ಒಂದು ಪ್ರಯತ್ನದಲ್ಲಿ ಎಷ್ಟು ಸಫಲರಾದರೆಂದರೆ ಅವರ ಶಿಕ್ಷಣದ ಮೂಲಕ ಒಂದು ಬುದ್ಧಿವಂತವರ್ಗವನ್ನು ಇಲ್ಲಿಯೇ ಸೃಷ್ಟಿಸಿ, ಅವರ ಮೂಲಕವೇ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವ, ಪಾಷ್ಚಿಮಾತ್ಯ ಸಂಸ್ಕೃತಿಯೆಂದರೆ ಶ್ರೇಷ್ಠವೆಂದು ಭ್ರಮಿಸುವಂತೆ ಮಾಡಿ, ಕೊನೆಗೆ ಯಾವ ಹಂತವನ್ನು ನಾವು ತಲುಪಿದೆ ವೆಂದರೆ ಮೆಕಾಲೆ ಹೇಳಿದಂತೆ " ಚರ್ಮ ಮಾತ್ರ ಭಾರತೀಯರದಾಗಿರಬೇಕು, ಆದರೆ ಒಳಗೆಲ್ಲಾ ಇಂಗ್ಳೀಶ್ ಮಯವಾಗಿಬಿಡಬೇಕು,"

ದೆಹಲಿಯಲ್ಲಿ ಚಿತ್ರ ಬರೆದು ಬಹುಮಾನ ಗಿಟ್ಟಿಸಿದ ಮಗು ಒಂದು ಉಧಾಹರಣೆ ಮಾತ್ರ.ಮಗುವಿನಲ್ಲಿ ಅತ್ಯಂತ ಬುದ್ಧಿವಂತಿಕೆ ಇದೆ.ಆದರೆ ಈ ದೇಶದ ಬಗ್ಗೆ, ನಮ್ಮ ಪರಂಪರೆಯ ಬಗ್ಗೆ , ಆ ಮಗುವಿನಲ್ಲಿ ಶ್ರದ್ಧೆ, ದೇಶಭಕ್ತಿ ,ಗೌರವವನ್ನು ಮೂಡಿಸುವಂತಹ ಸಂಸ್ಕಾರ, ಶಿಕ್ಷಣವನ್ನು ಕೊಡಬೇಕಾದವರು ಮಾಡಿದ್ದೇನು? ಒಂದು ದೇಶದ ಮಣ್ಣಿನ ಕಣ ಕಣ ಗಳಬಗ್ಗೆ ಗೌರವ ಮೂಡಿಸಬೇಕಾದ ಶಿಕ್ಷಣವು ಆ ದೇಶದ ಬಗ್ಗೆ ತಿರಸ್ಕಾರ ಮೂಡಿಸುವಂತಾದರೆ ಆ ದೇಶದ ಗತಿ ? ಮೆಕಾಲೆಯ ಉದ್ಧೇಶವೂ ಇದೇ ಆಗಿತ್ತಲ್ಲವೇ?

ಇಂದಿಗೂ ಅದೇ ಮೆಕಾಲೆ ಮಾದರಿಯ ಶಿಕ್ಷಣಪದ್ದತಿ ಮುಂದುವರಿದಿರುವುದು ನಮ್ಮ ದೇಶದ ದುರ್ದೈವ.ವಿಶ್ವವಿದ್ಯಾಲಯಗಳಿಂದ ಹೊರಬರುವ ಪದವೀಧರನೊಬ್ಬನ ಗುರಿಯಾದರೂ ಏನು? ಅತೀ ಕಡಿಮೆ ಕೆಲಸ ಮಾಡಿ ಅತೀ ಕಡಿಮೆ ಸಮಯದಲ್ಲಿ ಅತಿಹೆಚ್ಚು ಹಣ ಗಳಿಕೆ, ಕೋಟಿ ಕೋಟಿ ಸಂಪಾದಿಸುವುದು ಹೇಗೆ? ಎಲ್ಲಾ ರಂಗದಲ್ಲೂ ಬ್ರಷ್ಟಾಚಾರ. ಸ್ವಾರ್ಥಕ್ಕಾಗಿ ದೇಶದ ಭದ್ರತಾ ವ್ಯವಸ್ಥೆಯ ರಹಸ್ಯಬಯಲು ಮಾಡುವ ವರೆಗೂ ಬ್ರಷ್ಟಾಚಾರ!!

ಕವಿವಾಣಿಯೊಂದು ಹೀಗಿದೆ. "ಮುಂದೆ ಗುರಿ,ಹಿಂದೆ ಗುರು, ಮಧ್ಯೆ ಸಾಗಿದೆ ವೀರರಾ ದಂಡು" ಆದರೆ ಈಗ ಮುಂದೆ ಗುರಿಯೂ ಇಲ್ಲ, ಹಿಂದೆ ಗುರಿಯೂ ಇಲ್ಲ, ಅಂತೂ ಸಾಗಿದೆ ಕುರಿಗಳಾ ಹಿಂಡು.

ಇಂತಹ ಕೆಟ್ಟ ಸ್ಥಿತಿಗೆ ಪರಿಹಾರ?

ಮೆಕಾಲೆ ಮಾದರಿಯ ಶಿಕ್ಷಣದಿಂದ ಮಹರ್ಷಿ ಮಾದರಿಯ ಶಿಕ್ಷಣದ ಕಡೆಗೆ. ಮಹರ್ಷಿ ಮಾದರಿಯ ಶಿಕ್ಷಣ ಅಂದರೇನು? ಅದು ಹೇಗಿರ ಬೇಕು?

ಮೆಕಾಲೆಯ ಮಾತುಗಳನ್ನೇ ನೋಡಿ " ಭಾರತೀಯರ ನೈತಿಕ ಶಕ್ತಿಗೆ ಬೆನ್ನೆಲುಬಾಗಿರುವುದು ಭಾರತದ ಅಂತ: ಶಕ್ತಿ, ಅಲ್ಲಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಪರಂಪರೆ."

ಯಾವ ನೈತಿಕ ಶಕ್ತಿಯನ್ನು ನಾಶಪಡಿಸಲು ಮೆಕಾಲೆ ಶಿಕ್ಷಣ ರೂಪಿತ ವಾಯ್ತೋ ಅದೇ ನೈತಿಕ ಶಕ್ತಿಯನ್ನು ಪುನ: ಜಾಗೃತ ಗೊಳಿಸುವುದೇ ಮಹರ್ಷಿ ಮಾದರಿಯ ಶಿಕ್ಷಣ. ಈ ದೇಶದ ಮಣ್ಣಿನ ಬಗ್ಗೆ ಗೌರವ ಮೂಡಿಸುವ, ಇಲ್ಲಿನ ನೈಜ ಸಂಸ್ಕೃತಿ ಪರಂಪರೆಗಳನ್ನು ಪರಿಚಯಿಸುವ, ಅದರ ಬಗ್ಗೆ ಶ್ರದ್ಧೆ ಮೂಡಿಸುವ, ದೇಶಭಕ್ತಿಯನ್ನು ಮೂಡಿಸುವ ಶಿಕ್ಷಣ.

ಅದು ಹೇಗಿರ ಬೇಕು?

  • ಯುವಜನಾಂಗಕ್ಕೆ ಪ್ರಾಚೀನ ಭಾರತದ ನಮ್ಮ ಋಷಿಮುನಿಗಳ ಸಾಧನೆಯ ನೈಜ ಪರಿಚಯ.
  • ಪಠ್ಯಕ್ರಮದಲ್ಲಿ ಪ್ರಾಚೀನ ಭಾರತದ ಜ್ಞಾನ - ವಿಜ್ಞಾನ ದ ಪರಿಚಯ.
  • ನಮ್ಮದು ಸೋಲಿನ ಇತಿಹಾಸವಲ್ಲ,ಬದಲಿಗೆ ಸಂಘರ್ಷದ ಇತಿಹಾಸ
  • ತ್ಯಾಗ ಬಲಿದಾನಗಳಿಂದ ತಮ್ಮ ಜೀವನ ಸಾರ್ಥಕ ಪಡಿಸಿಕೊಂಡ ಮಹಾಪುರುಷರ ಜೀವನದ ಪರಿಚಯ
  • ರಾಷ್ಟ್ರೀಯ ಸ್ವಾಭಿಮಾನ-ಸ್ವಾವಲಂಭನೆಗೆ ಪೂರಕ ಪಠ್ಯಕ್ರಮ.
  • ಹಕ್ಕಿಗಾಗಿ ಹೋರಾಟವಲ್ಲಾ ಬದಲಿಗೆ ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುವ ಮನೋಭಾವ ಮೂಡಿಸುವ ಶಿಕ್ಷಣ,
  • ಧರ್ಮ ಅಧೀಷ್ಠಿತ ಜೀವನ ಕ್ರಮ.

ಈ ನಿಟ್ಟಿನಲ್ಲಿ ೧೯೭೭ ರಿಂದ " ವಿದ್ಯಾಭಾರತಿಯು " ಕಾರ್ಯೋನ್ಮುಖವಾಗಿದೆ. ರಾಷ್ಟ್ರಾದ್ಯಂತ ಸುಮಾರು ೨೦ ಸಹಸ್ರ ಶಿಕ್ಷಣ ಸಂಸ್ಥೆಗಳು, ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ೨೫ ಲಕ್ಷ ವಿದ್ಯಾರ್ಥಿಗಳಿಗೆ ಭಾರತೀಯ ಶಿಕ್ಷಣ ಸಂಸ್ಕಾರ ಈಗಾಗಲೇ ನಡೆಯುತ್ತಿದೆ. ಗುಡ್ದಗಾಡುಗಳಲ್ಲಿ ಶಿಕ್ಷಣದಿಂದ ವಂಚಿತರಾದ ವನವಾಸಿಗಳಿಗೆ ಸಾವಿರಾರು ಸಮರ್ಪಿತ ಕಾರ್ಯಕರ್ತರಿಂದ ಶಿಕ್ಷಣ.

ರಾಷ್ಟ್ರನಿಷ್ಠ , ಸಂಸ್ಕಾರ ಭರಿತ ಶಿಕ್ಷಣ ನೀಡುವುದರ ಮೂಲಕ ರಾಷ್ಟ್ರದಲ್ಲಿ ಸಮರಸ, ಸುಸಂಪನ್ನ, ಸುಸಂಸ್ಕೃತ, ಹಾಗೂ ಸಮರ್ಪಿತ ಜೀವನವನ್ನು ನಡೆಸಬಲ್ಲ ಯುವಜನಾಂಗವನ್ನು ನಿರ್ಮಿಸುವ ರಾಷ್ಟ್ರೀಯ ಶಿಕ್ಷಣ ಪದ್ದತಿಯನ್ನು ರೂಪಿಸಿ ಮಹರ್ಷಿಮಾದರಿಯ ಶಿಕ್ಷಣ ವಿಕಾಸವೇ ವಿದ್ಯಾಭಾರತಿಯ ಗುರಿ.

ಪ್ಯಾಟಿಗೆ ಇಸ್ಕೂಲ್ಗೆ ಹೋಗಿಲ್ಲಾ

ಕೃಷಿ ಬಗ್ಗೆ ಸಂಶೋಧನೆಗಾಗಿ ಒಬ್ಬ ವಿದ್ಯಾರ್ಥಿಯು ಹಳ್ಳಿಗೆ ಹೋಗುತ್ತಾನೆ. ಒಂದು ಹೊಲ. ಅದರಲ್ಲಿ ಒಂದು ಎತ್ತಿನ ಗಾಣ ಕಟ್ಟಿದೆ. ಎತ್ತು ಅದರಪಾಡಿಗೆ ಅದು ಸುತ್ತುತ್ತಿದೆ. ಗಾಣದಿಂದ ಬಂದ ಎಣ್ಣೆ ಡಬ್ಬ ತುಂಬುತ್ತಿದೆ.ಅಲ್ಲಿ ಯಾರೂ ಮನುಷ್ಯರು ಇಲ್ಲ. ವಿದ್ಯಾರ್ಥಿ ಸುತ್ತ ಮುತ್ತ ನೋಡುತ್ತಾನೆ. ಸಮೀಪದಲ್ಲಿಯೇ ಒಬ್ಬ ರೈತ ಹೊಲ ಉಳುತ್ತಿರುತ್ತಾನೆ. ಅವನ ಹತ್ತಿರ ಹೋಗಿ ವಿಚಾರಿಸುತ್ತಾನೆ. ಆ ಗಾಣ ಯಾರದು?

ರೈತ ಹೇಳುತ್ತಾನೆ.-" ನನ್ನದೇ ಸ್ವಾಮಿ"

- ನಿನಗೆ ಬುದ್ಧಿ-ಗಿದ್ಧಿ ಇದ್ಯಾ? ಎಣ್ಣೆ ಗಾಣ ತಿರುಗಲು ಬಿಟ್ಟು ಇಲ್ಲಿ ಬಂದು ಇಲ್ಲಿ ಹೊಲ ಉಳುತ್ತಿದ್ದೀಯಲ್ಲಾ? ಎಣ್ಣೆ ಡಬ್ಬ ತುಂಬಿ ಹೊರಚೆಲ್ಲಿದರೆ ಎಷ್ಟು ನ್ಯಾಶನಲ್ ವೇಸ್ಟ್ ಆಗುತ್ತೆ ಗೊತ್ತಾ?

- ಅಂಗಂದ್ರ ನಂಗ್ ಅರ್ಥ ಆಗಲಿಲ್ಲ ಬುದ್ಧಿ.

- ಎಣ್ಣೆ ಡಬ್ಬ ತುಂಬಿ ಹೆಚ್ಚಾಗಿ ಹೊರಚೆಲ್ಲಿದರೆ ನಷ್ಟ ಆಗುತ್ತೆ ಅಂತಾ.ಇಷ್ಟೂ ಬುದ್ಧಿ ಇಲ್ವಲ್ಲಾ ನಿನಗೆ.

- ಅಂಗೆಲ್ಲಾ ಏನೂ ಆಕ್ಕಿಲ್ಲ ಬುದ್ಧಿ.

-ಅದು ಹೇಗೆ? ನೀನು ಇಲ್ಲಿದ್ದೀಯ.ವೇಸ್ಟ್ಆಗುಲ್ಲಾ ಅಂತೀಯಲ್ಲಾ?

-ನೋಡಿ ಬುದ್ಧಿ, ನಾನು ನಾಲ್ಕು ಸಾಲು ಉಳ್ಮೆ ಮಾಡೋ ಹೊತ್ತಿಗೆ ಒಂದು ಡಬ್ಬ ಎಣ್ಣೆ ತುಂಬಿರ್ತದೆ. ಇಲ್ಲಿ ಉಳಾದು ನಿಲ್ಸಿ ಅಲ್ಲಿ ಓಯ್ತೀನಿ. ಎಣ್ಣೆ ಡಬ್ಬ ಬದಲಿಸ್ತೀನಿ. ಬತ್ತೀನಿ.

-ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳ್ತೀಯಾ? ನೀನು ಇಲ್ಲಿರುವಾಗ ಗಾಣದೆತ್ತು ತಿರುಗೋದು ನಿಲ್ಲಿಸಿಬಿಟ್ರೆ!

- ಇಲ್ಲಾ ಬುದ್ಧಿ, ಅಂಗಾಗಾಕಿಲ್ಲ. ಅದರ ಕುತ್ತಿಗೆಗೆ ಗಂಟೆ ಕಟ್ಟೀವ್ನಿ.ಅದು ಸುತ್ತುತ್ತಿರೋವಾಗ ನನಗೆ ಗಂಟೆ ಸದ್ದು ಕೇಳ್ತಾ ಇರ್ತದೆ.

- ಎತ್ತು ಏನಾದರೂ ನಿ೦ತಲ್ಲೇ ಕತ್ತು ಅಲ್ಲಾಡಿಸುತ್ತಾ ಗಂಟೆ ಶಬ್ಧ ಮಾಡುತ್ತಿದ್ದರೆ?

-ಅದು ನಿಮ್ಮಂಗೆ ಪ್ಯಾಟಿಗೆ ಇಸ್ಕೂಲ್ಗೆ ಹೋಗಿಲ್ಲಾ ಬುದ್ಧಿ.

ನಮ್ಮ ಒಳ್ಳೆತನ ಅತಿಯಾದಾಗ

ತುಂಬಾ ದಿನಗಳಿಂದ ನನ್ನ ತಲೆ ತಿನ್ನುತ್ತಿರುವ ಒಂದು ವಿಚಾರವನ್ನು ಸಂಪದಿಗರಿಗೆ ವರ್ಗಾಯಿಸಿ ಅವರ ಅಭಿಪ್ರಾಯವನ್ನು ಮಾನ್ಯ ಮಾಡಿ ನಾನು ಹಗುರವಾಗಬೇಕೆಂದು ಈ ಬರಹ. ನಮ್ಮ ಕಿಟ್ಟಿ ರಿಟೈರ್ ಆಗಿ ನಾಲ್ಕು ವರ್ಷಗಳಾಯ್ತು. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ. ಯಾರದೂ ಮದುವೇನೂ ಅಗಿಲ್ಲ. ಮಗ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ ಅಂತಾ ತರ್ತೀದಾನೆ. ಅವರ ಮನೆಯಲ್ಲಿರಬೇಕಾದ ಜನರೆಷ್ಟು? ಗಂಡ ಹೆಂಡತಿ ಮೂರು ಮಕ್ಕಳು ಸೇರಿ ಐದು ಜನ. ಅಲ್ವಾ? ಅಲ್ಲ. ಅವರ ನಾಲ್ಕು ಚದರ ಮನೇಲಿ ಹತ್ತು ಜನ ಇದ್ದಾರೆ. ನೀವು ಊಹಿಸ ಬಹುದೇನೋ... ಅವರ ತಂದೆ, ತಾಯಿ ಅಣ್ಣತಮ್ಮಂದಿರು ಎಲ್ಲಾ ಜೊತೆಯಲ್ಲಿರಬಹುದೆಂದು. ಉಹೂ... ಅವರ್ಯಾರೂ ಅಲ್ಲ. ಅವನ ಜೊತೆಯಲ್ಲಿರುವವರು ಅವರ ಇಬ್ಬರುಅಕ್ಕಂದಿರು,ಭಾವ, ಅಕ್ಕನ ಮಗಳು ಮೊಮ್ಮಗಳು. ಅವರ ಅಕ್ಕಂದಿರ ಸಂಸಾರದಲ್ಲಿ ಅದೇನೋ ತಾಪತ್ರಯ.ಇರಲಿ. ನಮ್ಮ ಕಿಟ್ಟಿಯಾದರೂ ಸಮೃದ್ಧ ವಾಗಿದ್ದಾನೆಯೇ? ಅದೂ ಇಲ್ಲ. ಊರ ಮಂದಿ ಹತ್ತಿರವೆಲ್ಲಾ ಮೈತುಂಬಾ ಸಾಲ. ಅಷ್ಟು ದೊಡ್ದ ಸಂಸಾರ ಹೊರೆಯ ಬೇಕಲ್ಲಾ!! ಇನ್ನು ಎರಡನೆಯ ಉಧಾಹರಣೆ. ಶಂಕರ ತನ್ನ ಪತ್ನಿ ಇಬ್ಬರು ಮಕ್ಕಳೊಡನೆ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿ ಒಬ್ಬರಿಗೆ ಕೆಟ್ಟವನೆನಿಸದೆ ತನ್ನ ಪಾಡಿಗೆ ತಾನು ಬದುಕುತ್ತಿರುವ ಹೈಸ್ಕೂಲು ಶಿಕ್ಷಕ. ಅವರಪ್ಪ-ಅಮ್ಮ ಹಾಗೂ ಅತ್ತೆ-ಮಾವ ಕೂಡ ಇವರ ಮನೆಯಲ್ಲೇ ವಾಸ. ಇವರ ಮಾವ ನಿವೃತ್ತ ಉದ್ಯೋಗಿ.ಅವರಿಗೆ ನಾಲ್ಕು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಎಲ್ಲರೂ ಚೆನ್ನಾಗಿಯೇ ಬೆಂಗಳೂರು, ಮೈಸೂರುಗಳಲ್ಲಿ ಇದ್ದಾರೆ. ಆದರೆ ಇವರು ಮಾತ್ರ ಅಳಿಯನ ಮನೆಯಲ್ಲಿಯೇ ಬಹುಪಾಲು ಜೀವನ.ಜೊತೆಗೆ ಒಮ್ಮೊಮ್ಮೆ ಅಪ್ಪ-ಅಮ್ಮ ಹುಷಾರು ತಪ್ಪಿದರೆ ಅವರನ್ನು ಯಾವುದಾದರೂ ಆಸ್ಪತ್ರೆಗೆ ಸೇರಿಸ ಬೇಕಾಗುತ್ತೆ. ಅದೇ ವೇಳೆ ಅವರ ಮಾವನಿಗೂ ಆರೋಗ್ಯ ಕೆಟ್ಟಿದ್ದುಂಟು. ಇಂತಹಾ ಸಂದರ್ಭ ಗಳಲ್ಲಿ ಶಂಕರನ ಗೋಳು ನೋಡ ಬೇಕು! ಹೆಂಡತಿಯದು ಒಂದು ನರ್ಸಿಂಗ್ ಹೋಂ ಡ್ಯೂಟಿಯಾದರೆ ಶಂಕರನದು ಇನ್ನೊಂದು ನರ್ಸಿಂಗ್ ಹೋಮ್ ಡ್ಯೂಟಿ. ಇಂತಹ ಸಂದರ್ಭ ನೋಡಿದಾಗಲೆಲ್ಲಾ ಶಂಕರನ ಬಗ್ಗೆ ಅಯ್ಯೋ ಎನಿಸುತ್ತೆ. " ಅಲ್ಲಾ ಶಂಕರ ನೀನು ನಿಮ್ಮ ಅಪ್ಪ-ಅಮ್ಮ ನನ್ನೇನೋ ಇಟ್ಟುಕೊಂಡಿದ್ದೀಯಾ, ಸರಿ. ಅತ್ತೆ-ಮಾವ ಏಕೆ? ಅವರಿಗೆ ಗಂಡು ಮಕ್ಕಳಿಲ್ಲವೇ?" - ಏನು ಮಾಡಲೀ ಶ್ರೀಧರ, ಆ ಮಕ್ಕಳು ಅವರ ಪಾಡಿಗೆ ಅವರಿಗೆ ಸಂಬಂಧವೇ ಇಲ್ಲದಂತೆ ಇದ್ದಾರೆ. - ಅಲ್ವೋ ನಿನಗೆಂತಾ ಹುಚ್ಚೋ? ಅವರೆಲ್ಲಾ ಆರಾಮವಾಗಿ ದೊಡ್ದ ದೊಡ್ದ ಮನೆಕಟ್ಟಿಕೊಂಡು ಕಾರ್ ಇಟ್ಟುಕೊಂಡು ಸುಖವಾಗಿದ್ದಾರೆ ಅಂತೀಯಾ! ಇವರನ್ನು ನೀನು ಇಟ್ಟುಕೊಂಡಿದ್ದೀಯಲ್ಲೋ? -ಅವರಿಗೆ ಮಗಳು ಮನೆ ಅಂದ್ರೇನೇ ಇಷ್ಟಾ, ಏನು ಮಾಡಲೀ? ಇಂತಾ ಪ್ರಸಂಗಗಳನ್ನು ನೀವು ನೋಡಿದ್ದೀರಾ? ನನ್ನದೊಂದು ಕಾನ್ಸೆಫ್ಟ್ ಇದೆ. ರಸ್ತೆಯ ಎಡಬದಿಯಲ್ಲಿ ಸಂಚರಿಸಿ, ಎಂಬುದು ನಿಯಮ. ಅದರಿಂದ ಸಂಚಾರ ಸುಗುಮ ವಾಗುತ್ತೆ. ಹಾಗೇನೇ ತಂದೆ-ತಾಯಿಯರನ್ನು ಗಂಡು ಮಕ್ಕಳು ಸಾಕಲೀ ಎಂಬುದು ನಮ್ಮಲ್ಲಿ ನಡೆದು ಬಂದಿರುವ ಪದ್ದತಿ. ಹಾಗೆ ಒಂದು ನಿಯಮ ವಿದ್ದರೆ ತಂದೆತಾಯಿಯರನ್ನು ನೋಡಿಕೊಳ್ಳುವ ಹೊಣೆ ಯಾರಿಗಾದರೂ ಇರುತ್ತೆ, ಎಂಬುದು. ಗಂಡುಮಕ್ಕಳು ಅವರ ತಂದೆ-ತಾಯಿಯರನ್ನು ನೋಡಿಕೊಂಡರೆ ಅವರ ಅಕ್ಕ-ತಂಗಿಯರು ಸಹಜವಾಗಿ ಅವರ ಅತ್ತೆ-ಮಾವನನ್ನು ನೋಡಿಕೊಳ್ಳಬೇಕು. ಇದು ಒಂದು ಸುಗಮ ವ್ಯವಸ್ಥೆ. ಆದರೆ ನಮ್ಮ ಕಿಟ್ಟಿ-ಶಂಕರನ ತರ ಅತೀ ಒಳ್ಳೆಯವರಾಗಿಬಿಟ್ಟರೆ ಅವರ ಗತಿ ಏನು? ಸಂಪದಿಗರೇ ನಿಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿ. ನಾನು ಅದನ್ನು ಶಂಕರನಿಗೂ ಕಿಟ್ಟೀಗೂ ತಿಳಿಸಿ ಮನವರಿಕೆ ಮಾಡಬೇಕಿದೆ.

ನನ್ನ ನಿಲುವು ನನ್ನದು

ನನ್ನ ಹಿಂದೂ ದ್ವಂದ್ವ; ಎಂಬ ಲೇಖನವನ್ನು ಸಂಪದದಲ್ಲಿ ಬರೆಯುತ್ತಾ ನಾರಾಯಣ ಅವರು ತಮ್ಮ ಮಾನಸಿಕ ತುಮಲವನ್ನು ತೋಡಿಕೊಂಡಿದ್ದರು.ಅದಕ್ಕೆ ಉತ್ತರವಾಗಿ ನಾನು ಸ್ಪಷ್ಟ ನುಡಿಗಳಲ್ಲಿ ನಾನು ಹಿಂದು ಎನ್ನಲು ಸಂಕೋಚವೇಕೆ ? ಎನ್ನುತ್ತಾ ಬಿಚ್ಚು ಮಾತುಗಳಲ್ಲಿ ನನ್ನ ಆರ್.ಎಸ್.ಎಸ್. ಸಂಬಂಧವನ್ನು ಹೇಳಿದ್ದೆ. ಇದೀಗ ಅದನ್ನು ಇನ್ನೂ ಸ್ಪಷ್ಟ ಪಡಿಸಬೇಕೆನಿಸಿದೆ.ನಿಜವಾಗಿ ನನ್ನ ಕೆಲವು ನಿಲುವುಗಳಿಂದ ಎಂತಹಾ ಸಂದಿಗ್ಧ ಸ್ಥಿತಿ ಎದಿರುಸುತ್ತಿದ್ದೀನೆಂದರೆ ಹುಟ್ಟು ಬ್ರಾಹ್ಮಣ ಜಾತಿಯಲ್ಲಾದರೂ ಅನ್ಯ ಜಾತಿಗಳೊಡನೆ ನನ್ನ ಮಿತ್ರತ್ವದಿಂದ , ಸಹಪಂಕ್ತಿ ಭೋಜನದಿಂದ, ಬ್ರಾಹ್ಮಣೇತರ ಮನೆಗಳಲ್ಲಿ ಉಣ್ಣುವುದರಿಂದ, ಹಲವರಿಗೆ ನನ್ನ ಬಗ್ಗೆ ಒಂತರಾ...ಭಾವನೆ. ಅರ್.ಎಸ್.ಎಸ್. ಸಂಬಂಧದಿಂದ ನನ್ನನ್ನು ಬ್ರಾಹ್ಮಣ ಪಟ್ಟಿಗೆ ಸೇರಿಸಿರುವ ಸಮಾಜದ ಅನ್ಯ ಬಂಧುಗಳು.ಆರ್.ಎಸ್.ಎಸ್.ವಿಚಾರ ಒಪ್ಪದ ಜನರೊದನೆ ಇರುವ ಸಂಬಂಧದಿಂದ ದೂರ ಮಾಡುವ ಕಟ್ಟಾ ಆರ್.ಎಸ್.ಎಸ್ ನವರು.ಇವೆಲ್ಲಾ ವರವೋ ಶಾಪವೋ ತಲೆ ಕೆಡಸಿಕೊಳ್ಳಲು ನಾನಂತೂ ಹೋಗುಲ್ಲ. ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಯಾವಾಗಲೂ ನೆನಪಿನಲ್ಲುಳಿಯುವವರು ಸಮಾಜಕಾರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಜಿಸಿ ಅಮರರಾದ ಯಾಧವರಾವ್ ಜೋಷಿ, ಹೊ.ವೆ.ಶೇಷಾದ್ರಿ ಮುಂತಾದ ಮಹನೀಯರು.ಸ್ವಾತಂತ್ರ್ಯ ಸಂಗ್ರಾಮವನ್ನಂತೂ ನೋಡಲು ಹುಟ್ಟಿರಲಿಲ್ಲ.ಆದರೆ ಸಮಾಜಕಾರ್ಯಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡವರನ್ನು ನನ್ನ ಜೀವನದಲ್ಲಿ ನೋಡಲು ಸಾಧ್ಯವಾಯ್ತು. ಅದೇ ನನ್ನ ಪುಣ್ಯ.ಕಾಲ ಈಗ ಬದಲಾಗಿದೆ. ಹೊಸ ನೀರು ಬಂದಿದೆ.ಹಳೆಯನೀರು ಕೊಚ್ಚಿ ಹೋಗುತ್ತದಲ್ಲಾ ಎಂದರಾಗುವುದಿಲ್ಲ. ಕಾಲವನ್ನು ತಡೆಯುವವರು ಯಾರೂ ಇಲ್ಲ. ಕೇವಲ ಸಂಸ್ಕೃತಿ-ಪರಂಪರೆ ಎನ್ನುವಲ್ಲಿ ನಾನು ಹಿಂದುಪದ ಬಳಸುವೆ.ಹಿಂದು ಸಂಸ್ಕೃತಿಯಲ್ಲಿ ಹುಟ್ಟಿ ಸಹಜವಾಗಿ ಅದರ ಬಗ್ಗೆ ಶ್ರದ್ಧೆ. ಅನ್ಯ ಸಂಸ್ಕೃತಿ ನನಗೆ ಗೊತ್ತಿಲ್ಲ. ಅದೇಕೋ ಹಿಂದು ಪದ ಬಳಕೆಯಾದ ಕೂಡಲೇ ಎಲ್ಲಿಲ್ಲದ ಚರ್ಚೆ ಶುರುವಾಗಿಬಿಡುತ್ತೆ.ತನ್ನ ಮನೆ, ತನ್ನ ಊರು, ತನ್ನ ಸಮಾಜ, ತನ್ನ ಸಂಸ್ಕೃತಿ-ಪರಂಪರೆಯನ್ನು ಪ್ರೀತಿಸದವನು ಬೇರೆ ಯಾರನ್ನು ಪ್ರೀತಿಸಲು ಸಾಧ್ಯ? ಅದರಿಂದ ನನಗೆ ಇಲ್ಲಿ ಪ್ರೀತಿ. ಅದ್ಯಾಕೋ ಅನ್ನಿಸುತ್ತೆ, ವಿಶಾಲ ಹೃದಯಿಯಾದ ಹಿಂದು ಇಡೀ ಪ್ರಪಂಚದ ಶಾಂತಿ-ನೆಮ್ಮದಿ ಉಳಿಸಬಲ್ಲ. ಹೀಗೆಯೇ ಚಿಂತಿಸುವಾಗ ನಮ್ಮ ಋಷಿಮುನಿಗಳ ವಿಚಾರಧಾರೆಯನ್ನು ಹೆಚ್ಚು ಹೆಚ್ಚು ಓದಬೇಕು, ಹೆಚ್ಚು ಹೆಚ್ಚು ಪ್ರಚುರಪಡಿಸಬೇಕು, ಅನ್ನಿಸುತ್ತೆ. ನಮ್ಮ ಋಷಿಮುನಿಗಳ ವಿಚಾರಧಾರೆಯನ್ನು ತಪ್ಪಾಗಿ ಅರ್ಥೈಸಿ ಶಾಂತಿಕೆಡಲು ಕಾರಣ ವಾಗಿದೆಯೇ? ಅನ್ನಿಸುತ್ತಿದೆ. ಅಂತೂ ಏನೇನೋ ಚಿಂತನೆಗಳು ಯಾವಾಗಲೂ ತಲೆಯಲ್ಲಿ ತುಂಬಿರುತ್ತವೆ. ನನ್ನ ವಿಚಿತ್ರ ನಡೆ ಎಂದರೆ ಕಾರ್ಯಕ್ರಮ ಒಂದರಲ್ಲಿಭಗವಹಿಸಿದ್ದೆ. ಒಂದು ಹಿಂದು ಕುಟುಂಬದಲ್ಲಿ ಮಿನಿಮಮ್ ಏನೇನು ಸಂಗತಿಗಳು ಆಚರಣೆ ಯಲ್ಲಿರಬೇಕು? ಎಂಬುದು ಚರ್ಚೆಯಾಗಿ, ಹಿಂದುಮನೆಗಳಲ್ಲಿ ಕನಿಷ್ಟತಮ ಅಚರಣೆ ಗಳೆಂದರೆ ಬೆಳಗಾಗೆದ್ದು ಚಿಕ್ಕದಾಗಿಯದರೂ ದೇವರ ಪೂಜೆ ಮಾಡದೆ ಉಪಹಾರ ತೆಗೆದುಕೊಳ್ಳಬಾರದೆಂಬುದು. ನಾನು ಹಾಗೆಯೇ ನನ್ನ ಜೀವನ ಕ್ರಮ ನೋಡಿದಾಗ ಅನೇಕ ದಿನಗಳು ಅದು ಅಸಾಧ್ಯ.ಆದರೂ ನನಗೆ ಏನೂ ಅನ್ನಿಸುವುದಿಲ್ಲ. ದೇವರ ಪೂಜೆ ಮಾಡುವುದೆಂದರೇನು? ಸ್ನಾನ ಮಾಡಿ ದೇವರಕೋಣೆಯಲ್ಲಿ ಒಂದರ್ಧ ಗಂಟೆಯಾದರೂ ಕುಳಿತು ಪೂಜೆ ಮಾಡುವುದು ತಾನೆ? ನಿಜವಾಗಿ ಬೆಳಗಾಗೆದ್ದು ಅನೇಕ ದಿನಗಳುನೆಟ್ ಮುಂದೆ ಕುಳಿತರೆ ಅಲ್ಲಿ ಓದುವುದು ಬರೆಯುವುದು ಭಗವಂತನ ವಿಚಾರವೇ ಆಗಿದೆ. ಅರ್ಧಗಂಟೆ ದೇವರ ಕೋಣೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೇ ಇರುವ ಅನೇಕ ದಿನಗಳು ಇವೆ. ಹಾಗಾದರೆ ನಾನು ಬ್ರಷ್ಟ ನಾಗಿ ಬಿಟ್ಟೆನೇ?ಖಂಡಿತವಾಗಿಯೂ ನನಗೆ ಹಾಗನಿಸುವುದಿಲ್ಲ. ದಿನದ ಬಹುಪಾಲುಭಗವಂತನ ಚಿಂತನೆಯಲ್ಲೇ ಕಳೆಯುವ ನನಗೆ ನಿರ್ದಿಷ್ಟ ವಾದ ಸೂಚಿತ ಕ್ರಮದಲ್ಲಿ ಪೂಜೆಮಾಡಲಾಗಲಿಲ್ಲವಲ್ಲಾ! ಎಂದು ಬೇಸರವಿಲ್ಲ. ಪೂಜೆ-ಪುನಸ್ಕಾರಗಳ ಬಗ್ಗೆ ಅದೇಕೋ ನನ್ನ ಚಿಂತನೆ ನನಗೇ ವಿಚಿತ್ರವಾಗಿ ಅನ್ನಿಸುತ್ತೆ. ಇಷ್ಟಕ್ಕೂ ದೇವರ ಮುಂದೆ ಕುಳಿತು ಪೂಜೆ ಮಾಡುವುದು ಏಕೆ? ಬಹುಪಾಲು ಜನರ ಅಭಿಪ್ರಾಯವೆಂದರೆ ಭಗವಂತನ ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥ ನೆರೆವೇರಿಸುತ್ತಾನೆ. ಅದಕ್ಕಾಗಿ ನಿತ್ಯ ಪಂಚಾಮೃತಾಭಿಷೇಕ, ಅರ್ಚನೆ, ಮಂಗಳಾರತಿ, ಎಲ್ಲಾ ಮಾಡಿ ಕೊನೆಯಲ್ಲಿ ತಮ್ಮ ಮನಸ್ಸಿನಲ್ಲಿರುವುದನ್ನು ನೆರವೇರಿಸಲು ಪ್ರಾರ್ಥಿಸುವುದು ಸರ್ವೇ ಸಾಮಾನ್ಯ ಸಂಗತಿ. ನನಗೆ ಅನೇಕ ವೇಳೆ ಪಂಚಾಮೃತಾಭಿಷೇಕ ಮಾಡುವಾಗಲೇ ಮನದೊಳಗೇ ನಗು ಬಂದಿದೆ. ನಿಜವಾಗಲೂ ಪುಟ್ಟ ಪುಟ್ಟ ವಿಗ್ರಹಗಳು ಆಟಿಕೆಗಳಂತೆ ಭಾಸವಾಗುತ್ತವೆ. ಅಯ್ಯೋ ನನ್ನ ಮೂಢತನವೇ ! ನಾನು ಪಂಚಾಮೃತಾಭಿಷೇಕದ ಆಟವಾಡಬೇಕೆ? ಎನಿಸಿ ,ಹಾಗೇ ಕಣ್ಮುಚ್ಚಿ ಅರ್ಧಘಂಟೆ ಕುಳಿತು ಎದ್ದಿರುವ ದಿನಗಳೂ ಇವೆ. ಸಮಯದ ಅವಕಾಶವಿದ್ದು ಮನಸ್ಸು ಬಂದರೆ ಮನಸ್ಸಿಗೆ ಉಲ್ಲಾಸವಾಗುವಂತೆ ಮಂತ್ರಗಳನ್ನು ಹೇಳಿಕೊಂಡು ಅದೇ ವಿಗ್ರಹಗಳಿಗೆ ಪಂಚಾಮೃತಾಭಿಷೇಕ ಮಾಡಿದ್ದೂ ಇದೆ. ಅಂತೂ ನನ್ನ ಮನಸ್ಸಿಗೆ ಆಗಾಗ ಹೇಗೆ ಅನ್ನಿಸುತ್ತೆ, ಹಾಗೆ ಮಾಡುವ ನಾನೊಬ್ಬ ವಿಚಿತ್ರ ವ್ಯಕ್ತಿ ಅಂತಾ ನನಗೇ ನಗು ಬರುತ್ತೆ. ಒಂದಂತೂ ನಿಜ, ನಾನು ದೇವರಿಗೆ ಭಯ-ಭಕ್ತಿಯಿಂದ ಪೂಜೆ ಮಾಡಬೇಕೆನಿಸುವುದಿಲ್ಲ. ಯಾವುದೋ ಇಷ್ಟಾರ್ಥ ಸಿದ್ಧಿಗಾಗಿ ವ್ರತ-ಕಥೆಗಳಾಚರಣೆ ಮಾಡಬೇಕೆನಿಸುದಿಲ್ಲ, ಬದಲಿಗೆ ನನ್ನ ಮನಸ್ಸಿಗೆ ತುಂಬಾ ಬೇಸರವಾದರೆ, ಶರೀರದ ಆರೋಗ್ಯ ಹಾಳಾಗಿದ್ದು ನೆಮ್ಮದಿಯಾಗಿ ದೇವರ ಮುಂದೆ ಕುಳಿತು ಪೂಜೆ ಮಾಡಬೇಕೆನಿಸಿದರೆ, ಆಗ ಪೂಜಾ ಕೋಣೆಯ ಪ್ರವೇಶ. ಅಲ್ಲಿ ಪ್ರವೇಶಿಸಿದಾಗ ಕಣ್ಣಿಗೆ ಬೀಳುವುದು ಪತ್ನಿ ಮಾಡಿರುವ ಪೂಜೆಯ ರಂಪ. ಆಗ ದೇವರುಗಳನ್ನು , ಪೂಜಾಗೃಹವನ್ನು ಕ್ಲೀನ್ ಮಾಡಬೇಕೆನಿಸುತ್ತೆ. ಯಾವುದಾದರೂ ಸೂಕ್ತ ಹೇಳಿಕೊಂಡು ಆನಂದವಾಗಿ ಪೂಜಾ ಗೃಹವನ್ನು , ಪೂಜಾ ಸಾಮಗ್ರಿಗಳನ್ನು, ವಿಗ್ರಹಗಳನ್ನು ತೊಳೆದು, ಒರಸಿ, ಓರಣ ಮಾಡಿ , ಹೂ ಇದ್ದರೆ ಅಲಂಕರಿಸಿದರೆ ಅನೇಕ ವೇಳೆ ನನ್ನ ಪೂಜೆ ಮುಗಿಯುತ್ತೆ. ಇನ್ನೊಂದು ವಿಚಾರ ಹೇಳುವುದು ಮರೆತಿದ್ದೆ. ಮೊದಲು ಎರಡು ದೀಪ ಹಚ್ಚ್ವುದು ಮರೆಯುವುದಿಲ್ಲ. ಅದರ ಬೆಳಕಿನಲ್ಲಿ ಪೂಜಾಗೃಹ ನೋಡಲು ಚಂದ. ನಮ್ಮಪ್ಪ ಸತ್ತು ಹತ್ತು ವರ್ಷಗಳಾಗುತ್ತಾ ಬಂತು. ಕಡೆಯಲ್ಲಿ ಒಂದೆರಡು ವರ್ಷ ನಾನೇ ಸ್ನಾನ ಮಾಡಿಸಬೇಕಿತ್ತು. ಆಗ ನನಗರಿವಿಲ್ಲದೆ ಪುರುಷಸೂಕ್ತ ಹೇಳಿಕೊಂಡು ಸ್ನಾನ ಮಾಡಿಸುತ್ತಿದ್ದೆ. ನನಗದರಲ್ಲಿ ಖುಷಿ ಇರ್ತಿತ್ತು. ಅದು ನಮ್ಮಮ್ಮನಿಗೆ ಅದೆಷ್ಟು ಸಂತೋಷವನ್ನು ಕೊಟ್ಟಿತ್ತೆಂದರೆ "ನಮ್ಮ ಶ್ರೀಧರ ಪುರುಷ ಸೂಕ್ತ ಹೇಳಿಕೊಂಡು ಅವರಪ್ಪನ ಸ್ನಾನ ಮಾಡಿಸುತ್ತಾನೆ" ಅಂತಾ ಬಂದವರಿಗೆಲ್ಲಾ ಸಂತೋಷದಿಂದ ಹೇಳಿಕೊಳ್ಳುತ್ತಿದ್ದರು.ಪಾಪ! ಅವರಾದರೋ ಇಡೀ ಜೀವನ ಕಷ್ಟದಲ್ಲಿ ಕಳೆದು ನಾನು ಸ್ವಲ್ಪ ಕಣ್ ಬಿಡುವ ಹೊತ್ತಿಗೆ ಇಹಲೋಕವನ್ನೇ ತ್ಯಜಿಸಿದರು. ಬಡತನ ಹಾಸಿಹೊದ್ದು ಮಲಗಿದ್ದ ನಮ್ಮ ಮನೆಯಲ್ಲಿ ಊಟಕ್ಕೆ ದಾರಿಮಾಡಿದ್ದೇ ನನ್ನ ಒಂದು ದೊಡ್ದ ಸಾಧನೆ. ಪಾಪ! ಅಮ್ಮ ಉಡಲು ಒಂದು ಸೀರೆ ಬಯಸಲಿಲ್ಲ.. ಅಮ್ಮನಿಂದಲೇ ಅಲ್ಪ ಸ್ವಲ್ಪ ವೈಚಾರಿಕ ಚಿಂತನೆ ನನಗೂ ಬಂದಿದೆ ಅನ್ನಿಸುತ್ತೆ. ಅವರು ಅಡುಗೆ ಮಾಡಿ ಅನ್ನದ ತಪ್ಪಲೆ ಒಲೆಯಮೇಲಿಂದ ಇಳಿಸಿದವರೇ " ತಾಯಿ ಇದು ನಿನಗರ್ಪಿತ "ಎಂದು ಹೇಳಿದರೆ ದೇವರ ನೈವೇದ್ಯ ಮುಗಿಯುತ್ತಿತ್ತು. ಭಗವನ್ನಾಮ ಸ್ಮರಿಸುತ್ತಲೇ ಮನೆ ಕೆಲಸವೆಲ್ಲಾ ಮುಗಿಯುತ್ತಿತ್ತು. ಈಗ ಅಮ್ಮನ ವಿಚಾರ ಇಷ್ಟು ಸಾಕು. ಅಮ್ಮನ ನೆನಪನ್ನು ಬೇರೆ ಯಾವಾಗಲಾದರೂ ಮಾಡಿಕೊಳ್ಳುವೆ. ಹತ್ತು ವರ್ಷಗಳಿಂದ ಸ್ನೇಹಿತರಾಗಿರುವ ಮಿತ್ರ ಬಶೀರ್ ಅಹ್ಮದ್, ಎಷ್ಟೊಂದು ಜನರಿಗೆ ಅವರುಗಳ ಆಪತ್ಕಾಲದಲ್ಲಿ ಹತ್ತಾರು ಸಾವಿರ ಹಣಕೊಟ್ಟಿದ್ದಾರೆ, ಒಂದುರೂಪಾಯಿ ಬಡ್ಡಿ ಅಂತಾ ತೆಗೆದುಕೊಂಡಿಲ್ಲ ವಲ್ಲಾ! ನನಗೂ ಕಷ್ಟವಿದ್ದಾಗ ಹಣದ ಸಹಾಯ ಮಾಡಿರುವ ಬಶೀರರನ್ನು ಹೇಗೆ ಮರೆಯಲಿ? ಅವರು ಮುಸಲ್ಮಾನರೆಂದು ದ್ವೇಷಿಸಲೇ? ನಮ್ಮ ಕಛೇರಿಯ ತಸ್ನಿಮ್ ಫಾತಿಮಾ : ಅವಳ ತಂದೆ ಮೃತರಾಗಿ ಮೂರು ತಿಂಗಳ ಮೇಲಾಯ್ತು, ಇನ್ನೂ ಹೊಟ್ಟೆ ತುಂಬಾ ಊಟ ಮಾಡುತ್ತಿಲ್ಲವಲ್ಲಾ!! ವಿಚಾರಿಸಿದರೆ ತುತ್ತು ಕೈನಲ್ಲಿ ಎತ್ತಿದಾಗ ಅಪ್ಪನ ನೆನಪಾಗುತ್ತೆ ,ಗಂಟಲಿನಲ್ಲಿ ಅನ್ನ ಇಳಿಯುಲ್ಲಾ ಅಂತಾ ಅನ್ನೋ ಆ ಹುಡುಗೀನ ಕಂಡಾಗ ಕರುಳು ಕಿತ್ತು ಬರುತ್ತೆ, ಇದು ತಪ್ಪಾ? ದೇವರು ಧರ್ಮದ ಹೆಸರಲ್ಲಿ ಹೋರಾಟ ಮಾಡಬೇಕೆ? ಎಂಬುದು ನನಗೆ ಚೋದ್ಯವಾಗಿ ಕಾಣುತ್ತೆ. ಅದೆಂತ ಮತಾಂತರವೋ? ಯಾಕ್ರೀ ಬೇಕು ಈ ಮತಾಂತರ? ಒಂದು ಮತದಿಂದ ಬೇಸತ್ತು ಇನ್ನೊಂದು ಮತವವನ್ನು ಅರ್ಥ ಮಾಡಿಕೊಂಡು ಸ್ವ ಇಚ್ಛೆಯಿಂದ ಮತಾಂತರ ವಾಗುತ್ತಾರೆಂಬುದು ನನಗೆ ನಂಬಲು ಸಾಧ್ಯವಿಲ್ಲ. ಮತಾಂತರ ವೆಂದರೆ ಅದು ಒಂದು ಮತದ ನಿಷ್ಠೆ ಬದಲಿಸುವ ಮಾತಲ್ಲ, ಅದರಿಂದ ಈ ದೇಶದ ಮೇಲಿನ ನಿಷ್ಟೆ ಬದಲಾಗುತ್ತೆ ಅಂತಾ ವಿ.ಹೆಚ್.ಪಿ ಯವರು ಹೇಳುತ್ತಾರೆ.ಅದೇನೋ ಹೊಟ್ಟೆ ಪಾಡಿಗಾಗಿ ಈ ಮತಾಂತರವೆಲ್ಲಾ ನಡೀತಿದೆ, ಎಂದು ನನ್ನ ಭಾವನೆ. ಇನ್ನು ನಮ್ಮ ರಾಜಕಾರಣದ ಬಗ್ಗೆ ತುಂಬಾ ಘಾಸಿಗೊಳಗಾಗುತ್ತೇನೆ. ರಾಜಕಾರಣದಿಂದ ದೇಶದ ಹಣವನ್ನು ದೋಚಿಲ್ಲದ ರಾಜಕಾರಣಿಗಳಿದ್ದಾರೆಯೇ ಎಂಬ ಸಂದೇಹ ನನ್ನನ್ನು ಯಾವಾಗಲೂ ಕಾಡುತ್ತೆ. ಯಾವ ಪಕ್ಷವೂ ಬ್ರಷ್ಟಾಚಾರದಿಂದ ಹೊರತಾಗಿಲ್ಲವಾದ್ದರಿಂದ ಬಿ.ಜೆ.ಪಿ.ಯನ್ನು ಆರ್.ಎಸ್.ಎಸ್. ನ ಪರಿವಾರವೆನ್ನುವುದಾದರೆ ಅವರಿಗೆ ಸಂಸ್ಕಾರ ಕೊಟ್ಟಿಲ್ಲವೇಕೆ? ಎಂಬ ನೋವಿದೆ. ಅಂತೂ ನಾನು ನಾನೇ, ಯಾರಿಗೂ ಹೊಂದಲು ನಾಲಾಯಕ್ಕು. ಭಾಷೆ ಹೆಸರಲ್ಲಿ, ರಾಜಕೀಯ ನಾಯಕರ ಅಭಿಮಾನಿಗಳ ಹೆಸರಲ್ಲಿ ಹುಟ್ಟಿಕೊಂಡಿರು ಸಂಘಟನೆಗಳನ್ನು ನೆನಸಿಕೊಂಡರೆ ಭಯವಾಗುತ್ತೆ. ರಾಜಕಾರಣವನ್ನು ನೋಡಿದರಂತೂ ಛೇ...ನಮ್ಮ ಕ್ರಾಂತಿಕಾರಿಗಳು ತಮ್ಮ ಜೀವವನ್ನು ಬಲಿಕೊಟ್ಟು ಹೋರಾಟ ಮಾಡಿ ಸ್ವಾತಂತ್ರ್ಯ ಗಳಿಸಿದ್ದು, ಮಹಾತ್ಮ ಗಾಂಧಿ ಉಪವಾಸ ಮಾಡಿದ್ದು ಇಂತಾ ದೂರ್ತರು ನಮ್ಮ ದೇಶವನ್ನಾಳಲಿ ಎಂದೇ? ಇಂದು ಶಿವರಾತ್ರಿ, ಈಗ ರಾತ್ರಿ ೧೨.೨೦, ಇಂದು ಇದೇ ನನ್ನ ಜಾಗರಣೆ.

ಜೋಡೀದಾರ್ ನಾಗರಾಜಯ್ಯ

"ಜೋಡೀದಾರ್ ನಾಗರಾಜಯ್ಯ ,ಲ್ಯಾಂಡ್ ಲಾರ್ಡ್, ಜೋಡಿ ಹರಿಹರಪುರ, ದೊಡ್ದಕುಂಚೆ-ಅಂಚೆ, ಹಳೇಕೋಟೆ ಹೋಬಳೀ,ಹೊಳೇ ನರಸೀಪುರ -ತಾಲ್ಲೂಕ್,ಹಾಸನ ಜಿಲ್ಲೆ." ಇದು ನಮ್ಮಪ್ಪನ ವಿಳಾಸ. ಹೀಗೆ ಎಲ್ಲರೂ ಬರೆಯುತ್ತಿರಲಿಲ್ಲ. ನಮ್ಮ ಸೋದರತ್ತೆ, ಅವರ ಮಕ್ಕಳು ಒಂದಾಣೆ ಕಾಗದ ಬರೆದರೆ ಹೀಗೆ ಅಡ್ರೆಸ್ಸ್ ಬರೆಯುತ್ತಿದ್ದರು. ನಾನಿನ್ನೂ ಚಿಕ್ಕ ಹುಡುಗ, ಆಗ ಏನೂ ಅನ್ನಿಸುತ್ತಿರಲಿಲ್ಲ. ಈಗ ಹಾಗೇ ಯೋಚಿಸುವಾಗ ನಮ್ಮಪ್ಪನಿಗೆ ಜೋಡೀದಾರ್ ಅಂತಾ ಕಾಗದ ಬರುತ್ತಿತ್ತಲ್ಲ. ಹಾಗಂದರೇನು? ಲ್ಯಾಂಡ್ ಲಾರ್ಡ್ ಅಂತಾ ಬೇರೆ ಬರೆಯುತ್ತಿದ್ದರು. ಆದರೆ ನಮ್ಮ ಮನೆಯ ನೈಜಸ್ಥಿತಿ ಹಾಗಿರಲೇ ಇಲ್ಲ ವಲ್ಲಾ? ಜೋಡೀದಾರರ ಮಕ್ಕಳಿಗೆ ನಿತ್ಯ ಉಪವಾಸ. ಕೇವಲ ಹುರುಳೀ ಕಾಳು ತಿಂದು ಕಾಲ ಹಾಕಿದ ದಿನಗಳು, ಕೇವಲ ಕಾಡಿನಿಂದ ತಂದ ನೇರಲೆ ಹಣ್ಣು ತಿಂದು ಕಾಲ ಹಾಕಿದ ದಿನಗಳು, ರಾಗಿರೊಟ್ಟಿಯೋ, ಮುದ್ದೆಯೋ, ಅನ್ನದ ಗಂಜಿಯೋ, ಜೋಳದ ರೊಟ್ಟಿಯೋ ಯಾವುದಾದರೂ ಸಿಕ್ಕರೆ ಸಾಕಾಗಿತ್ತು. ಅಷ್ಟೇಕೆ ಮಂಜಪ್ಪನವರಮನೆಯ ಸೀತಮ್ಮನಿಗೂ ನಮ್ಮ ಸೋದರತ್ತೆ ಗೌರಮ್ಮನಿಗೂ ಗಳಸ್ಯ ಗಂಟಸ್ಯ.[ನಮ್ಮ ಗೌರತ್ತೆ ಬಗ್ಗೆ ಪ್ರತ್ಯೇಕ ಬರೆದಿರುವೆ. ಮದುವೆಯಾಗಿ ತನ್ನ ಹನ್ನೆರಡನೆಯ ವಯಸ್ಸಿನಲ್ಲೇ ವಿಧವೆಯಾಗಿ ನಮ್ಮ ಮನೆಯಲ್ಲೇ ಉಳಿದ ನಮ್ಮ ಅಪ್ಪನ ಅಕ್ಕ] ಪಾಪ! ಅವರಿಗೆ ತಮ್ಮನ ಮಕ್ಕಳೆಂದರೆ ಪಂಚ ಪ್ರಾಣ. " ಲೇ ಸೀತಮ್ಮ ನಿತ್ಯವೂ ನಿಮ್ಮನೇಲೀ ಅನ್ನ ಚೆಲ್ತೀರ. ಅದರ ಬದಲು ಉಳಿದಿದ್ದಾಗ ಹೇಳೇ, ನಮ್ಮ ಮನೆಯ ಮಕ್ಕಳಿಗಾದರೂ ತಂದು ಬಡಿಸುತ್ತೇನೆ." ನಮ್ಮತ್ತೆ ಸೀತಮ್ಮನ ಹತ್ತಿರ ಅಂಗಲಾಚಿದ ಮೇಲೆ ಅನೇಕ ದಿನಗಳು ಸೀತಮ್ಮ ನವರಮನೆಯಲ್ಲಿ ಉಂಡು ಉಳಿದ ಅನ್ನವನ್ನು ಕೊಡುತ್ತಿದ್ದರು. ಅದೇ ನಮಗೆ ಮೃಷ್ಟಾನ್ನ.
ಇಷ್ಟು ಹೇಳಿದ ಮೇಲೆ ನಮ್ಮ ಮನೆಯ ಕಷ್ಟಗಳನ್ನು ವಿವರಿಸುವ ಅಗತ್ಯವಿಲ್ಲ. ಹೊಟ್ಟೆ ಪಾಡಿಗೆ ಏನಾದರೂ ಮಾಡಬೇಕಲ್ಲಾ, ನಮ್ಮ ಅತ್ತೆ ಹಾಗೂ ನಮ್ಮಪ್ಪ ಕಾಡಿಗೆ ಹೋಗಿ ಮುತ್ತುಗದ ಎಲೆ ಕೊಯ್ದು ತರುತ್ತಿದ್ದರು. ಮನೆಮಂದಿಯೆಲ್ಲಾ ಅದನ್ನು ಒಪ್ಪ-ಓರಣ ಮಾಡಿ ಹಗಲು ರಾತ್ರಿಯೆಲ್ಲಾ ಎಲೆಹಚ್ಚಿ ಮಾರಿದರೆ ನೂರು ಎಲೆಗೆ ಎಂಟಾಣೆ. ಈ ಹಣಕ್ಕೆ ಆಗಲೂ ಒಂದು ಸೇರು ಅಕ್ಕಿ ಸಿಗುತ್ತಿರಲಿಲ್ಲ. ಊರಲ್ಲಿರುವ ಅತಿ ಎತ್ತರದ ತೆಂಗಿನಮರ ಯಾರದೇ ತೋಟದಲ್ಲಿರಲಿ ಅದನ್ನು ಹತ್ತಿ ಕಾಯಿ ಕೆಡವಿದರೆ ಒಂದು ಮರಕ್ಕೆ ಒಂದು ತೆಂಗಿನಕಾಯಿ ಕೂಲಿ.
ಇನ್ನು ನಮ್ಮ ಅಜ್ಜನ ಶ್ರಾದ್ಧ ಮಾಡುವಾಗಲೆಲ್ಲಾ ಪ್ರತಿ ವರ್ಷವೂ ಶ್ಯಾನುಭೋಗ್ ನಂಜಪ್ಪನವರ ಅಂಗಡಿಗೆ ಹೋಗಿ ಒಂದು ಬೆಳ್ಳಿ ಬಟ್ಟಲು ಅಡವಿಟ್ಟು ಒಂದೈದು ರೂಪಾಯಿ ತಂದು ಅಪ್ಪನ ತಿಥಿ ಮಾಡಬೇಕು. ಅದಕ್ಕೆ ಆಣೆ ಬಡ್ದಿ ಕೊಡುತ್ತಿದ್ದುದು ಬೇರೆ ಮಾತು.
ಇವೆಲ್ಲಾ ಯಾಕೆ ಬರೆದೆ ಅಂತೀರಾ? ಹಿಂದೆ ಜೋಡೀದಾರರೂ ಅಂದರೆ ಯಾವುದೋ ಹಳ್ಳಿಯ ಒಡೆಯರು ಅಂತಾನೆ ಭಾವನೆ ಅಲ್ಲವೇ? ಆದರೆ ಇದು ಜೋಡೀದಾರರಾಗಿದ್ದ ನಮ್ಮಪ್ಪನ ನೈಜ ಸ್ಥಿತಿ.
ಒಂದಂತೂ ನಮ್ಮಪ್ಪನ ಬಗ್ಗೆ ನಮಗೆ ಹೆಮ್ಮೆ ಇದೆ. ಎಷ್ಟೆ ಬಡತನವಿದ್ದರೂ ಕಳ್ಳತನ ಮಾಡಲಿಲ್ಲ, ಬೇರೆಯವರಿಗೆ ದ್ರೋಹ ಮಾಡಲಿಲ್ಲ. ಪಾಪ! ಅವೆಲ್ಲಾ ಮಾಡಲು ಬಾರದ ಮುಗ್ಧರು ನಮ್ಮಪ್ಪ. ಹಿಂದೆ ಹಿಂದುಳಿದ ಜಾತಿಯವರಿಗೆ ದ್ರೋಹ-ಮೋಸ ವಾಗಿರುವುದರ ಜೊತೆಗೆ ಮುಂದುವರಿದ ಜಾತಿಯಲ್ಲಿ ಹುಟ್ಟಿದ ನಮ್ಮಂತವರಿಗೂ ಆಗಿರುವ ಅನ್ಯಾಯ, ಶ್ರೀಮಂತರೆನಿಸಿಕೊಂಡವರು ನಡೆಸಿಕೊಂಡ ರೀತಿ ಹೇಳಿದರೆ ಕೆಲವರಿಗೆ ತುಂಬಾ ಮುಜುಗರ ವಾಗುತ್ತೆ. ಒಂದು ಮಾತು ಹೇಳಿ ಲೇಖನ ಮುಗಿಸುವೆ. ಶೃಂಗೇರಿ ಮಠಾದೀಶರ ದರ್ಶನ ನಮ್ಮಂತವರಿಗಲ್ಲವೆಂದು ನನ್ನ ನಲವತ್ತನೆಯ ವಯಸ್ಸಿನವರೆಗೂ ನನ್ನ ನಂಬೆಕೆಯಾಗಿತ್ತು. ಸೇಬು ಶ್ರೀಮಂತರು ಮಾತ್ರ ತಿನ್ನುವ ಹಣ್ಣು ಎಂಬುದು ನನ್ನ ಅಂದಿನ ನಂಬಿಕೆ. ಅವಕ್ಕೆಲ್ಲಾ ಅಷ್ಟು ತಲೆ ಕೆಡಸಿಕೊಳ್ಳಲೇ ಇಲ್ಲ. ಅಷ್ಟೇಕೆ ನನ್ನ ಮದುವೆಗೆ ಆರು ತಿಂಗಳು ಮುಂಚೆ ನನ್ನ ಮುಂಜಿ ಶಾಸ್ತ್ರವಾಯ್ತು. ಅದೂ ನನಗೆ ಕೆಲಸ ಸಿಕ್ಕಿದ್ದರಿಂದ. ನನ್ನ ಉಪನಯನ ಬಗ್ಗೆ ತಲೆ ಕೆಡಸಿಕೊಳ್ಳಲಿಲ್ಲವೆಂದ ಮೇಲೆ ಇನ್ನು ವೇದ ಪಾಠ?

ಕವಿಗಳೇ ಬರುವಿರಾ ನೀವು?

ಅಪ್ಪ ಹಾಕಿದ್ದ ಆ ಮರದ ನೆರಳಲ್ಲಿ

ಅದೆಷ್ಟು ಹಾಯಾಗಿ ಮಲಗಿದ್ದೆ ನಾನು!

ಹಣ್ಣು ಕಾಯ್ಗಳ ತಿಂದು

ಚಿಲಿಪಿಲಿ ಗುಟ್ಟುತ್ತಾ

ನಲಿವ ಹಕ್ಕಿಗಳನ್ನು ಮರೆಯಲೇನು?

ಚೈತ್ರದಾ ಆಚಿಗುರು

ಘಮಘಮಿಸುವಾ ಹೂವು

ರುಚಿ ರುಚಿಯಾ ಹಣ್ಣು

ಇನ್ನು ಸಿಗುವುದೇನು?

ಚೈತ್ರಬಂದರೂ ಇಂದು

ಚಿಗುರಲೊಲ್ಲದು ಏಕೋ

ಮತ್ತೆಲ್ಲಿ ಹೊವಿನಾ ಘಮ?

ಇನ್ನೆಲ್ಲಿ ರುಚಿ ರುಚಿಯಾ ಹಣ್ಣು?

ಎಲುಬುದೇಹವ ಕಂಡು

ಒದ್ದೆಯಾಗಿದೆ ಕಣ್ಣು|

ಬುಡದಲ್ಲಿ ಬೆಳೆದಿದೆಯಲ್ಲಾ

ಮಹಮ್ಮಾರಿ ಕಳೆ!

ಪೈಪೋಟಿ ಮಾಡಿದೆಯಲ್ಲಾ

ತಿಂದು ಅದೇ ಮರದ ಎಲೆ|

ಕಳೆಯ ತೆಗೆಯಬೇಕು

ಮರವ ಉಳಿಸಬೇಕು

ಕವಿಗಳೇ, ಬರುವಿರಾ ನೀವು?

" ಛೇ, ಜೀವನದಲ್ಲಿ ಅದೆಷ್ಟು ದಂಡ ಮಾಡುತ್ತೇವೆ?"

ಇವತ್ತು ಬೆಳಿಗ್ಗೆ ಚಂದನದಲ್ಲಿ ಒಂದು ಕಾರ್ಯಕ್ರಮ.ವೇದಾಧ್ಯಾಯೀ ಪಂಡಿತ್ ಸುಧಾಕರ ಶರ್ಮರ ಪ್ರವಚನ.ಸರಳ ಜೀವನ-ಉದಾತ್ತ ಚಿಂತನ. ಅನೇಕ ದಿನಗಳಿಂದ ನನ್ನ ಮನದಲ್ಲಿ ಕಾಡುತ್ತಿದ್ದ ಕೊರಗು-" ಛೇ, ಜೀವನದಲ್ಲಿ ಅದೆಷ್ಟು ದಂಡ ಮಾಡುತ್ತೇವೆ?" ಇದೇ ವಿಚಾರದಲ್ಲಿ ನನ್ನ ಪತ್ನಿಯೊಡನೆ ಬಿಸಿ ಬಿಸಿ ಮಾತುಗಳು.ಮುನಿಸಿಪಾಲಿಟಿ ನೀರು ಬಂದು ನೇರ ಸಂಪಿಗೆ ಬೀಳುತ್ತೆ.[ನಮ್ಮೂರಲ್ಲಿ ನಲ್ಲಿಗೆ ಮೀಟರ್ ಇಲ್ಲ.] ಅದಕ್ಕೆ ಒಂದು ನಿಯಂತ್ರಣವಿದೆ. ನಮಗೆ ಬೇಕಾಗುವಷ್ಟು ಬಂದಮೇಲೆ ಅದು ತಾನೇ ತಾನಾಗಿ ನಿಲ್ಲಲು ಅವಕಾಶವಿದೆ. ಆದರೂ ಅದನ್ನು ತಪ್ಪಿಸಿ ಸಂಪ್ ತುಂಬಿ ನೀರು ಚಿರಂಡಿಗೆ ಹೋಗುವಾಗ , ನಿತ್ಯವೂ ನನ್ನ ಮಾಮೂಲಿ ಪಾಠ " ನೋಡು ಕೊನೆಯಮನೆಯಲ್ಲಿ ನೀರಿಲ್ಲದೆ ಪರದಾಡುತ್ತಿದ್ದಾರೆ. ನೀನು ಸಂಪ್ ತುಂಬಿ ಚಿರಂಡಿಗೆ ನೀರು ಹರಿಸುತ್ತಿದ್ದೀಯಾ! "

ಅದಕ್ಕೆ ಮಾಮೂಲಿ ಉತ್ತರ-" ನಿಮಗೇನು ಗೊತ್ತು, ನೀರು ಬಿಟ್ಟು ನಾಲ್ಕು ದಿನಗಳಾಯ್ತು, ನೀವೇನು ಸಂಸಾರ ಮಾಡಬೇಕೆ? ನಮ್ಮ ಕಷ್ಟ ನಿಮಗೆಲ್ಲಿ ಗೊತ್ತಾಗುತ್ತೆ?

-" ತೀರಾ ನೀರು ಬರದಿದ್ದರೆ ೧೫೦ ರೂಪಾಯಿಗೆ ಒಂದು ಟ್ಯಾಂಕ್ ನೀರು ಹಾಕಿಸಿದರಾಯ್ತು. ಕಂಟ್ರೋಲ್ ತೆಗೆಯಬೇಡ ಎಂದರೂ ಕೇಳುವುದೇ ಇಲ್ಲ. ಅವಳು ತೆಗೆಯುವುದು, ನಾನು ಹಾಕುವುದು, ಇದು ಮಾಮೂಲಿ ನಮ್ಮ ಮನೆಯಲ್ಲಿ.ಆದಷ್ಟೂ ನೀರು ಪೋಲಾಗುವುದಕ್ಕೆ ನಾನು ಬಿಡುವುದಿಲ್ಲ,ಆದರೂಈ ವಿಚಾರಕ್ಕಾಗಿ ಬಿಸಿ ಬಿಸಿ ಮಾತನಾಡಬೇಕಲ್ಲಾ! ಎಂಬ ಕೊರಗು ನನ್ನ ಮನದಲ್ಲಿ.

ಇನ್ನು ತರಕಾರಿ, ಹಣ್ಣು , ಕೆಲವು ಆಹಾರ ಪದಾರ್ಥಗಳು ಕೊಳೆತು ಹೊರಗಡೆ ಎಸೆದಾಗಲಂತೂ ತುಂಬಾ ಬೇಸರ ವಾಗುತ್ತೆ. ನಾನುವಿದ್ಯುತ್ ಇಲಾಖೆಯಲ್ಲಿರುವುದರಿಂದ ೨೦೦ ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ ಇದೆ.ಆನಂತರ ೧೦೦ ಯೂನಿಟ್ ಗಳಿಗೆ ಕಡಿಮೆ ದರ ಬೇರೆ.ನಿತ್ಯವೂ ಬಾಯ್ಲರ್ ನಲ್ಲಿ ನೀರು ಕುದಿಸಿ ಸ್ನಾನ ತಡವಾಗಿ ನೀರು ಆರಿ ಹೋಗುವುದು! ಯಾವ ದೇವರಿಗೆ ಪ್ರೀತಿ? ಅದಕ್ಕಾಗಿ ಮತ್ತೆ ಪ್ರವಚನ. ವಿದ್ಯುತ್ ಕ್ಷಾಮ ಬೇರೆ.ಬೇರೆಯವರಿಗೆ ಉಳಿತಾಯ ಮಾಡಿ ಎಂದು ಹೇಳಬೇಕಾದರೆ ಸ್ವತ: ನಾನು ಪಾಲಿಸಿರಬೇಕಲ್ಲ!

ಹೀಗೆ ನಾವು ದಂಡ ಮಾಡುವ ನೀರು, ವಿದ್ಯುತ್ , ಆಹಾರ ಪದಾರ್ಥಗಳನ್ನು ದಂಡವಾಗದಂತೆ ಎಚ್ಚರ ವಹಿಸಿದ್ದರೆ ಅದೆಷ್ಟು ಜನರಿಗೆ ಉಪಯೋಗವಾಗುತ್ತಿತ್ತು, ಎಂಬುದು ನಮಗೆ ಹೊಳೆಯುವುದೇ ಇಲ್ಲ ವಲ್ಲಾ!

ಅದೇ ರೀತಿ ಹೆಚ್ಚು ಹೆಚ್ಚು ಸಂಗ್ರಹಿಸುವ ಬುದ್ಧಿಯಿಂದ ಅದೆಷ್ಟು ಹಾನಿ ಮಾಡಿಕೊಳ್ಳುತ್ತೇವೆಂಬ ಕಲ್ಪನೆ ನಮಗಿದೆಯೇ? ನಮ್ಮ ಮನೆಗಳಲ್ಲಿ ಇರುವ ಪದಾರ್ಥಗಳ ಬಳಕೆಯಬಗ್ಗೆ ಸುಮ್ಮನೆ ಒಂದು ಸರ್ವೆ ಮಾಡೋಣ.ಇರುವ ಪದರ್ಥಗಳಲ್ಲಿ ನಿತ್ಯ ಉಪಯೋಗ ವಾಗುತ್ತಿರುವುದೆಷ್ಟು? ಸುಮ್ಮನೆ ಇರುವುದೆಷ್ಟು? ಹಾಗೇ ಒಮ್ಮೆನೋಡ ಹೊರಟರೆ ಉಪಯೋಗಕ್ಕೆ ಬಾರದ ವಸ್ತುಗಳ ಸಂಖ್ಯೆಯೇ ಜಾಸ್ತಿ, ಎಂಬುದು ನಮ್ಮ ಗಮನಕ್ಕೆ ಬಂದರೂ ನಮ್ಮದೇ ಅದಕ್ಕೆ ಸಮಝಾಯಿಶಿ ಬೇರೆ ಇರುತ್ತೆ. ಇದನ್ನು ಎಸೆಯಲೂ ಮನಸ್ಸು ಬರುಲ್ಲ. ಇಟ್ಟುಕೊಳ್ಳುವುದರಿಂದ ಪ್ರಯೋಜನವಿಲ್ಲ. ಅಂತಹಾ ವಸ್ತುಗಳ ಬಗ್ಗೆಯೂ ಇದರ ಸದ್ವಿನಿಯೋಗ ಹೇಗೆ ಎಂಬ ಚಿಂತನೆ ಮಾಡುವುದೇ ಇಲ್ಲ.

ನಮ್ಮ ಒಬ್ಬರು ಮಿತ್ರರು. ಅವರ ಮನೆಯಲ್ಲಿ ಸ್ಟೀಲ್ ಕುರ್ಚಿ, ಡೈನಿಂಗ್ ಟೇಬಲ್ ಇತ್ಯಾದಿ ಇತ್ತು. ಸ್ವಲ್ಪ ಧನಿಕರಾದರು. ಬೀಟೆ ಮರದ ಫರ್ನಿಚರ್ ಬಂತು. ಆಗ ಆಪುಣ್ಯಾತ್ಮ ಮಾಡಿದ ಕೆಲಸವೇನು ಗೊತ್ತೆ? ಹಳೆಯ ಕುರ್ಚಿ-ಟೇಬಲ್ ಎಲ್ಲವನ್ನೂ ಅವರ ಆಫೀಸ್ ಜವಾನನನ್ನು ಕರೆದು ಕೊಟ್ಟುಕಳಿಸಿ ಬಿಟ್ಟರು. ಆಗ ಅವರಿಗೆ ನಿರಾಳ.

ಕೆಲವು ಮನೆಯಲ್ಲಿ ನಾನು ಗಮನಿಸಿರುವೆ.ಕಾಲೇಜಲ್ಲಿ ಓದುವ ಮಕ್ಕಳು ಮನೆಯಲ್ಲಿದ್ದಾರೆಂದರೆ ಮನೆತುಂಬಾ ಅವರ ಬಟ್ಟೆಯೇ! ಅವರು ಓದಿ ಕೆಲಸ ಕ್ಕೆ ಸೇರಿಬಿಟ್ಟರಂತೂ ಪ್ರತೀ ತಿಂಗಳ ಸಂಬಳದಲ್ಲೂ ಒಂದೊಂದು ಜೊತೆ ಕೊಳ್ಳುವುದು ಒಂದು ಫ್ಯಾಶನ್. ಅಪ್ಪ-ಅಮ್ಮನ ಸಮಝಾಯಿಶಿ ಹೇಗಿರುತ್ತದೆಂದರೆ ಅವನ ದುಡಿಮೆಯಲ್ಲಿ ಅವನು ಹೇಗಾದರೂ ಆನಂದ ವಾಗಿರಲಿ! ಆನಂದದ ಕಲ್ಪನೆ ಯಾದರೂ ನಮಗಿದೆಯೇ? ಇಂತಹಾ ಮನೆಯಲ್ಲಿ ಬಟ್ಟೆಗಳ ರಾಶಿ ರಾಶಿ.

ಕೆಲವು ಸಂದರ್ಭಗಳಲ್ಲಿ ಏನಾಗುತ್ತದೆಂದರೆ ಮಕ್ಕಳು ಬೆಳೆದಂತೆಲ್ಲಾ ಬೇಗ ಬೇಗ ಬಟ್ಟೆ ಬಿಗಿಯಾಗಿಬಿಡುತ್ತೆ. ಅಂತಾ ಹತ್ತಾರು ಉಡುಪುಗಳು ಮನೆಯಲ್ಲಿ ಉಪಯೋಗಕ್ಕೆ ಬಾರದೆ ಇರುತ್ತೆ. ಇಲ್ಲೊಂದು ಸಮಸ್ಯೆ ಕೂಡ ಇದೆ. ಹಿಂದಿನ ಕಾಲದಲ್ಲಾಗಿದ್ದರೆ ಮನೆಯಲ್ಲಿ ನಾಲ್ಕು ಜನ ಮಕ್ಕಳಿರುತ್ತಿದ್ದರು. ಅಣ್ಣ ಬೆಳೆದಂತೆಲ್ಲಾ ಅದೇ ಉಡುಪು ತಮ್ಮನಿಗೆ ಸರಿಯಾಗುತ್ತಿತ್ತು. ಪುಸ್ತಕಗಳ ವಿಚಾರದಲ್ಲೂ ಅಷ್ಟೆ. ನನಗೆ ಚೆನ್ನಾಗಿ ನೆನಪಿದೆ.ನಾವು ಪ್ರತೀ ವರ್ಷ ಬೇಸಿಗೆ ರಜೆಯಲ್ಲಿ ಮಾಡುತ್ತಿದ್ದ ಕೆಲಸವೇ ಅದು. ಅರ್ಧ ಚಾರ್ಜ್ ಗೆ ಪುಸ್ತಕ ಮಾರುವುದು/ಕೊಳ್ಳುವುದು.ಅಥವ ಅಣ್ಣನ/ಅಕ್ಕನ ಪುಸ್ತಕಗಳು ತಂಗಿಗೆ/ತಮ್ಮನಿಗೆ ಆಗುತ್ತಿತ್ತು.ಈಗ ಅದೆಲ್ಲಾ ಸಂಕೋಚದ ಕೆಲಸ.

ಇಂದಿನಕಾಲಕ್ಕೆ ಹಿಂದಿನ ಕಾಲದ ರೀತಿ ಹೊಂದುವುದಿಲ್ಲ. ಕಾರಣ ಮನೆಯಲ್ಲಿ ಒಂದೇ ಮಗು. ಅದು ಬೆಳೆದಂತೆಲ್ಲಾ ಅದರ ಬಟ್ಟೆ, ಪುಸ್ತಕಗಳು,ಆಟದ ಸಾಮಾನುಗಳು, ಮನೆಯಲ್ಲಿ ಕೆಲಸಕ್ಕೆ ಬಾರದ ವಸ್ತುಗಳಾಗಿ ಮನೆಯ ಜಾಗವನ್ನೆಲ್ಲಾ ಅಕ್ರಮಿಸಿಕೊಂಡಿರುತ್ತವೆ. ಅದರ ಮರು ಬಳಕೆ, ಉಪಯೋಗದ ಬಗ್ಗೆ ಇಂದಿನವರು ಹೆಚ್ಚು ಚಿಂತನೆ ಮಾಡುವುದೇ ಇಲ್ಲ.ಇದಕ್ಕೆ ಅಪವಾದ ವಿಲ್ಲ ವೆಂದಲ್ಲ.

ಇಂತಹಾ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಮ್ಮಮಕ್ಕಳು ಓದಿ ಮುಗಿಸಿರುವ ಪುಸ್ತಕಗಳು, ಬಿಗಿಯಾದ ಬಟ್ಟೆಗಳು,ಆಟದ ಸಮಾನುಗಳನ್ನು ಅಗತ್ಯವಿರುವ ಜನರ ಉಪಯೋಗಕ್ಕೆ ನೀಡಿದರೆಸಾರ್ಥಕವಾಗುತ್ತದೆಂಬ ಅರಿವು ನಮಗೆ ಬರಬೇಡವೇ?

ನಮ್ಮ ಮನೆಯಲ್ಲಿ ಗಾರೆ ಕೆಲಸ ಮಾಡಲು ಒಬ್ಬ ಕೆಲಸಗಾರ ಬಂದ. ವಯಸ್ಸು ೨೦ ವರ್ಷ.ನಾನೂ ಗಮನಿಸುತ್ತಿದ್ದೆ. ಪಾಪ! ಪ್ರತಿನಿತ್ಯವೂ ಅದೇಪ್ಯಾಂಟ್ ನಲ್ಲಿ ಬಂದು, ಅದನ್ನು ಬಿಚ್ಚಿಟ್ಟು ಕೆಲಸದ ಬಟ್ಟೆ ತೊಟ್ಟು ಕೆಲಸ ಮಾಡುತ್ತಿದ್ದ. ನನ್ನ ಮಗ ೨೩ ವರ್ಷದವನು.ಆರು ತಿಂಗಳಲ್ಲಿ ಸ್ವಲ್ಪ ಬೆಳೆದ.ಪ್ಯಾಂಟ್ ಗಳೆಲ್ಲ ಬಿಗಿಯಾಗಿತ್ತು. ತುಂಬಾ ಬೆಲೆಯ ಪ್ಯಾಂಟ್ ಗಳು. ಹೊಸದಾಗಿಯೇ ಇವೆ. ನನ್ನ ಮಗ ಹೇಳಿದ. ಚಂದ್ರನಿಗೆ ಈ ಪ್ಯಾಂಟ್ ಗಳನ್ನು ಕೊಟ್ಟು ಬಿಡೋಣಾ ಅಪ್ಪ. ಚಂದ್ರನನ್ನು ಕೆಳಿದೆ-" ನೋಡು ಚಂದ್ರ, ನನ್ನ ಮಗನ ಹತ್ತಿರ ಅವನಿಗೆ ಬಿಗಿಯಾದ ನಾಲ್ಕೈದು ಪ್ಯಾಂಟ್ ಗಳಿವೆ. ನೀನು ಬೇಸರ ಪಟ್ಟುಕೊಳ್ಳದಿದ್ದರೆ ಅವನ್ನು ನೀನು ಧರಿಸುವುದಾದರೆ ಕೊಡುತ್ತೇನೆ"

ಅದಕ್ಕೆ ಚಂದ್ರ ಹೇಳಿದ-" ಕೊಡೀ ಸಾರ್ ಅವರು ನನ್ನ ಅಣ್ಣ ಇದ್ದಹಾಗೆ"

ಅಂದು ಚಂದ್ರ ನನ್ನ ಮಗನ ಹೊಸ ಪ್ಯಾಂಟ್ ಶರ್ಟ್ ಧರಿಸಿ ಎಶ್ಟು ಸಂತೋಷ ಪಟ್ಟು ಕೊಂಡನೆಂದರೆ, ನನಗೆ ಅಗ ಸಾರ್ಥಕ ವೆನಿಸಿತು.ನಡೆದ ಘಟನೆ ಹೆಳಿದೆ ಅಷ್ಟೆ.

ಇನ್ನೊಂದು ಮುಖ್ಯ ಸಂಗತಿ ಮನೆಯ ಕ್ಲೀನಿಂಗ್. ಯಾರೋ ಅತೀ ಶ್ರೀಮಂತರು ನಾಲ್ಕರು ಆಳು ಇಟ್ಟುಕೊಂಡು ಬಂಗಲೆಯಲ್ಲಿ ಜೀವನ ಮಾಡುವ ವಿಚಾರ ಬೇರೆ.ಆದರೆ ಸಾಮನ್ಯ ಮಧ್ಯಮ ತರಗತಿಯ ಜನರು ಮನೆಯಲ್ಲಿ ಸರಳ ವಾಗಿ ಜೀವನ ಮಾಡದೆ ಹೆಚ್ಚು ಬೆಲೆಬಾಳುವ ಫರ್ನಿಚರ್, ಟಿ.ವಿ, ಫ್ರಿಜ್ ಮೊದಲಾದುವುಗಳನ್ನು ಬಹಳ ಕಷ್ಟಪಟ್ಟು ಹೊಂದಿಸಿಕೊಂಡಿದ್ದರೆ ಪ್ರತಿದಿನ ಮನೆಯ ಕ್ಲೀನ್ ಮಾಡುವುದೇ ಮನೆಯೊಡತಿ/ಒಡೆಯನಿಗೆ ಒಂದು ದೊಡ್ದ ತಲೇ ನೋವು. ನಗರಗಳಲ್ಲಿ ಬದುಕುವವರಿಗೆ ಈಗಂತೂ ವಾಹನಗಳ ರಭಸದ ಓಡಾಟದಿಂದ ಮನೆಯ ತುಂಬಾ ದೂಳು. ಅದರ ಪರಿಣಾಮ ಮನೆಯ ವಸ್ತುಗಳ ಮೇಲೆಲ್ಲ ದೂಳುಮಯ.ನಾವು ನಲವತ್ತು-ಐವತ್ತು ಸಾವಿರ ತೆತ್ತು ಫರ್ನಿಚರ್ ಮಾಡಿದ್ದಾಗಿದೆ. ಇನ್ನು ಕ್ಲೀನ್ ಮಾಡುವ ಕೆಲಸವೂ ನಮ್ಮದೇ ತಾನೇ. ಅದಕ್ಕಾಗಿ ಯಾವಗಲೂ ಕೈಯಲ್ಲಿ ಒಂದು ಬಟ್ಟೆಹಿಡಿದು, ಟಿ.ವಿ.ಸ್ಟ್ಯಾಂಡ್, ಟೆಲೆಫೋನ್.ಫ್ರಿಜ್, ಕುರ್ಚಿ, ಟೇಬಲ್, ಸೋಫಾ, ಎಲ್ಲವನ್ನೂ ಒರೆಸುತ್ತಲೇ ಇರಬೇಕು. ಇನ್ನು ಮನೆಗೆ ಗೆಸ್ಟ್ ಗಳು ಬರುತ್ತಾರೆಂದರಂತೂ ಅವರು ಏನೆಂದುಕೊಳ್ಳುತ್ತಾರೋ ಅಂತಾ ಬೆಳಿಗ್ಗೆ ಐದಕ್ಕೇ ಎದ್ದು ಮನೆ ಕ್ಲೀನಿಂಗ್ ಮಾಡಿದ್ದೇ ಮಾಡಿದ್ದು.ಇದು ನನ್ನ ಅನುಭವವವೇ ಹೌದು. ಅಂತಹಾ ಸಂದರ್ಭದಲ್ಲೆಲ್ಲಾ ನಾನೆಂದುಕೊಳ್ಳುತ್ತೇನೆ. ಜಾಡಮಾಲಿಗೂ ನಮಗೂ ಏನು ವೆತ್ಯಾಸ? ಅವನಿಗಾದರೂ ಅದೇ ಫುಲ್ ಟೈಮ್ ಕೆಲಸ. ನಾನು ನನ್ನ ಆಫೀಸ್ ,ಓದು-ಬರಹ,ಇವೆಲ್ಲಕ್ಕೂ ವಿನಿಯೋಗಿಸಬೇಕಿದ್ದ ಬಹುಪಾಲು ಸಮಯ ಜಾಡಮಾಲಿ ಕೆಲಸಕ್ಕೆ ವಿನಿಯೋಗಿಸುತ್ತಿದ್ದೀನಲ್ಲಾ!!

ಇದಕ್ಕೆ ಕಾರಣ ವಿವರಿಸಬೇಕಾಗಿಲ್ಲವಲ್ಲಾ?

ಮನೆಯ ಹಾಲ್ ನಲ್ಲಿ ಬಂದವರು ಕುಳಿತುಕೊಳ್ಳುವುದಕ್ಕಾಗಿ ಚಾಪೆಯೊಂದನ್ನು ಹಾಕಿರುವ ಪದ್ದತಿ ಈಗಲೂ ಹಳ್ಳಿಯಲ್ಲಿದೆ.ಹಾಲ್ ನ್ನು ಒಮ್ಮೆ ಗುಡಿಸಿ ಚಾಪೆ ಹಾಕಿದರೆ ಮುಗಿದುಹೋಯ್ತು, ಬಂದವರೊಡನೆ ಆನಂದವಾಗಿ ಮಾತಕತೆಯಾಡಿಕೊಂಡು ಕಾಲ ಹಾಕುವ ಹಳ್ಳಿಜನರನ್ನು ನೋಡಿದಾಗ ಪಟ್ಟಣದ ಫರ್ನಿಚರ್ ಅವಾಂತರ ನನಗಂತೂ ನಿಜವಾಗಿ ಬೇಸರ ತರಿಸುತ್ತೆ. ಎಂತಹ ಅಮೂಲ್ಯ ಸಮಯವು ಕ್ಷುದ್ರ ಕೆಲಸಕ್ಕಾಗಿ ನಾವು ಕಳೆದುಕೊಳ್ಳುತ್ತಿದ್ದೇವೆ. ಅದಕ್ಕಾಗಿಯೇ ನಮ್ಮ ಪೂರ್ವಜರು ಹೇಳಿದರು ಸರಳವಾಗಿ ಬದುಕು- ಉದಾತ್ತವಾಗಿ ಬದುಕು.

ಈ ದಿಕ್ಕಿನಲ್ಲಿ ಬರೆದಷ್ಟೂ ಇದೆ.ಸಂಪದಿಗರೇ ಪ್ರತಿಕ್ರಿಯೆಗಳಲ್ಲಿ ನಾವು ಸುಧಾರಣೆ ಮಾಡಿಕೊಳ್ಳಬೇಕಾದ ಬಗ್ಗೆ ಸಲಹೆ ಕೊಟ್ಟರೆ ಉತ್ತಮ. ಲೇಖನ ಅದಕ್ಕಾಗಿಯೇ ಮುಂದುವರೆಸ ಬೇಕಾಗಿಲ್ಲ. ಅಂತೂ ಒಂದು ಸಂಗತಿ ಸ್ಪಷ್ಟ. ಎಷ್ಟು ಸರಳವಾಗಿ, ಎಷ್ಟು ಕಡಿಮೆ ಸಾಮಾನುಗಳಿಂದ ನಮ್ಮ ಜೀವನ ಸಾಗುತ್ತದೋ ಅಷ್ಟು ನೆಮ್ಮದಿ ಸಿಗುವುದರಲ್ಲಿ ಸಂದೇಹವಿಲ್ಲ.ನಮ್ಮಮನೆಯಲ್ಲಿ ಅನಗತ್ಯವಾಗಿ ಮೂಲೆಸೇರಿರುವ ವಸ್ತುಗಳು ಯಾರಿಗಾದರೂ ಉಪಯೋಗ ವಾಗುತ್ತದೆಯೇ ಯೋಚಿಸಬಾರದೇಕೇ?

ಏಳುಹಳ್ಳಿಗಳ ಜನರಊರಹಬ್ಬ

ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಹರಿಹರಪುರ ಗ್ರಾಮದ ದೇವಿ ಉಡುಸಲಮ್ಮ ದುರ್ಗಾಪರಮೇಶ್ವರಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಿಂದೆ ಸಂಪದದಲ್ಲಿ ಬರೆದಿದ್ದೆ. ಮೊನ್ನೆ ಹರಿಹರಪುರಕ್ಕೆ ಹೋಗಿದ್ದಾಗ ದೇವಿಯ ಮುಂದೆ ಹತ್ತಿರದಲ್ಲಿ ಕುಳಿತು ಪಂಚಾಮೃತಾಭಿಶೇಕ, ಕುಂಕುಮಾರ್ಚನೆ, ಮಂಗಳಾರತಿಯನ್ನು ನೋಡಿ ಆನಂದಿಸಿದ್ದೇನೆ. ಏರ್ ಫೋರ್ಸ್ ನಿವೃತ್ತ ಅಧಿಕಾರಿಶೇಷಾದ್ರಿ ಅವರ ಪತ್ನಿಯೊಡನೆ ಬೆಂಗಳೂರಿನಿಂದ ಬಂದಿದ್ದರು.ಅವರ ಪತ್ನಿ ರತ್ನ ಅವರ ಬಾಯಲ್ಲಿ ದೇವಿಯ ಮಹಿಮೆ ಬಗ್ಗೆ ಕೇಳಿದರೆ ಅವರು ಹೇಳುತ್ತಾ ಹೇಳುತ್ತಾ ಕಣ್ಣಲ್ಲಿ ನೀರುತುಂಬಿಕೊಳ್ಳುತ್ತಾರೆ. ಅವರ ಜೀವನದಲ್ಲಿ ಎಲ್ಲಾ ಉನ್ನತಿಗೂ ದೇವಿಯಕೃಪೆಯೇ ಕಾರಣವೆಂದು ಅವರ ದೃಢ ನಂಬಿಕೆ.ಶೇಷಾದ್ರಿ ಯವರು ಡಿಪ್ಲೊಮೊ ಮಾಡಿ ಟೆಕ್ನೀಶಿಯನ್ ಆಗಿ ಏರ್ ಫೋರ್ಸ್ ಸೇರಿದ್ದರಂತೆ. ನಂತರ .ಎಮ್., ಮಾಡಿದ ಮೇಲೆ ಒಂದು ಉನ್ನತ ಹುದ್ಧೆಗೆ ನಡೆದ ಇಂಟರ್ ವ್ಯೂನಲ್ಲಿ ೧೦೪ ಅಭ್ಯರ್ಥಿಗಳಲ್ಲಿ ನಾಲ್ವರು ಆಯ್ಕೆಯಾಗುವಾಗ ಇವರಿಗೆ ಅದೊಂದು ಪವಾಡ ವೆಂದು ಹೇಳುತ್ತಾರೆ.ಕಾರಣ ಇವರಿಗಿಂತ ಅರ್ಹತೆ ಜಾಸ್ತಿ ಇರುವ ಅಭ್ಯರ್ಥಿಗಳಿದ್ದರೂ ಇವರಿಗೆ ಹುದ್ಧೆ ದಕ್ಕಿದ್ದು ದೇವಿಯ ಕೃಪೆಯೇ ಸರಿ ಎನ್ನುತ್ತಾರೆ. ಇವರ ಇಬ್ಬರು ಮಕ್ಕಳು ಅಮೇರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರುಗಳು. ಮನೆಮಂದಿಗೆಲ್ಲಾ ದೇವಿಯ ಮೇಲೆ ಅಗಾಧ ವಿಶ್ವಾಸ. ಅವರಿಂದ ಕೇಳಿದ್ದನ್ನು ಸಂಕೊಚವಿಲ್ಲದೆ ಹೇಳಬೇಕಾದ್ದು ನನ್ನ ಧರ್ಮ. ಅಂತೂ ದೇವಿಯನ್ನು ನಂಬಿರುವ ಸಾವಿರಾರುಭಕ್ತರಿಗೆ ದೇವಿಯ ಜಾತ್ರೆ ನೋಡುವಾಸೆ. ಇದೇ ೨೧ ನೇ ತಾರೀಕು ಶನಿವಾರ.ಬೆಳಿಗ್ಗೆ ಕ್ಕೆಶುರುವಾಗುವ ಕೆಂಡ ಕೆಂಡೋತ್ಸವ, ಸಿಡಿಯಾಟ, ತೇರು, ಚೋಮನ ಕುಣಿತ, ಉತ್ಸವ,ಎಲ್ಲವೂ ಮುಗಿಯುವಾಗ ಮದ್ಯಾಹ್ನ .೦೦ ಗಂಟೆ ಯಾಗಿರುತ್ತದೆ.

ಇದೊಂದು ಜಾನಪದ ಸೊಬಗು. ಭಕ್ತಿಯಮೆರಗು.ಹಳ್ಳಿಜನರಿಗೆ ಊರ ಹಬ್ಬ.ಹರಿಹರಪುರಕ್ಕೆ ಸೇರಿದ ಏಳುಹಳ್ಳಿಗಳ ಜನರಊರಹಬ್ಬ. ಮೂರು ಹಳ್ಳಿಗಳಿಂದ ಎಳೆದು ತರುವ ತೇರುಗಳು, ಏಳು ಬಂಡಿಗಳು, ಅವುಗಳ ಜೊತೆಗೂಡಿ ಬರುವ ಭಕ್ತಜನಸಾಗರ.

ಹರಿಹರಪುರ ತಲುಪುವುದು ಹೇಗೆ?

೧]ಬೆಂಗಳೂರಿನಿಂದ ಮದ್ಯಾಹ್ನ ೨.೦೦ ಗಂಟೆಗೆ ಹೊರಡುವ ಬೆಂಗಳೂರು-ಗೊರೂರು ಸರ್ಕಾರಿ ಬಸ್ ಹರಿಹರಪುರವನ್ನು ಸಂಜೆ ೭.೦೦ ಗಂಟೆಗೆ ಸೇರುತ್ತೆ.

೨] ಹೊಳೇನರಸೀಪುರಕ್ಕೆ ಎಮ್ಟು ಕಿಲೋಮೀಟರ್ ದೂರ. ಸಾಕಷ್ಟು ಬಸ್ಸುಗಳು, ಟೆಂಪೋಗಳು ಲಭ್ಯ

೩] ಹಾಸನದಿಂದ ೩೦ ಕಿಲೋಮೀಟರ್ ದೂರ. ಹೆಚ್ಚು ಸೌಕರ್ಯ ಬಯಸುವವರು ಹಾಸನದಲ್ಲಿ ತಂಗಿದ್ದು ಬೆಳಿಗ್ಗೆ ಸ್ನಾನ ಮುಗಿಸಿ ೭.೦೦ ಗಂಟೆಗೆ ಹಾಸನ ಬಿಟ್ಟರೂ ಸಕಾಲಕ್ಕೆ ಹರಿಹರಪುರ ತಲುಪ ಬಹುದು. ಹಾಸನದಿಂದ ಹೊಳೇನರಸೀಪುರ ಹೆದ್ದಾರಿಯಲ್ಲಿ ಹೊರಟಾಗ ಹಳೇಕೋಟೆ ಎಂಬಊರು ದಾಟುತ್ತಿರುವಾಗ ಎಡಕ್ಕೆ ಮಾವಿನಕೆರೆ ರಂಗನಾಥನ ಬೆಟ್ಟ ಕಾಣುತ್ತೆ.ಅದರ ಪಕ್ಕದಲ್ಲಿ ಅಂದರೆ ಹೆದ್ದಾರಿಯಿಂದ ಎಡಕ್ಕೆ ತಿರುಗಿದರೆ ಅದೂ ಒಂದು ಹೆದ್ದಾರಿಯೇ. ಅದು ದೇವೇಗೌಡರ ಹುಟ್ಟೂರಾದ ಹರದನಹಳ್ಳಿ ಮಾರ್ಗವಾಗಿ ಹರಿಹರಪುರ ತಲಪುತ್ತೆ.

ಬೆಂಗಳೂರು ಮತ್ತು ಹೊರ ಊರು ಗಳಿಂದ ಬರಲು ಅಪೇಕ್ಷಿಸುವವರು ಇದೇ ಬರಹದಡಿ ಪ್ರತಿಕ್ರಿಯೆ ಕಾಲಮ್ ನಲ್ಲಿ ಬರೆದರೆ ಸೂಕ್ತ ವ್ಯವಸ್ತೆ ಮಾಡಲಾಗುವುದು.

ಸಿಡಿಜಾತ್ರೆ, ದೇವಿಯ ಮತ್ತು ಕೆಂಡಕೊಂಡ ಚಿತ್ರಗಳನ್ನು ಕೆಳಗಿನ ಕೊಂಡಿಯಲ್ಲಿ ನೋಡಬಹುದು.[ವರ್ಡ್ ಪ್ರೆಸ್ ಡಾಟ್ ಕಾಮ್ ನಲ್ಲಿ ಚಿತ್ರಗಳಿವೆ.]

ಊರಮದುವೆ

ತಲೆಬರಹ ನೋಡಿದಕೂಡಲೇ ಯಾರಾದರೂ ಊರಿಗೆ ಮದುವೆ ಮಾಡ್ತಾರಾ? ಇವರೆಲ್ಲೋ ಹುಚ್ಚರಿರಬೇಕು, ಅನ್ನುವಂತವರೂ ಇರ ಬಹುದು.ಅಂದಹಾಗೆ ನಿಮ್ಮ ಮಗಳನ್ನು ಯಾವ ಊರಿಗೆ ಕೋಟ್ರಿ? ಅಂತಾ ನಮ್ಮ ಕಡೆ ಜನ ಕೇಳ್ತಾರೆ.ಅಂದ್ರೆ ಹೆಣ್ಣನ್ನು ಯಾವುದಾದರೂ ಊರಿಗೇ ಮದುವೆ ಮಾಡಿಕೊಡುತ್ತಾರೇನು? ಆದರೆ ಅದು ರೂಢಿಗೆ ಬಂದು ಬಿಟ್ಟಿದೆ. ಇನ್ನು ವಿಚಾರಕ್ಕೆ ಬರುವೆ. ನಾನು ಬರೆಯೋ ಬರಹಕ್ಕೂ ನನ್ನ ಚಟುವಟಿಕೆಗಳಿಗೂ ಸಂಬಂಧ ವಿರುತ್ತೆ. ಹಾಗಾಗಿ ನನ್ನ ಅನುಭವದ ಮಾತುಗಳನ್ನೇ ಬರೆಯ ಬೇಕಾಗುತ್ತದೆ. ಅದು ಕೆಲವರಿಗೆ ನನ್ನ ಬಗ್ಗೆ " ಇವನದೊಂದು ಪ್ರತಿಷ್ಟೆ" ಅಂತಾ ಅನ್ನಿಸ ಬಹುದು. ಆದರೆ ಏನು ಮಾಡಲೀ, ಬರೆಯದೆ ವಿಧಿ ಇಲ್ಲ. ಈಗ್ಗೆ ಮೂರ್ನಾಲ್ಕು ತಿಂಗಳಲ್ಲಿ ನಮ್ಮೂರ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಹೋಗಿದ್ದಾಗ ಅಲ್ಲಿನ ಅರ್ಚಕರಾದ ಕೃಷ್ಣಮೂರ್ತಿಗಳು " ನಿಮ್ಮಲ್ಲಿ ಒಂದು ವಿಚಾರ ಪ್ರಸ್ಥಾಪ ಮಾಡಬೇಕು, ಒಂದು ಅರ್ಧ ಗಂಟೆ ಇರ್ತೀರಾ?" ಎಂದರು - ಆಗಲೀ ಗುರುಗಳೇ, ಏನ್ ಸಮಾಚಾರ? - ನಿಮ್ಮ ತಮ್ಮನ ಮಗಳಿಗೆ ಮದುವೆ ಮಾಡ್ತೀರಾ? - ಅವಳಿನ್ನೂ ೨೧ ವರ್ಷದ ಹುಡುಗಿ. ಏನೂ ಯೋಚನೆ ಮಾಡಿಲ್ಲ - ನೋಡಿ ಕೃಷ್ಣಮೂರ್ತಿಗಳು ಹೀಗೆ ಹೇಳ್ತಾನೆ ಅಂತಾ ತಪ್ಪು ತಿಳೀ ಬೇಡಿ, ಮೊನ್ನೆ ಚಂಡಿಕಾಹೋಮ ಮಾಡಿಸಲು ೮-೧೦ ಜನ ಋತ್ವಿಕರು ಬಂದಿದ್ದರು. ಎಲ್ಲರೂ ಯುವಕರುಗಳು. ಅದರಲ್ಲಿ ಒಬ್ಬ " ಲಕ್ಷ್ಮೀಶ " ಅನ್ನೋ ಯುವಕ.ನಿಮ್ಮ ತಮ್ಮನ ಮಗಳು ದೇವಸ್ಥಾನಕ್ಕೆ ಬಂದಿದ್ದಳು. ಅವಳನ್ನು ನೋಡಿ " ಕೃಷ್ಣಮೂರ್ತಿಗಳೇ, ಈ ಹುಡುಗಿ ಯಾರು? ಅವರಮನೆಯಲ್ಲಿ ನಮ್ಮಂತವರಿಗೆ ಕೊಡಲು ಒಪ್ಪಿದರೆ ನಾನು ಮದುವೆಯಾಗ ಬಯಸುವೆ" ಎಂದು ಹೇಳಿಕೊಂಡ. " ಆಗಲೀ ವಿಚಾರ ಮಾಡುವೆ"- ಎಂದು ತಿಳಿಸಿದೆ. ನಿಮ್ಮ ತಮ್ಮ ನಿಗೆ ಕೇಳಿದೆ -" ನಮಗೆಲ್ಲಿ ಈಗ ಮದುವೆ ಮಾಡುವ ಶಕ್ತಿ ಇದೆ, ನಮ್ಮಣ್ಣನನ್ನು ಕೇಳಬೇಕು, ಅವರು ಮನಸ್ಸು ಮಾಡಿದರೆ ನೋಡೋಣ, ಅಂತಾ ಹೇಳಿದರು, ಈಗ ಚಂಡು ನಿಮ್ಮ ಕೋರ್ಟಿನಲ್ಲಿದೆ. ಎಲ್ಲಾ ನಿಮಗೆ ಬಿಟ್ಟಿದ್ದು. ಹುಡುಗ ಮಾತ್ರ ತುಂಬಾ ಯೋಗ್ಯ. ಹೊನ್ನಾವರದವರು. ಹವ್ಯಕ ಬ್ರಾಹ್ಮಣರು. ವೇದಪಾಠವಾಗಿದೆ. ಹವನ-ಹೋಮಗಳನ್ನು ಮಾಡಿಸುವ ಸಾಮರ್ಥ್ಯವಿದೆ. ಹೆಂಡತಿ ಸಾಕುವ ಸಾಮರ್ಥ್ಯವಿದೆ. ನೀವು ಒಪ್ಪುವುದಾದರೆ ಮುಂದೆ ಯೋಚಿಸ ಬಹುದು" ದೇವಿಯ ಸನ್ನಿಧಿಯಲ್ಲಿ ದೇವಿಯ ಅರ್ಚಕರ ಬಾಯಿಂದ ಇಂತಹಾ ಒಂದು ಪ್ರೊಪೋಸಲ್ ಬಂದಿದ್ದರಿಂದ ಸಂತೋಷವೇ ಆಯ್ತು. ನಾನು ವಿಚಾರಿಸುತ್ತೆನೆಂದು ಹೇಳಿ ಸ್ವಲ್ಪ ದಿನಗಳು ಸುಮ್ಮನಾದೆ. ಒಂದು ದಿನ ನನ್ನ ತಮ್ಮನೇ ನನಗೆ ಫೋನಾಯಿಸಿ " ದೇವಿಯ ಅರ್ಚಕರು ಮಾತನಾಡಿದ್ರು, ಏನು ನಿರ್ಧರಿಸಿರಿ? ಅಂತಾ ಕೇಳಿದ್ರು, ಏನು ಮಾಡೋಣ, ಅಂತಾ ಕೇಳಿದ. ನಾನು ಹುಡುಗನ ಮನೆಯ ವಿವರ ಪಡೆದು ಅವನನ್ನು ನೋಡಲು ಪತ್ನಿ ಹಾಗೂ ನನ್ನ ಮಕ್ಕಳೊಡನೆ ಹೊರಟೆ. ಹೊಳೇನರಸೀಪುರದ ಅಧ್ಯಾತ್ಮ ಪ್ರಕಾಶ ಕಾರ್ಯಾಲಯಕ್ಕೆ ಹೋದೆವು. ಅಲ್ಲಿ ವೇ.ಬ್ರ.ಶ್ರೀ ಚಂದ್ರ ಮೌಳಿ ಅವಧಾನಿಗಳ ಭೇಟಿಯಾಯ್ತು. ಕಾರ್ಯಾಲಯ ಒಂದು ಸುತ್ತು ನೋಡಿದ್ದಾಯ್ತು. ಅವಧಾನಿಗಳೊಡನೆ ವಿಷಯ ಪ್ರಸ್ತಾಪವಾಯ್ತು." ಲಕ್ಷ್ಮೀಶನೇ, ಅವನಿಗೆ ಕಣ್ಣು ಮುಚ್ಚಿಕೊಂಡು ನಿಮ್ಮ ಹುಡುಗಿಯನ್ನು ಮದುವೆಮಾಡಿಕೊಡಿ. ವಿದ್ಯಾವಂತ. ಪತ್ನಿ ಸಾಕಲು ಸಮರ್ಥ.ಯೋಗ್ಯ. ಅವನು ಈಗ ಕೇವಲ ನನ್ನ ಶಿಷ್ಯನಲ್ಲ. ಅವನೇ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಾನೆ. ಅವನೂ ಕೂಡ ಗುರುವೇ ಆಗಿದ್ದಾನೆ. ಸರಿ. ಮುಂದಿನ ಪಯಣ ಹುಡುಗನ ಅಣ್ಣನ ಮನೆಗೆ. ಮೈಸೂರಲ್ಲಿ ಅವರೂ ಪೌರೋಹಿತ್ಯ ಮಾಡುವವರೇ.ಅವರ ಮನೆಗೆ ಹೋದರೆ ಮನೆತುಂಬಾ ವೇದ ಗ್ರಂಥಗಳು. ಇದರಲ್ಲಿ ಕಾಲು ಭಾಗ ನನ್ನದು, ಮುಕ್ಕಾಲು ಭಾಗ ಲಕ್ಷ್ಮೀಶನದು-ಎಂದು ವೇದ ಗ್ರಂಥಗಳನ್ನು ತೋರಿಸುವಾಗ ನನ್ನ ಮನಸ್ಸಿನಲ್ಲಿ ಆಗಲೇ ಒಂದು ನಿರ್ಧಾರಕ್ಕೆ ಬಂದಿದ್ದೆ. ಎಲ್ಲಾ ದೇವಿಯ ವರ ಪ್ರಸಾದ. ನಾನೇಕೆ ಬೇಡವೆನ್ನಲಿ? ಅಲ್ಲಿಂದ ತುಂಬಿದ ಮನಸ್ಸು ಹೊತ್ತು ಹಾಸನಕ್ಕೆ ವಾಪಸಾದೆ. ಲಕ್ಷ್ಮೀಶನನ್ನು ಒಮ್ಮೆ ಹಾಸನಕ್ಕೆ ಕರೆಯಿಸಿಕೊಂಡೆ. ಅವನೊಡನೆ ವಿಚಾರ ಮಾಡಿದೆ. - " ನೋಡಿ ನಾನು ನಿಮ್ಮ ತಮ್ಮನ ಮಗಳನ್ನು ಮದುವೆಯಾಗಬೇಕೆಂದು ಬಯಸಿರುವುದು ನಿಜ. ಆದರೆ ನಾನು ಮದುವೆಯಾಗುವ ಹೆಣ್ಣಿಗಾಗಿ, ನನ್ನ ವೇಷಭೂಷಣ, ದಿನಚರಿ, ಯಾವುದನ್ನೊ ಬದಲಿಸಿಕೊಳ್ಳಲಾರೆ." - ಅಂದರೆ? - ನೋಡಿ, ನಾನು ಶಿಖೆ ಬಿಟ್ಟಿದ್ದೀನಿ. ಅದನ್ನು ತೆಗೆಸಲಾರೆ. ಪ್ಯಾಂಟ್ ಧರಿಸಲಾರೆ. ಪಂಚೆ-ಶರ್ಟ್ ನನ್ನ ಮಾಮೂಲಿ ವೇಷ. ಮನದಲ್ಲೇ ಭೇಶ್, ಅಂದುಕೊಂಡೆ. ಆದರೂ ಮದುವೆಯಾಗುವ ಹೆಣ್ಣಿನ ಸ್ಪಷ್ಟ ಅಭಿಪ್ರಾಯ ಪಡೆಯಬೇಕಲ್ಲಾ! ನಮ್ಮ ಹಳ್ಳಿಗೆ ಲಕ್ಷ್ಮೀಶನನ್ನು ಕರೆಯಿಸಿ ಅವನ ವಿಚಾರವನ್ನು ಹುಡುಗಿಗೆ ಸ್ಪಷ್ಟವಾಗಿ ತಿಳಿಸಿದ್ದಾಯ್ತು. ಆಶ್ಚರ್ಯ! ಹುಡುಗಿ ನಗುನಗುತ್ತಲೇ ಒಪ್ಪಿಗೆ ಸೂಚಿಸಿದಳು. ಅವರ ಅಪ್ಪ-ಅಮ್ಮನೂ ಅಷ್ಟೆ. ಆಗ ನಾನೂ ಸರಿಯಾದ ನಿರ್ಧಾರಕ್ಕೆ ಬಂದೆ. ಎಲ್ಲರಿಗೂ ಪೂರ್ಣ ಒಪ್ಪಿಗೆ ಇರುವುದರಿಂದ ಮಾತುಕತೆ ಮುಂದುವರೆಸುವುದೆಂದು. ಹುಡುಗ ಹೇಳಿದ- ನಮ್ಮಣ್ಣನಿಗೆ ನಮ್ಮ ತಂದೆ ಎಲ್ಲಾ ಜವಾಬ್ದಾರಿ ಕೊಟ್ಟಿದ್ದರೂ ಸಹ ನೀವು ಒಮ್ಮೆ ನಮ್ಮ ಮನೆಗೆ ಹೋಗಿ ನಮ್ಮ ತಂದೆಯನ್ನು ನೋಡಿಕೊಂಡು ಬಂದುಬಿಡಿ. ನಾನು ಹೇಳಿದೆ. "ನಿಮ್ಮ ತಂದೆಗೂ ಒಪ್ಪಿಗೆ ಇದೆ ಎಂದ ಮೇಲೆ ನಾನು ನಿಮ್ಮ ಊರಿಗೆ ಹೋಗುವ ಅಗತ್ಯವಿಲ್ಲ. ಮುಂದು ವರೆಯೋಣ" ಆದರೂ ಹುಡುಗ " ಇಲ್ಲಾ, ನಮ್ಮ ಮನೆ ಒಮ್ಮೆ ನೋಡಿ ಬಂದು ನಿರ್ಧಾರ ತೆಗೆದುಕೊಳ್ಳಿ." ಅವನ ಬಲವಂತಕ್ಕೆ ಕಟ್ಟು ಬಿದ್ದು ಹುಡುಗನ ಅಣ್ನನ ಜೊತೆಗೂಡಿ ನಾನು ನನ್ನ ತಂಗಿ ಮತ್ತು ಅವಳ ಯಜಮಾನರೊಡನೆ ಹೊನ್ನಾವರ ದ ಸಮೀಪ " ಕಡಲೆ" ಗ್ರಾಮಕ್ಕೆ ಹೋಗುತ್ತೇವೆ. ಅಲ್ಲಿಯ ಅವರ ಮನೆ ನೋಡಿ ನನ್ನ ತಂಗಿ ಮನಸ್ಸು ಇಳಿ ಬಿಟ್ಟಳು " ಹೇಗಾದರೂ ಆಗಲೀ ಸುರೇಶ [ನನ್ನ ತಮ್ಮ] ಒಮ್ಮೆ ನೋಡಿದ ಮೇಲೆ ಒಪ್ಪಿಗೆ ಕೊಡೋಣ." ಕಾರಣ ವಿತ್ತು. ಚಿಕ್ಕದೊಂದು ತೋಟದಲ್ಲಿ ಹೆಂಚಿನ ಪುಟ್ಟ ಮನೆ. ಮನೆ ಅಂದರೆ ಎರಡು ರೂಮುಗಳು. ಹೊರಗೆ ಜಗಲಿ. ಅದರ ಮುಂದೆ ಒಂದು ಚಪ್ಪರ. ಅದರ ಕೆಳಗೆ ಒಂದು ಚಿಕ್ಕ ಬಚ್ಚಲು ಮನೆ. ಅದಕ್ಕೆ ಹೆಂಚಿನ ಬದಲು ತೆಂಗಿನ ಗರಿ. ತೆಂಗಿನ ಗರಿಯದೇ ಬಾಗಿಲು. ನನ್ನ ತಂಗಿ ಗಾಭರಿ ಯಾಗಿದ್ದಳು. ಆದರೆ ನನಗೆ ಧೈರ್ಯ ವಿತ್ತು. ಮನದಲ್ಲಿ ಆ ಹುಡುಗನ ಬಗ್ಗೆ ವಿಶ್ವಾಸ ಮೂಡಿತ್ತು. ನಾನು ನನ್ನ ತಂಗಿಗೆ ಹೇಳಿದೆ " ಆಗಲೀ ಸುರೇಶ ನೋಡಿದ ನಂತರವೇ ನಿರ್ಧರಿಸೋಣ." ಮಲೆನಾಡಿನ ಅವರ ಮನೆಯ ಊಟದಿಂದ ಮನಸ್ಸಿಗೆ ಹಿತವಾಗಿತ್ತು.ಅಲ್ಲಿಂದ ಹಿಂದಿರುಗಿದ ಮೇಲೆ ನನ್ನ ತಂಗಿ ನನ್ನ ತಮ್ಮನೊದನೆ ಅಲ್ಲಿನ ಋಣಾತ್ಮಕ ಸಂಗತಿ ಗಳನ್ನೇ ಹೇಳಿದ್ದಾಳೆ. ಆದರೂ ಪಾಪ! ಅವರೆಲ್ಲಾ ಒಪ್ಪಿಬಿಟ್ಟಿದ್ದರು. ನನ್ನ ತಮ್ಮ ನನಗೆ ಫೋನ್ ಮಾಡಿ ಹೇಳಿದ. " ನಾವೆಲ್ಲಾ ಒಪ್ಪಿ ಯಾಗಿದೆ. ನೀವು ಮುಂದುವರೆಯ ಬಹುದೆಂದು. ಇದೇ ೯ ಕ್ಕೆ ನಿಶ್ಚಿತಾರ್ಥ ಹಾಸನದ ನಮ್ಮ ಮನೆಯಲ್ಲಿ . ಮದುವೆ ನಮ್ಮ ಹಳ್ಳಿಯಲ್ಲಿ ಮೇ ೬ ಕ್ಕೆ. ಅದರ ವಿಶೇಶತೆಬಗ್ಗೆ ಬರೆಯ ಬೇಕೆಂಬುದೇ ಈ ಬರಹದ ಉದ್ದೇಶವಾಗಿತ್ತು. ಆದರೆ ಈಗ ಸಮಯದ ಅಭಾವವಿದೆ. ನಾಳೆ ಊರಿನ ಜನರ ಸಹಕಾರದೊಡನೆ ಹೇಗೆ ಮದುವೆ ಮಾಡುತ್ತೇವೆಂದು ಬರೆಯುವೆ. ನಿಜಕ್ಕೂ ಅದನ್ನು ನೀವು ಓದಲೇ ಬೇಕು.

ಊರ ಮದುವೆ ಭಾಗ-2

ನಿನ್ನೆ ನನ್ನ ಬರಹದಲ್ಲಿ ಇಂದಿನ ಕಾಲದಲ್ಲೂ ಶಿಖೆ ಬಿಟ್ಟು, ಪ್ಯಾಂಟ್ ಧರಿಸದ, ತಲೆಕೂದಲು ಕ್ರಾಪ್ ಮಾಡದ, ಅಪ್ಪಟ ಭಾರತೀಯ ಶೈಲಿಯಲ್ಲಿ ಬದುಕುತ್ತೇನೆಂದು ಹೇಳುವ ಹುಡುಗನನ್ನು ಒಬ್ಬ ಓದಿದ ಹುಡುಗಿ ಮದುವೆಯಗಲು ಒಪ್ಪಿರುವ ವಿಚಾರ ಪ್ರಸ್ಥಾಪಿಸಿರುವೆ. ಶಿಖೆ ಬಿಟ್ಟು ,ಕೇವಲ ಪಂಚೆ ಉಟ್ಟು ಶಲ್ಯ ಹೊದ್ದು ವೇದ ಕಲಿಯುವ ಸಹಸ್ರಾರು ವಿದ್ಯಾರ್ಥಿಗಳು ಈಗಲೂ ಇದ್ದಾರೆ. ಇಲ್ಲವೆಂದಲ್ಲ. ಆದರೆ ವಿದ್ಯಾಭ್ಯಾಸ ಮುಗಿದ ನಂತರ ಎಲ್ಲರಂತೆ ಪ್ಯಾಂಟ್ ರಿಸುವುದು ಮಾಮೂಲಾಗಿದೆ. ನಾವು ಧರಿಸುತ್ತಿರುವ ಪ್ಯಾಂಟ್-ಶರ್ಟ್ ಗಳು ಬ್ರಿಟಿಶರ ಕೊಡುಗೆ ಇದ್ದಿರಬಹುದು. ಆದರೆ ಈ ಉಡುಪಿಗೆ ಹಾಗೂ ಅರೆಬರೆ ಇಂಗ್ಳೀಶ್ ಭಾಷೆಗೆ ನಾವು ಎಷ್ಟು ಹೊಂದಿಕೊಂಡು ಬಿಟ್ಟಿದ್ದೀವೆಂದರೆ ನಾವು ಈಗ ಇರುವುದು ಸಹಜ ವೆನಿಸುತ್ತಿದೆ, ಅಪ್ಪಟ ಭಾರತೀಯ ಉಡುಪು ಅಸಹಜವೆನಿಸಿದೆ. ಏನು ಮಾಡೋಣ! ನೂರು ವರ್ಷಗಳಿಂದ ನಮ್ಮನ್ನು ನಮ್ಮ ಅಪ್ಪ-ಅಮ್ಮ ಹೀಗೆ ಬೆಳೆಸಿದರು. ಇರಲಿ, ಮುಂದಿನ ವಿಚಾರಕ್ಕೆ ಬರುವೆ. ನನ್ನ ತಮ್ಮನ ಮಗಳ ಮದುವೆ ವೈಶಿಷ್ಟ್ಯ ಬರೆಯುವುದೇ ಈ ಬರಹದ ಉದ್ದೇಶ.ಮದುವೆ ಯಾವ ಅದ್ಧೂರಿ ಇಲ್ಲದೆ ಹಳ್ಳಿಯ ಹೆಂಚಿನ ಮನೆಯಲ್ಲಿ ನಡೆಯುತ್ತೆ. ನಾಲ್ಕು ದಿನಗಳ ಮದುವೆ. ನಾಲ್ಕು ದಿನಗಳ ಕಾರ್ಯಕ್ರಮಗಳ ವಿವರ ಪಡೆದು ಮತ್ತೆ ಬರೆಯುವೆ. ಆದರೆ "ಊರ ಮದುವೆ" ಎಂಬ ತಲೆ ಬರಹ ಕೊಟ್ಟೆನಲ್ಲಾ, ಆ ಬಗ್ಗೆ ತಿಳಿಸಿ ಬಿಡುವೆ. ನಮ್ಮ ಹಳ್ಳಿಯಲ್ಲಿ ೧೩ ಬ್ರಾಹ್ಮಣರ ಮನೆಗಳಿವೆ .ಎಲ್ಲವೂ ನಾಡಹೆಂಚಿನ ಹಳ್ಳಿ ಮನೆಗಳು. ಸಾಮಾನ್ಯವಾಗಿ ಯಾರ ಮನೆಯಲ್ಲೂ ೧೦-೧೫ ಜನರಿಗಿಂತ ಹೆಚ್ಚು ಜನ ಮಲಗಲು ಅವಕಾಶವಿರದ ಚಿಕ್ಕ ಮನೆಗಳು. ಇಂತಾ ಹಳ್ಳಿಯಲ್ಲಿ ಮದುವೆ ಮಾಡುವುದು ಹೇಗೆ? ಇಂದಿನ ಕಾಲದಲ್ಲಿ ಕಡಿಮೆ ಎಂದರೂ ೨೦೦-೩೦೦ ಜನರಾದರೂ ಮದುವೆಗೆ ಬಂದೇ ಬರುತ್ತಾರೆ.ಮದುವೆ ದಾರೆಯನ್ನು ಒಂದು ಮನೆಯಲ್ಲಿ ಮಾಡಿದರೆ ಮದುವೆಗೆ ಬಂದ ಬಂಧುಗಳನ್ನು ಎಲ್ಲರ ಮನೆಯಲ್ಲಿ ಉಳಿಸಲಾಗುವುದು. ಆಯಾ ಮನೆಗಳಲ್ಲಿ ಅವರಿಗೆ ಸ್ನಾನದ ವ್ಯವಸ್ಥೆ ಆಯಾ ಮನೆಯವರೇ ಮಾಡುವರು. ಅವರ ಮನೆಯಲ್ಲಿಯೇ ಇದ್ದಂತ ವ್ಯವಸ್ಥೆಯಲ್ಲಿಯೇ ಮಲಗಲು ಅವಕಾಶ ಮಾಡುವರು. ಊಟ-ತಿಂಡಿಮಾತ್ರ ಒಂದು ಕಡೆ. ಅದಕ್ಕಾಗಿ ಒಂದು ಶಾಮಿಯಾನ ಹಾಕಲು ಉದ್ಧೇಶಿಸಲಾಗಿದೆ. ಆದ್ದರಿಂದ ಮದುವೆ ಎಂದರೆ ಕೇವಲ ನಮ್ಮ ಮನೆಯ ಕಾರ್ಯಕ್ರಮವಾಗಿ ಉಳಿಯುವುದಿಲ್ಲ. ಬದಲಿಗೆ ಅದು ಊರ ಜನರ ಕಾರ್ಯಕ್ರಮವಾಗುತ್ತೆ. ಮದುವೆಗೆ ಬಂದ ಜನರೆಲ್ಲಾ ಊರ ಮನೆಯ ಅತಿಥಿಗಳಾಗುತ್ತಾರೆ. ಬ್ರಾಹ್ಮಣರ ಮನೆಗಳಲ್ಲಿ ಎಲ್ಲರೂ ಸೇರಿ ಮದುವೆಯ ಕಾರ್ಯಕ್ರಮಗಳಲ್ಲಿ ತೊಡಗುತ್ತಾರೆಂದರೆ ಮದುವೆಗೆ ಬರುವವರೆಲ್ಲರೂ ಬ್ರಾಹ್ಮಣ ಜಾತಿಗೆ ಸೇರಿರಲೇ ಬೇಕೆಂದಲ್ಲ. ಎಲ್ಲಾ ಜಾತಿಯ ಮಿತ್ರರೂ ಬಂದು ಪಾಲ್ಗೊಳ್ಳುತ್ತಾರೆ. ಎಲ್ಲರಿಗೂ ಊರಜನರ ಆತಿಥ್ಯ ವಿರುತ್ತದೆ.[ವ್ಯವಸ್ಥೆಮಾಡುವ ವಿಷಯದಲ್ಲಿ ಬ್ರಾಹ್ಮಣರ ಮನೆ ಎನ್ನುವಾಗ ನನಗೆ ಸಂಕೋಚವಿದೆ. ಆದರೆ ಮದುವೆಗೆ ಬಂದ ನೆಂಟರಿಷ್ಟರನ್ನು ಉಳಿದೆಲ್ಲಾ ಜಾತಿಯವರ ಮನೆಯಲ್ಲಿ ಉಳಿಸುವುದು ಬಂದವರಿಗೆ ಹಿತವಾಗುವುದಿಲ್ಲ.ಅಲ್ಲದೆ ವೈದಿಕರುಗಳ ಸಂಖೆಯೇ ಹೆಚ್ಚು ಇರಬಹುದಾದ ಈ ಮದುವೆಯಲ್ಲಿ ಬಂದವರಿಗೆ ಅನುಸರಿಸಿ ವ್ಯವಸ್ಥೆ ಮಾಡಬೇಕಲ್ಲಾ, ಎಲ್ಲರ ಮನೆಯಲ್ಲಿ ಇದು ಸಾಧ್ಯವಿಲ್ಲ. ಹಾಗಾಗಿ ಜಾತಿ ಪದ ಬಳಕೆಯಾಯ್ತು. ಅದಕ್ಕಾಗಿ ನನಗೆ ವಿಷಾಧವಿದೆ] ನೆನಪು: ನನ್ನ ಮದುವೆಯೂ ಹೀಗೆಯೇ ಆಯ್ತು ಮೂವತ್ತು ವರ್ಷಗಳ ಹಿಂದೆ. ಮದುವೆಯ ಫೋಟೋ ವನ್ನು ಸಂಪದದಲ್ಲಿ ಪೇರಿಸೋಣ ವೆಂದರೆ ಆಗ ಫೋಟೋ ವನ್ನೇ ತೆಗೆಸುವ ಗೋಜಿಗೇ ಹೋಗಲಿಲ್ಲ. ನಮ್ಮ ಮನೆಯಲ್ಲಿ ಮದುವೆಯನೆನಪಿನ ಫೋಟೋ ಇಲ್ಲ.ಬದಲಿಗೆ ಸಾಕ್ಷಿಗೆ ನಾವೇ ಇದ್ದೇವೆ. ನಮ್ಮೂರಿನ ಮಾಧಕೃಷ್ಣ ದೇವಾಲಯದಲ್ಲಿ ನನ್ನ ಮದುವೆ ಯಾಯ್ತು. ದಾರೆ ಮಂಟಪದಲ್ಲಿ ೨೦-೩೦ ಜನರಿಗೆ ಮಾತ್ರ ಸ್ಥಳಾವಕಾಶವಿತ್ತು. ಉಳಿದವರೆಲ್ಲಾ ಯಾರ ಮನೆಯಲ್ಲಿ ಮಲಗಿದರೋ, ಯಾರಮನೆಯಲ್ಲಿ ಸ್ನಾನ ಮಾಡಿದರೋ ನನಗೆ ಗೊತ್ತಾಗಲೇ ಇಲ್ಲ. ಅಂತೂ ಎಲ್ಲರೂ ಸಂತೋಷವಾಗೇ ತೆರಳಿದ್ದು ನೆನಪಿದೆ. ಈ ಮದುವೆಯಲ್ಲಿ ನಮ್ಮ ಮನೆಯ ಮುಂದೆ ಒಂದು ಶಾಮಿಯಾನ ಹಾಕಿ ಬಂದವರಿಗೆಲ್ಲಾ ಆಸನ ವ್ಯವಸ್ಥೆಮಾಡಿ ಮದುವೆಯ ವಿಧಿ-ವಿಧಾನಗಳನ್ನು ವೀಡಿಯೋ ತೆಗೆಯ ಬೇಕೆಂಬ ಉದ್ಧೇಶವಿದೆ.ಕಾರಣ ನಮ್ಮ ಇಂದಿನ ಆಧುನಿಕ ಸಮಾರಂಭಗಳಿಗೆ ಭಿನ್ನವಾಗಿ ಶಾಸ್ತ್ರೋಕ್ತವಾಗಿ , ವೇದೋಕ್ತವಾಗಿ ಮದುವೆ ನಡೆಯುವುದೆಂಬ ವಿಶ್ವಾಸ ನನಗಿದೆ. ಸಂಪದಿಗರೇ, ಇಂತಹ ಒಂದು ವಿಭಿನ್ನ ಮದುವೆಗೆ ನೀವೂ ಬನ್ನಿ. ಹಳ್ಳಿಯ ಆತಿಥ್ಯ ಪಡೆದು ವಧು-ವರರನ್ನು ಹಾರೈಸ ಬನ್ನಿ. ವಧು: ಹೇಮಾ ವರ: ಲಕ್ಶ್ಮೀಶ ಮದುವೆ ದಿನಾಂಕ: ಮೇ ೬ ಸ್ಥಳ: ವಧುವಿನ ಗೃಹ, ಹರಿಹರಪುರ, ಹೊಳೇ ನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ. ಬರಲು ಮಾರ್ಗ: ಹಾಸನಕ್ಕೆ ೩೦ ಕಿಲೋ ಮೀಟರ್ ದೂರ. ಬೆಂಗಳೂರಿನಿಂದ: ಚನ್ನರಾಯಪಟ್ನ ಮಾರ್ಗ, ಗೊರೂರಿಗೆ ಹರಿಹರಪುರದ ಮೂಲಕ ಹೋಗುವ ಬಸ್ ಮಾರ್ಗ[ಡಬಲ್ ರೋಡ್]

ಇಂದಿನ ಶಿಕ್ಷಣದ ಬಗ್ಗೆ ಏನಂತೀರಾ?

ಕೆಲವು ವರ್ಷಗಳ ಹಿಂದೆ ಹಾಸನದ ವೈದ್ಯ ದಂಪತಿಗಳ ಮಗ ಪಿಯುಸಿ ಓದುತ್ತಿದ್ದವನು ಆತ್ಮಹತ್ಯೆ ಮಾಡಿಕೊಂಡ.ಮತ್ತೊಬ್ಬ ವಿದ್ಯಾರ್ಥಿನಿ ನೇಣಿಗೆ ಶರಣಾದಳು. ಹೀಗೆ ಪ್ರತೀ ವರ್ಷ ಅಲ್ಲೊಂದು ಇಲ್ಲೊಂದು ವಿದ್ಯಾರ್ಥಿ ಅತ್ಮಹತ್ಯೆ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ. ಪೇಪರ್ ನಲ್ಲಿ ಇಂತಾ ಸುದ್ಧಿ ಓದಿ ಓದಿ ಅಭ್ಯಾಸ ವಾಗಿಬಿಟ್ಟು ಹೆಡ್ ಲೈನ್ ಓದಿ ಸುಮ್ಮನಾಗುವ ಹಂತಕ್ಕೆ ಜನರು ತಲುಪಿದ್ದಾರೆ.ಆದರೆ ಒಂದು ಸಂಗತಿ ನಮಗೆ ಅನ್ನಿಸುವುದೇ ಇಲ್ಲ, ಇಂತಾ ಘಟನೆ ನಾಳೆ ನಮ್ಮ ಮನೆಯಲ್ಲೂ ಆಗಬಹುದು! ಯಾಕೆ ಹೀಗಾಗುತ್ತಿದೆ? ತಪ್ಪು ಯಾರದು? ಮಕ್ಕಳದ್ದೋ? ಪಾಟ ಮಾಡುವ ಟೀಚರ್ಗಳದ್ದೋ? ಅಪ್ಪ-ಅಮ್ಮ ನದ್ದೋ?

ನಮ್ಮ ಮಕ್ಕಳಿಗೆ ಆತ್ಮ ಸ್ಥೈರ್ಯದ ಕೊರತೆ ಯಿಂದಲ್ಲವೇ ಇಂತೆಲ್ಲಾ ಘಟನೆಗಳು ಮರುಕಳಿಸುತ್ತಿರುವುದು?

ಸರಿ, ಹಾಗಾದರೆ ಇದಕ್ಕೆ ನಾವೊಂದು ಪರಿಹರ ಕಂಡುಕೊಳ್ಳಬೇಡವೇ?

ನಮ್ಮ ಬಂಧುಗಳ ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದ. ೯೫% ಮೇಲೆ ಅಂಕ ತೆಗೆಯುವ ಆತ್ಮವಿಶ್ವಾಸ ಅವನಿಗಿದೆ. ವರ್ಷವೆಲ್ಲಾ ಮಕ್ಕಳು ಶಾಲೆಗೆ ಹೋಗುತ್ತಾ ಯಾಂತ್ರಿಕವಾಗಿ ದಿನಕಳೆದಿರುತ್ತಾರೆ, ಅವರಿಗೆ ಏನಾದರೂ ಸ್ವಲ್ಪ ಬೇಸರ ಕಳೆಯಲು ಒಂದು ಪ್ರವಾಸ ಯೋಜಿಸೋಣವೆಂದು ನಮ್ಮ ಮನೆಯಲ್ಲಿ ಚಿಂತನೆ ನಡೆಸಿದೆವು. ನಾವು ಅಪ್ಪ-ಅಮ್ಮ ಪ್ರವಾಸ ಏರ್ಪಡಿಸಲು ತಯಾರಿದ್ದರೂ ಮಕ್ಕಳು ಬರಲು ತಯರಿಲ್ಲ. ಕಾರಣ ಅವರಿಗಾಗಲೇ ಮುಂದಿನ ತರಗತಿಯ ಟ್ಯೂಶನ್ ಪ್ರಾರಂಭವಾಗಿಬಿಟ್ಟಿದೆ. ಆ ಟ್ಯೂಶನ್ ಮಾಡುವವರಿಗೆ ಡಿಮ್ಯಾಂಡ್ ಹೇಗೆಂದರೆ ಈ ವರ್ಷ ಪರೀಕ್ಷೆ ಬರೆಯುವ ಮುಂಚಿತವಾಗಿಯೇ ಮುಂದಿನ ತರಗತಿಯ ಟ್ಯೂಶನ್ ಗೆ ಮುಂಗಡ ಪಾವತಿಸಿ ಬುಕ್ ಮಾಡಬೇಕು. ಈ ವರ್ಷದ ಪರೀಕ್ಷೆ ಬರೆದ ನಂತರ ಮುಂದಿನ ವರ್ಷದ ಬಗ್ಗೆ ಚಿಂತಿಸೋಣ ಎನ್ನುವಂತಿಲ್ಲ. ಈ ವರ್ಷದ ಪರೀಕ್ಷೆ ಮುಗಿಯುವ ಸಮಯಕ್ಕೆ ಕೆಲವರು ಟ್ಯೂಶನ್ ಮಾಡುವವರ ಹತ್ತಿರ ಅಡ್ಮಿಶನ್ ಸಿಗುವುದೇ ಇಲ್ಲ. ಖಾಲಿ ಇಲ್ಲ, ನಮ್ಮ ಕೆಪ್ಯಾಸಿಟಿ ಮೀರಿ ಹತ್ತು ಜನರಿಗೆ ದಾಕ್ಷಿಣ್ಯಕ್ಕೆ ಸೇರಿಸಿಕೊಂಡಿದ್ದೇವೆಂಬ ಉತ್ತರ ಸಿಗುತ್ತೆ. ಪಾಪ! ಇವರಿಗೆ ದಾಕ್ಷಿಣ್ಯಕ್ಕೆ ಹತ್ತು ಜನರಿಂದ ಐವತ್ತು ಸಾವಿರ ವಸೂಲಿ ಯಾಗಿರುತ್ತೆ. ಸಂಖ್ಯೆ ಹೆಚ್ಚಾಗಿ ಕುರಿಯಂತೆ ಕುಳಿತುಕೊಳ್ಳುವವರು ಇದೇ ಐದು ಸಾವಿರ ಶುಲ್ಕ ತೆತ್ತಿರುವ ವಿದ್ಯಾರ್ಥಿಗಳು!!

ಯಾಕೆ ಹೀಗೆ?.......

ಮಕ್ಕಳು ಅದೆಷ್ಟು ಸ್ಟ್ರೆಸ್ ಸಹಿಸಬೇಕು! ಈ ವರ್ಷದ ಪರೀಕ್ಷೆ ಮುಗಿದ ಮಾರನೆಯ ದಿನವೇ ಮುಂದಿನ ವರ್ಷದ ತರಗತಿಯ ಟ್ಯೂಶನ್ ಶುರುವಾಗಿರುತ್ತೆ. ಒಬ್ಬ ವಿದ್ಯಾರ್ಥಿ ಹೇಳುತ್ತಾನೆ. ನಮಗೆ ಕಲೇಜಲ್ಲಿ ತರಗತಿ ಪ್ರಾರಂಭವಗುವ ಹೊತ್ತಿಗೆ ಟ್ಯೂಶನ್ ನಲ್ಲಿ ಮುಕ್ಕಾಲು ಭಾಗ ಪಾಠ ಮುಗಿದೇ ಹೋಗಿರುತ್ತೆ. ಅವನಿಗೇನೋ ಆಗ ಇದು ಚಂದವಾಗಿ ಕಾಣುತ್ತೆ. ಮೇಸ್ಟ್ರು ಕೇಳಿದ ಪ್ರಶ್ಣೆಗಳಿಗೆಲ್ಲಾ ತಟ್ಟನೆ ಉತ್ತರ ಕೊಟ್ಟುಬಿಡುತ್ತಾನೆ. ಆದರೆ ಮುಂದೆ ಪರೀಕ್ಷೆಯಲ್ಲಿ ೯೫% ತೆಗೆಯುವ ಬದಲಿಗೆ ಒಂದುವೇಳೆ ೯೨% ಅಂಕ ಗಳಿಸಿದರೆ ಆತ್ಮಹತ್ಯೆಗೆ ತಾನು ಶರಣಾಗೆತ್ತೇನೆಂದು ಅವನಿಗೆ ಆಗ ಗೊತ್ತಾಗಿರುವುದೇ ಇಲ್ಲ.ಆದರೆ ತರಗತಿಯಲ್ಲಿ ಹಿಂದಿದ್ದ ವಿದ್ಯಾರ್ಥಿ ನಿಧಾನವಾಗಿಚೇತರಿಸಿಕೊಳ್ಳುತ್ತಾ ಆ ವರ್ಷದ ಪರೀಕ್ಷೆಯಲ್ಲಿ ೪೦% ಅಂಕ ಗಳಿಸಿ ತೇರ್ಗಡೆಯಾದರೂ ಮುಂದೆ ಅವನ ಶ್ರಮ ಹಾಗೂ ಧೈರ್ಯದಿಂದ ಜೀವನದಲ್ಲಿ ಯಶಸ್ಸು ಸಾಧಿಸಿರುವ ಉಧಾಹರಣೆಗಳು ಸಾಕಷ್ಟಿವೆ.

ಈ ವಿಚಾರವನ್ನು ಉಲ್ಲೇಖಮಾಡಲು ಕಾರಣವಿದೆ. ನಮ್ಮ ಮಕ್ಕಳನ್ನು ಈ ಟ್ಯೂಶನ್ ದಾಂಧಲೆಯಿಂದ ಮಾನಸಿಕವಾಗಿ ಕೊಲ್ಲುತ್ತಿಲ್ಲವೇ?

ಇನ್ನೊಂದು ವಿಚಾರವನ್ನು ನಾವು ಪೋಷಕರಾದವರು ಗಮನಿಸುತ್ತೇವೆಯೇ? ನಮ್ಮ ಮಕ್ಕಳು ಸರ್ಕಾರೀಶಾಲೆಯಲ್ಲಿ ಓದಲೀ, ಖಾಸಗೀ ಶಾಲೆಯಲ್ಲಿ ಓದಲೀ, ಟ್ಯೂಶನ್ ಗಾಗಿ ಬೇರೆಯ ಮೇಶ್ಟ್ರನ್ನೇ ಹುಡುಕುತ್ತೇವೆ? ಅಂದರೆ ನಮ್ಮ ಶಾಲೆಯಲ್ಲಿರುವ ಟೀಚರುಗಳಿಗಿಂತ ಟ್ಯೂಶನ್ ಮಾಡುವ ಟೀಚರ್ ಚೆನ್ನಾಗಿ ಅರ್ಥವಾಗುವಂತೆ ವಿದ್ಯಾರ್ಥಿ ತಲೆಗೆ ತುಂಬುತ್ತಾರೆ. ಅದೇ ಕೆಲಸವನ್ನು ನಮ್ಮಶಾಲೆಯ ಟೀಚರುಗಳೇಕೆ ಮಾಡಲಾರರು?

ಖಾಸಗೀ ಕಂಪನಿಗಳಲ್ಲಿರುವಂತೆ ಶಾಲೆಯ ಟೀಚರುಗಳ " ಕಾರ್ಯ ದಕ್ಷತೆ" ಪರೀಕ್ಷೆ ಯಾಗಬೇಡವೇ? ಅದಕ್ಷ ಟೀಚರುಗಳನ್ನು ಖಾಸಗೀಶಾಲಾ ಆದಳಿತವಾಗಲೀ, ಸರ್ಕಾರವಾಗಲೀ ಕಿತ್ತೊಗೆದು ಟ್ಯೂಶನ್ ಮಾಡುತ್ತಿರುವ ಟೀಚರುಗಳನ್ನೇ ಏಕೆ ನೇಮಿಸಿಕೊಳ್ಳ ಬಾರದು?

ಸರ್ಕಾರವೂ ಈ ಬಗ್ಗೆ ಒಂದು ಆಂಧೋಳನ ಪ್ರಾರಂಭಿಸಬೇಕು, ಪೋಷಕರೂ ಈ ಬಗ್ಗೆ ಜಾಗೃತ ರಾಗಬೇಕು.ಇಲ್ಲವಾದಲ್ಲಿ ನಮ್ಮ ಮಕ್ಕಳುಆಟವಾಡುವಕಾಲದಲ್ಲಿ ಟ್ಯೂಶನ್ ದಾಂಧಲೆಗೆ ಬಲಿಯಾಗಿ ಮತ್ತೆ ಬಾರದ ಬಾಲ್ಯವನ್ನೇ ಕಳೆದುಕೊಂಡುಅಸಂತುಷ್ಟ ರಾಗಿ ಯಂತ್ರಗಳಂತೆ ಬದುಕು ಸಾಗಿಸುವುದರಲ್ಲಿ ಸಂಶಯವಿಲ್ಲ.

ಇದು ನನ್ನ ಅನಿಸಿಕೆ, ಅನುಭವ. ಮನಸ್ಸಿನಲ್ಲಿರುವುದನ್ನು ಕಕ್ಕಲು ಕಾರಣವಿದೆ.ನನ್ನಿಬ್ಬರು ಮಕ್ಕಳು ಬಿ.ಇ. ಓದಿ ಒಬ್ಬ ನೌಕರಿ ಮಾಡುತ್ತಾ ಮತ್ತೊಬ್ಬ ಹೆಚ್ಚಿನ ವಿದ್ಯೆ ಮುಂದುವರೆಸಿದ್ದಾನಾದರೂ ನನಗೂ ಸಹ ಮಕ್ಕಳು ಮಕ್ಕಳಾಗಿದ್ದುದು ಮರೆತೇ ಹೋಗಿದೆ.ನಮ್ಮಗಳ ಸಹನೆ ,ಪ್ರೀತಿ ಪ್ರೋತ್ಸಾಹದಿಂದ ನಮ್ಮ ಮಕ್ಕಳೊಡನೆ ಒಂದಿಷ್ಟು ಸಂತೋಷವಾಗಿರಲು ಸಾಧ್ಯವಾಗಿದೆಯೇ ಹೊರತು ಮಕ್ಕಳ ಮೇಲೆರಗಿರುವ ಕ್ರೂರಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿ ಮಕ್ಕಳನ್ನು ಬೆಳೆಸಲಾಗಲಿಲ್ಲವಲ್ಲಾ! ಎಂಬ ವ್ಯಥೆ ಇದೆ.

ಸಂಪದಿಗರೇ, ನೀವೇನೆನ್ನುತ್ತೀರಿ? ನಿಮ್ಮ ಮಕ್ಕಳು ಆಟ-ಪಾಠ, ತುಂಟಾಟ, ಚೇಷ್ಟೆಗಳಿಂದ ತಮ್ಮ ಸಹಜ ಬಾಲ್ಯವನ್ನು ಅನುಭವಿಸುತ್ತಿದ್ದಾರೋ? ಅಥವಾ ಆಗಲೇ ತಮ್ಮ ಹನ್ನೆರಡನೇ ವಯಸ್ಸಿಗೇ ದೊಡ್ದವರಾಗಿಬಿಟ್ಟಿದ್ದಾರೋ?

ಊರಮದುವೆ ಭಾಗ-1












ಮೇಲಿನ ಶೀರ್ಷಿಕೆಯಡಿಯಲ್ಲಿ ಎರಡು ಲೇಖನಗಳು ಈಗಾಗಲೇ ಪ್ರಕಟವಾಗಿವೆ. ಕಳೆದ ಮೇ ೬ ರಂದು ಈ ಮದುವೆ ಯಶಸ್ವಿಯಾಗಿ ನಡೆದಿದೆ.ಮದುವೆಯ ಕೆಲವು ವಿಶೇಷಗಳು ಸಂಪದಿಗರಿಗಾಗಿ.

* ಊರಜನರೇ ನಿಮಿಸಿದ ಪೆಂಡಾಲಲ್ಲಿ ಮದುವೆ

* ಕೆಲವು ತರುಣರು ಬಾಳೆಕಂದು ಮಾವಿನ ಸೊಪ್ಪು ಗಳಿಂದ ನಿರ್ಮಿಸಿದ್ದ ಮದುವೆ ಮಂಟಪ ಜನರ ಮನ ಸೆಳೆದಿತ್ತು

*ಹೊಳೆನರಸೀಪುರದ ಅಧ್ಯಾತ್ಮಪ್ರಕಾಶ ಕಾರ್ಯಾಲದಿಂದ ಬಂದಿದ್ದ ವಿದ್ಯಾರ್ಥಿಗಳಿಂದ ವೇದ ಪಠಣ ಜನರ ಮನ ಸೆಳೆದಿತ್ತು

* ಮದುವೆಯ ಹಿಂದಿನದಿನ ಸಂಜೆ ೫ ಗಂಟೆಗೆ ಮದುವೆಯ ಮಂಟಪದಲ್ಲೇ ತುಮಕೂರಿನ ರಾಮಕೃಷ್ಣ-ವಿವೇಕಾನಂದಾಶ್ರಮದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಂದ ನಡೆದ " ಸಾರ್ಥಕ ಬದುಕು" ಉಪನ್ಯಾಸ ಅವಿಸ್ಮರಣೀಯ.

* ಮೇ ೫ ರ ರಾತ್ರಿ ೮.೦೦ ಗಂಟೆ ಸುಮಾರಿಗೆ ಹರಿಹರಪುರ ತಲುಪಿದ ವರನಕಡೆಯವರಿಗೆ ಊರಿನ ಜನರಿಂದ ಸಡಗರದ ಸ್ವಾಗತ.ಮಂಗಳವಾದ್ಯ ಸಮೇತ ಆಕರ್ಶಣೀಯ ಮೆರವಣಿಗೆ.

* ಪೆಂಡಾಲಿನಲ್ಲಿ ನೆಲದ ಮೇಲೆ ಕುಳಿತು ಊಟಮಾಡುವಂತೆ ಸಮತಟ್ಟಾಗಿರದ ಕಾರಣ ಟೇಬಲ್ ವ್ಯವಸ್ಥೆ ಇತ್ತು. ಆದರೆ ಸಂಪ್ರದಾಯಸ್ಥರು ನೆಲದ ಮೇಲೆ ಊಟ ಮಾಡ ಬಯಸಿದಾಗ ಅಕ್ಕ ಪಕ್ಕದ ಮನೆಗಳಲ್ಲಿ ಊಟ ಬಡಿಸುವಾಗ ಊರ ತರುಣರು ಪಟ್ಟ ಕಷ್ಟ ಹೇಳತೀರದು.ಚಪ್ಪಲಿ ಹಾಕಿಕೊಂಡು ಊಟ ಬಡಿಸುವಂತಿಲ್ಲ. ಚಪ್ಪಲಿ ಇಲ್ಲದೆ ಓಡಾಡಲು ಯೋಗ್ಯವಲ್ಲದ ರಸ್ತೆ. ಆದರೂ ಹಸನ್ಮುಖಿಗಳಾಗಿದ್ದುಕೊಂಡು ಅವರು ಮಾಡಿದ ಸೇವೆಗೆ ಬೆಲೆ ಕಟ್ಟಲಾಗದು.

* ವಿವಾಹ ವಿಧಿಗಳು ಮುಗಿದ ಮೇಲೆ ಶ್ರೀ ಚಂದ್ರಮೌಳಿ ಅವಧಾನಿಗಳಿಂದ ವಿವಾಹ ಸಂಸ್ಕಾರದ ಬಗ್ಗೆ ಒಂದು ಉಪನ್ಯಾಸ.

* ಚಿತ್ರಪುಟದಲ್ಲಿ ಇನ್ನೂ ಕೆಲವು ಚಿತ್ರಗಳಿವೆ.

ಅಂದಿನ ನೆನಪು

೧೯೭೭ ನೇ ವರ್ಷ ಇರಬಹುದು.ಅಣ್ಣ ಕೆಲಸಕ್ಕಾಗಿ ಅಪ್ಲೆ ಅಪ್ಲೆ ನೋ ರಿಪ್ಲೆ ಎಂಬಂತೆ ನಿತ್ಯವೂ ಒಂದಿಲ್ಲೊಂದು ಕೆಲಸಕ್ಕಾಗಿ ಅರ್ಜಿ ಹಾಕುತ್ತಲೇ ಇದ್ದ. ದೂರವಾಣಿ ಕಾರ್ಖಾನೆಯಲ್ಲಿ ನನ್ನ ತರಬೇತಿ ಮುಗಿದು ಹೊರಗಟ್ಟಿ ಯಾಗಿತ್ತು.ನನಗೂ ಕೆಲಸ ಇಲ್ಲ. ಅಣ್ಣನಿಗೂ ಇಲ್ಲ.ಮನೆಯಲ್ಲಾದರೋ ಕಿತ್ತು ತಿನ್ನುವ ಬಡತನ. ಇಂತಹಾ ಸಂದರ್ಭದಲ್ಲಿ ಅಣ್ಣನಿಗೆ ರೇಶ್ಮೆ ಇಲಾಖೆಯಲ್ಲಿ ಇಂಟರ್ ವ್ಯೂ ಬಂತು. ಬೆಂಗಳೂರಿನಲ್ಲಿ ವಿಧಾನ ಸೌಧದ ಹತ್ತಿರವಿರುವ ಬಹುಮಹಡಿ ಕಟ್ಟಡದಲ್ಲಿ ಇಂಟರ್ ವ್ಯೂ ನಡೆದಿತ್ತು. ಅಣ್ಣ ಪೆಚ್ಚು ಮೋರೆ ಹಾಕಿಹೊಂಡು ಇಂಟರ್ವ್ಯೂ ಹಾಲಿನಿಂದ ಹೊರಬಂದ. ಮುಖವೇ ಪಲಿತಾಂಷ ಹೇಳುತ್ತಿತ್ತು. ಅವತ್ತಿನ ಸ್ಥಿತಿ ಹೇಗಿತ್ತೆಂದರೆ ಕೆಲಸ ವಿಲ್ಲದೆ ಮನೆಗೆ ಹಿಂದಿರುಗುವಂತಿಲ್ಲ. ಮನೆಯ ಕಷ್ಟ ಕಣ್ಮುಂದೆ ಬಂದು ತಲೆ ತಿರುಗಿದಂತಾಯ್ತು. ತಂಗಿ ಮತ್ತು ತಮ್ಮ ಹೈಸ್ಕೂಲಿನಲ್ಲಿ ಓದುತ್ತಿದ್ದಾರೆ. ಮೊದಲೇ ಬಡತನ. ಅದರ ಜೊತೆಗೆ ಮನೆತುಂಬಾ ಜನ. ನಮ್ಮ ಅಪ್ಪ-ಅಮ್ಮ, ತಮ್ಮ ತಂಗಿ, ಇಬ್ಬರೂ ಅಕ್ಕಂದಿರಿಗೂ ಮದುವೆಯಾಗಿತ್ತು ಅಂತಾ ಕಾಣುತ್ತೆ. ಜೊತೆಗೆ ತಂದೆಯವರ ತಾಯಿ[ನಮ್ಮಜ್ಜಿ] ನಮ್ಮ ಸೋದರತ್ತೆ [ನಮ್ಮ ತಂದೆಯವರ ಅಕ್ಕ, ಅವರು ನಮ್ಮ ಮನೆಯಲ್ಲೇ ಇದ್ದರು] ನಮ್ಮ ದೊಡ್ದಮ್ಮ[ನಮ್ಮ ತಂದೆಯವರ ಅಣ್ಣನ ಪತ್ನಿ ,ಚಿಕ್ಕ ವಯಸ್ಸಲ್ಲೇ ಪತಿಯನ್ನುಕಳೆದುಕೊಂಡು ನಮ್ಮ ಮನೆಯಲ್ಲೇ ಇದ್ದರು] ಅಷ್ಟೇ ಅಲ್ಲ. ಅಮ್ಮ ತಾಯಿಯ ತಾಯಿ[ ಅಜ್ಜಿ].ಜೊತೆಗೆ ತೌರುಮನೆ ಎಂದು ಬರುವ ನಮ್ಮ ಸೋದರತ್ತೆಯರು ಮತ್ತು ಅವರ ಮಕ್ಕಳು. ನಮ್ಮ ಅಪ್ಪ-ಅಮ್ಮ ಅಂತೂ ದಿನಗಳನ್ನು ದೂಡಲಾರದೆ ಕಂಗಾಲಾಗಿದ್ದರು.ಎಷ್ಟೋ ದಿನ ನಮ್ಮ ಅಮ್ಮ ನಮಗೆ ಕಾಣದಂತೆ ಹಾಕುತ್ತಿದ್ದ ಕಣ್ಣೀರು ಅವರ ಕಣ್ ತಪ್ಪಿಸಿ ನನ್ನ ಕಣ್ಣಿಗೆ ಬೀಳುತ್ತಿತ್ತು. ಎಲ್ಲಾ ದೃಷ್ಯಗಳೂ ಕಣ್ಮುಂದೆ ಬಂದವು. ಕೆಲಸ ವಿಲ್ಲದೆ ಮನೆಗೆ ಹೋಗುವುದಾದರೂ ಹೇಗೆ? ....

ಬಹುಮಹಡಿಯ ದೊಡ್ದ ದೊಡ್ದ ಕಿಟಕಿಗಳು ಕಂಡವು. ಹತ್ತಿರ ಹೋದೆ. ಇದೇ ಸರಿಯಾದ ತೀರ್ಮಾನ. ಇದರಿಂದ ಕೆಳಗೆ ಬಿದ್ದರೆ ಪ್ರಾಣ ಹೋಗುವುದಂತೂ ಗ್ಯಾರಂಟಿ!

ಆದರೆ...ಆದರೆ...

ಜನರ ಓಡಾಟ ತಪ್ಪೇ ಇಲ್ಲ. ನನ್ನ ಅಕ್ಕ ಪಕ್ಕದಲ್ಲಿ ಜನ....ಜನ...ಜನ...ಜನ...

ತಲೆತಿರುಗಿದಂತಾಯ್ತು. ಪಕ್ಕದಲ್ಲಿ ಯಾರೋ ನನ್ನನು ಹಿಡಿದು ಮಲಗಿಸಿದ್ದರು. ನನ್ನ ಅಣ್ಣ ಅಲ್ಲೇ ಯಾರನ್ನೋ ಕಂಡು ಏನಾದರೂ ಪ್ರಯತ್ನ ಮಾಡೋಣ ಅಂತಾ ಹೋಗಿದ್ದವನು ವಾಪಸ್ ಬರುವ ಹೊತ್ತಿಗೆ ನನಗೆ ಎಚ್ಛರ ಬಂದಿತ್ತು. ಇದೆಲ್ಲಾ ಒಂದರ್ಧ ಗಂಟೆಯಲ್ಲಿ ನಡೆದುಹೋಗಿತ್ತು. ನಮ್ಮ ಬಂದಾಗ ಯಾಕೋ ತಲೆ ತಿರುಗಿದಂತಾಯ್ತು ಅಂತಾ ಸಬೂಬು ಹೇಳಿಬಿಟ್ಟೆ. ಅಂತೂ ಅನಾಹುತ ಒಂದು ತಪ್ಪಿತ್ತು.

ಸತ್ತಂತೆ ನಟಿಸ ಬೇಕು

ನಾನೊಮ್ಮೆ ಯೋಚಿಸಿದ್ದುಂಟು ನಾನು ಸತ್ತಂತೆ ನಟಿಸ ಬೇಕು|
ಹಾರ ತುರಾಯಿಗಳ ಭಾರದಿಂದ ಬಳಲಿ ಹೋಗ ಬೇಕು|
ನನ್ನ ಬಂಧುಬಳಗ,ಸ್ನೇಹಿತರು,ಹಿತಚಿಂತಕರು,
ಸಾಹಿತ್ಯ ಕ್ಷೇತ್ರದ ಮಿತ್ರರು ಜಾತ್ರೆ ಯೋಪಾದಿಯಲಿ
ಸೇರುವುದ ಕಿರಿಗಣ್ಣಿನಿಂದಲೇ ನೋಡಬೇಕು|
ಅಣ್ಣ ತಮ್ಮ, ಅಕ್ಕ ತಂಗಿಯರು ಪತ್ನಿ ಪುತ್ರರು-ಮಿತ್ರರು
ಬಿಕ್ಕಿ ಬಿಕ್ಕಿ ಅಳುವಾಗ ಎದ್ದು ಚಕಿತಗೊಳಿಸಬೇಕು!!

-೨-
ಅದೊಂದುದಿನ ಸಾಹಿತ್ಯವೇದಿಕೆಯಲಿ ಕುಸಿದಾಗ
ನರ್ಸಿಂಗ್ ಹೋಮ್ ಸೇರಿಸಿ ಮನೆಗೆ ಸುದ್ಧಿ ಮುಟ್ಟಿಸಿ
ಕೈ ತೊಳೆದುಕೊಂಡ ಸನ್ಮಿತ್ರರು ಮತ್ತೆ ಅತ್ತ ಸುಳಿಯಲಿಲ್ಲ|
ಅಕ್ಕ ತಂಗಿಯರು ಅಣ್ಣ ತಮ್ಮಂದಿರು ಕರೆಯ ಸ್ವೀಕರಿಸಲಿಲ್ಲ|
ಉದ್ದುದ್ದ ಬರೆಯುತ್ತಿದ್ದ ಪತ್ರಿಕೆಗಳಿಗೆ ಸುದ್ಧಿಯಾಗಲಿಲ್ಲ|
ಬಂದವರು ಬೆರಳೆಣಿಕೆ ಜನ!
ಆರು ತಿಂಗಳಾಗಿದೆ, ಅಂಗಡಿ ಸಾಲ ತೀರಿಸಲಿಲ್ಲವಲ್ಲಾ!
ಹಾಲಿನವರ ಬಾಕಿ ಕೊಡಲಿಲ್ಲ ವಲ್ಲಾ!!
ಕೆಲಸದಾಕೆಯು ಬರುವುದನ್ನು ನಿಲ್ಲಿಸಿದರೂ ಹಿಂದಿನ ಬಾಕಿ ಕೊಟ್ಟಿರಲಿಲ್ಲ ವಲ್ಲಾ!!
ಬಂದಿದ್ದರು ವಸೂಲಿಗಾಗಿ,
ಆಫೀಸಿನಿಂದ ಬಂದಿದ್ದ ಪರಿಹಾರ ಮೊತ್ತದ ಹಂಚಿಕೆಗಾಗಿ!!

ನಿರಾಶೆ ಹರಿಯಿತು

ಮತದಾನದ ಮುಂಚೆ ಅದೆಂತಹಾ ಆತಂಕ! ಇನ್ನು ಈ ದೇಶಕ್ಕೆ ಭವಿಷ್ಯ ವಿಲ್ಲ ಯಾವ ಪಕ್ಷಕ್ಕೂ ಗದ್ದುಗೆ ಸುಲಭವಲ್ಲ! ಎನ್ಡಿಏ,ಯುಪಿಏ,ಮೂರನೇಕೂಟ, ನಾಲ್ಕನೇ ಕೂಟ!! ಈ ಭಾರೀ ನಮ್ಮ ದೇಶವನ್ನು ಆ ದೇವರೇ ಕಾಪಾಡಬೇಕು!! ಎಲ್ಲಾ ಚಿಂದಿ ಚಿಂದಿ!! ನಿಜವಾಗಿ ಚಿಂತಕರು ಆತಂಕ ಗೊಂಡಿದ್ದರು. ಆದರೆ ಹಾಗಾಗಲೇ ಇಲ್ಲ. ಜನರು ಸ್ಥಿರ ಸರ್ಕಾರ ತರಲು ನಿರ್ಧರಿಸಿದ್ದರು. ಸಾಮಾನ್ಯ ಪ್ರಜೆಗಳ ಮನದಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯಲೇ ಇಲ್ಲ. ಹೌದು, ಇದುವೇ ನಿಜವಾದ ಪ್ರಜಾ ಪ್ರಭುತ್ವ. ಒಂದು ಸ್ಥಿರ ಸರ್ಕಾರವನ್ನು ಜನರು ಚುನಾಯಿಸಿದ್ದಾರೆ. ದೇಶದ ಪ್ರಧಾನಿಗೆ ಇನ್ನು ನಿರಾತಂಕ. ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ದಾರಿ ಸುಗುಮ. ಇನ್ನು ನಾಲ್ಕಾರು ಎಂಪಿಗಳನ್ನು ಕೈಲಿಟ್ಟುಕೊಂಡು ಯಾರೂ ಸರ್ಕಾರದ ಮೇಲೆ ಗುಟುರು ಹಾಕುವಂತಿಲ್ಲ. ಎಲ್ಲಾ ಪಕ್ಷಗಳಲ್ಲೂ ಉತ್ತಮ ರಾಜಕಾರಣಿಗಳಿದ್ದಾರೆ. ಹಾಗೆಯೇ ಕೆಟ್ಟವರೂ ಕೂಡ. ಇದೀಗ ಎಲ್ಲರ ಬಂಡವಾಳ ಗೊತ್ತಾಗಬೇಕು. ಯುಪಿಏ ಸರ್ಕಾರ ನಡೆಸಬೇಕು, ವಿರೋಧ ಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ವಿರೋಧಕ್ಕಾಗಿ ವಿರೋಧವಲ್ಲ. ಸರ್ಕಾರದ ನಿರ್ಧಾರ ಸಾಮಾನ್ಯ ಜನರಿಗೆ ಮಾರಕವಾಗಿದ್ದರೆ ಸರ್ಕಾರದ ಕಿವಿ ಹಿಂಡಬೇಕು, ಪೂರಕ ವಾಗಿದ್ದರೆ ಅದನ್ನು ಗಮನಿಸಿ ರಚನಾತ್ಮಕ ಸಹಕಾರ ನೀಡಬೇಕು. ನಿಜವಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಪರ್ವ ಕಾಲ. ಸರ್ಕಾರದಲ್ಲಿರುವ ಅಥವಾ ವಿರೋಧ ಪಕ್ಷದಲ್ಲಿರುವ ಎಲ್ಲರೂ ಹೇಗೆ ವರ್ತಿಸುತ್ತಾರೆಂಬುದರಲ್ಲಿ ದೇಶದ ಭವಿಷ್ಯ ನಿಂತಿದೆ. ಒಂದು ಸ್ಥಿರ ಸರ್ಕಾರ ಇದ್ದಾಗ ದೇಶ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಉತ್ತಮವಾಗಿರುವುದರಲ್ಲಿ ಸಂದೇಹವಿಲ್ಲ. ಇದೀಗ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದಿದ್ದರೂ ಇನ್ನೂ ಬಡತನ ದೂರವಾಗಿಲ್ಲ. ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಿಲ್ಲ. ಶ್ರೀಸಾಮಾನ್ಯನ ಬದುಕಿನಲ್ಲಿ ನೆಮ್ಮದಿ ಇಲ್ಲ. ಎಲ್ಲೆಲ್ಲೂ ಸರ್ಕಾರಿ ಯಂತ್ರಕ್ಕಿಂತ ಹೆಚ್ಚಾಗಿ ಪುಡಾರಿಗಳ ಮರಿ ಪುಡಾರಿಗಳ ದರ್ಬಾರು ನಡೆಯುತ್ತಿರುವುದು ಸುಳ್ಳಲ್ಲ.ಸರ್ಕಾರದ ಯೋಜನೆಗಳು ಸಾರ್ಥಕವಾಗುತ್ತಿಲ್ಲ. ಎಲ್ಲೆಲ್ಲೂ ಮಧ್ಯವರ್ತಿಗಳದ್ದೇ ಕಾಟ. ಇದಕ್ಕೆ ರಾಜ್ಯ ಸರ್ಕಾರವೂ ಹೊರತಲ್ಲ.

ಹೊಸ ಸರ್ಕಾರದ ಮುಂದೆ ಇಂತಹಾ ನೂರಾರು ಸವಾಲುಗಳು. ದೇಶದ ಅಖಂಡತೆಗೆ ಧಕ್ಕೆ ತರುವ ಭಯೋತ್ಪದನೆ, ಮತಾಂಧತೆ, ರಾಷ್ಟ್ರವಿರೋಧೀ ಕೃತ್ಯಗಳು, ಎಲ್ಲವನ್ನೂ ಬಗ್ಗು ಬಡೆಯಲು ಸದವಕಾಶ.ದೇಶದ ಬಡ ರೈತ, ಕೂಲಿ ಕಾರ್ಮಿಕರ ಮುಖದ ಮೇಲೆ ಮಂದಹಾಸ ಮೂಡುವ ಯೋಜನೆಗಳು ಅನುಷ್ಠಾನವಾಗಬೇಕಿದೆ. ಸರ್ಕಾರೀ ಯೋಜನೆಗಳ ದುರುಪಯೋಗ ಮಾಡಿಕೊಂದವರಿಗೆ ತಕ್ಕ ಶಿಕ್ಷೆ ಆಗಬೇಕಿದೆ. ಕೇಂದ್ರದ ಹೊಸ ಸರಕಾರವು ಈ ಎಲ್ಲಾ ದಿಕ್ಕುಗಳಲ್ಲೂ ಗಮನ ಹರಿಸುತ್ತದೆಂಬ ನಿರೀಕ್ಷೆಯಲ್ಲಿ ಶ್ರೀ ಸಾಮಾನ್ಯನಿದ್ದಾನೆ. ಹೊಸ ಸರಕಾರಕ್ಕೆ ಶುಭವಾಗಲೀ.ಶ್ರೀ ಸಾಮಾನ್ಯನ ನಿರೀಕ್ಷೆಗೆ ಕಾಲವೇ ಉತ್ತರ ನೀಡಬಲ್ಲದು.

ಯಾವುದು ಒಳ್ಳೆಯದು?

ಯಾವುದು ಒಳ್ಳೆಯದು? ಕೆಟ್ಟದು ಯಾವುದು? ಸಜ್ಜನರಾರು? ದುರ್ಜನರಾರು? ಶತ್ರು ಯಾರು? ಮಿತ್ರ ನಾರು? ನೀತಿವಂತನಾರು? ವ್ಯಭಿಚಾರಿ ಯಾರು? ಚಿಂತನೆಮಾಡುತ್ತಾ ಹೋದರೆ ಸಿಗುವ ಉತ್ತರ ಯಾವುದೂ ಒಳ್ಳೆಯದೂ ಅಲ್ಲ. ಯವುದೂ ಕೆಟ್ಟದೂ ಅಲ್ಲ. ಹೀಗೆಯೇ ಎಲ್ಲಾ. ಆಗಿನ ಪರಿಸ್ಥಿತಿಯಲ್ಲಿ ನಮಗೆ ಯಾವುದು ಆಪ್ಯಾಯಮಾನವಾಗಿ ಕಾಣುತ್ತೋ ಅದು ಒಳ್ಳೆಯದೆಂದುಕೊಂಡುಬಿಡುತ್ತೇವೆ. ಆಳವಾಗಿ ಚಿಂತಿಸಿದಾಗ, ನಾವು ನೋಡುತ್ತಿರುವವರ ಸ್ಥಾನದಲ್ಲಿ ನಿಂತು ಚಿಂತಿಸಿದಾಗ ಉತ್ತರ ದೊರೆತೀತು.

ಮನಸ್ಸಿದ್ದರೆ ಮಾರ್ಗ

ನನ್ನ ಹಳ್ಳಿಯಲ್ಲಿ ನಮಗೊಂದು ಹಿತ್ತಲು. ಅದರಲ್ಲಿ ಒಂದು ಚಿಕ್ಕ ಮನೆ ಕಟ್ಟಿ ಅದರಲ್ಲಿ ಅದರಲ್ಲಿ ಹಸು ಸಾಕುವ ಯೋಜನೆ ಮಾಡಿ ವಿಫಲವಾಯ್ತು. ಹತ್ತಾರು ವರ್ಷಗಳಿಂದ ಹಾಗೆಯೇ ಪಾಳು ಬಿತ್ತು. ಊರ ಜನರಿಗೆ ತೆರೆದ ಶೌಚಾಲಯವಾಯ್ತು. ನಾನು ಊರಿಗೆ ಹೋದಾಗಲೆಲ್ಲಾ ಅದರಮುಂದೆ ನಿಂತು ದು:ಖಿಸುವುದೊಂದೇ ದಾರಿಯಾಗಿತ್ತು. ಅಂತೂ ಅದಕ್ಕೂ ಇದ್ದಕ್ಕಿದ್ದಂತೆ ಮೊಕ್ಷ ಸಿಕ್ಕಿತು. ತಮ್ಮನ ಮಗಳ ಮದುವೆ ನಿಶ್ಚಯವಾಯ್ತು. ಅದೇ ಜಾಗದಲ್ಲಿ ಮಗಳ ಮದುವೆ ಮಾಡಬೇಕೆಂದು ಸಂಕಲ್ಪ ಮಾಡಿದೆ. ಮುಂದೆ ಮೂರು ವಾರಗಳಲ್ಲಿ ಆದ ಪರಿವರ್ತನೆಯ ಚಿತ್ರ ಹಾಕಿರುವಿ ನೋಡಿ.

ಇಟಾಚಿಯಿಂದ ನೆಲಸಮ ಮಾಡಿ ಕಾಮಗಾರಿಶುರುಮಾಡಿದಾಗ

ಸಿದ್ಧವಾಯಿತು ಐದುಸಾವಿರ ಲೀಟರ್ ನೀರು ಹಿಡಿಯುವ ಸಂಪ್

ಹಗಲಿರುಳು ದುಡಿದ ದಿಲೀಪ

ಸುತ್ತ ಕಾಂಪೌಂಡ್ ನಿರ್ಮಿಸಿ, ಇದ್ದ ಮನೆಯನ್ನು ದುರಸ್ತಿ ಗೊಳಿಸಿ, ಶೌಚಾಲಯ, ಸ್ನಾನಗೃಹ, ನೀರು ವಿದ್ಯುತ್ ವ್ಯವಸ್ತೆ ಮಾಡಿ, ಅದರಲ್ಲಿಯೇ ಶೀಟ್ ಪೆಂಡಾಲ್ ಹಾಕಿ ನಡೆದೇ ಹೋಯ್ತು ತಮ್ಮನ ಮಗಳ ಮದುವೆ.ಕೇವಲ ಮೂರು ವಾರಗಳಲ್ಲಿ ಇಷ್ಟೆಲ್ಲಾ ಸಾಧ್ಯವಾಯ್ತೆಂದರೆ ನಂಬಲು ಕಷ್ಟವಾದೀತು. ಇದೇ ಜಾಗದಲ್ಲಿ ಒಂದು ಸಭಾಂಗಂಣ ನಿರ್ಮಾಣ ಮಾದಬೇಕೆಂಬುದುಊರ ಜನರ ಬೇಡಿಕೆ.ಇಲ್ಲಿಯೇ ಒಂದು ಗುಡಿ ಕೈಗಾರಿಕೆಶುರುಮಾಡಿ ಕೆಲಸ ವಿಲ್ಲದ ಕೈಗಳಿಗೆ ಕೆಲಸ ಕೊಟ್ಟು,ಊರಿನ ಜನರಿಗೆ ಆಗಿಂದಾಗ್ಗೆ ಸಂಸ್ಕಾರ ಪ್ರಧಾನವಾದ ಕಾರ್ಯಕ್ರಮಗಳನ್ನು ನಡೆಸುವ ಚಿಂತನೆ. ಮೊದಲನೆಯ ಕಾರ್ಯಕ್ರಮವಾಗಿ ತುಮಕೂರಿನ ರಾಮಕೃಷ್ಣ- ವಿವೇಕಾನಂದಾಶ್ರಮದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಂದ ನಡೆದ ಉಪನ್ಯಾಸ ಕಾರ್ಯಕ್ರಮವು ಜನರ ಮೆಚ್ಚುಗೆಗೆ ಪಾತ್ರವಾಯ್ತು.

" ನಿನಗೆ ಇದ್ ಬೇಕಿತ್ತಾ?"

ನನ್ ಮಗ ಹೇಳಿಯೇ ಬಿಟ್ಟ "ಏನೋ ನಾನೇನ್ ತಪ್ಪು ಮಾಡ್ದೆ ,ಅಂತಾ ಹೀಗೆ ಮಾತಾಡ್ತಾ ಇದ್ದೀಯೋ ಅಂದ್ರೆ " ನಿನಗೆಷ್ಟು ಹೇಳಿದರೂ ಪ್ರಯೋಜನವಿಲ್ಲ ಬಿಡು" ಅಂತಾ ಅಂತಿಮ ತೀರ್ಮಾನಕ್ಕೆ ಬಂದೇ ಬಿಟ್ಟಿದ್ದ. ವಿಷಯ ಏನಪ್ಪಾ ಅಂದ್ರೆ ನಾನು ಸಂಪದ ನೋಡೋದೇ ಅವನಿಗೆ ಇಷ್ಟವಿಲ್ಲ ವಂತೆ." ನಿಮ್ಮ ವಯಸ್ಸಲ್ಲಿ ನಿಮಗೆ ಮನಸ್ಸಿಗೆ ಒಪ್ಪೋ ಹಾಗೆ ಎಲ್ಲಾದ್ರೂ ಕೂತ್ಕೊಂಡು ಧ್ಯಾನವೋ,ಪೂಜೆಯೋ, ಪುನಸ್ಕಾರವೋ ಮಾಡ್ಕೊಂಡು ಇರೋದ್ಬಿಟ್ಟು ನಿಮಗ್ಯಾಕೆ ಬೇಕಿತ್ತು-ಈ ಸಹವಾಸ? ಅಂತಾನೆ.ಅವ್ನು ನನ್ನ ಎಲ್ಲಾ ಬರಹಗಳನ್ನೂ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನೂ ನಾನು ಬರೆಯುವ ಪ್ರತಿಕ್ರಿಯೆಗಳನ್ನೂ ಓದ್ತಾನೆ, ಆದ್ರೆ ಏನೂ ಬರೆಯುಲ್ಲ. ಅವ್ನ ಮಾತು ನಿಜಾ ಅನ್ನಿಸ್ತು, ಆದರೆ ಏನ್ ಮಾಡ್ಲೀ ಇದೂ ಒಂತರಾ ದೌರ್ಬಲ್ಯ. ನನ್ ಮನಸ್ಸಲ್ಲಿ ಬಂದದ್ದನ್ನು ಬರೆಯೋ ಚಟ. ಅದು ಯಾರಿಗಾದರೂ ಒಳ್ಳೇದ್ ಆಗಬಹುದೆಂಬ ಕೆಟ್ಟಾಸೆ ಬೇರೆ. ನಿಜವಾಗ್ಲೂ ಈ ಬರೆಯೋ ಚಟ ಇದ್ಯಲ್ಲಾ, ಇದು ಎಲ್ಲಕ್ಕಿಂತ ಕೆಟ್ಟ ಚಟ ರೀ. ತುಂಬಾ ಓದಿದೋರ್ ಬರೆಯೋ ದೇನೋ ಸರೀ, ಅವ್ರು ಓದಿರ್ತಾರೆ ಅದ್ರಿಂದ ಅವ್ರು ಕಲ್ತಿದ್ದನ್ನ ಬರೀತಾರೆ. ನಮ್ಮಂತೋರು ನೋಡಿದ್ದನ್ನ , ಅನುಭವಿಸಿದ್ದನ್ನ ಬರೀತೀವಲ್ಲಾ, ಅದೇ ಕಷ್ಟ. ಬೇಡವೆಂದರೂ ಬೇರೆಯವರಮೇಲೆ ಒತ್ತಡ ತಂದಂದಾಗುತ್ತೆ. ಸುಮ್ನೆ ಇರೋಣಾ ಅಂದ್ರೆ ಆಗ್ಲೇ ಹೇಳಿದ್ನಲ್ಲಾ, ಕಂಡಿದ್ದನ್ನ ,ಕೇಳಿದ್ದನ್ನ ಬರೆಯೋ ಚಟ. ಅಲ್ದೇ ನಮ್ಮ ಪ್ರತಿಷ್ಟೆ ನೋಡಿ" ನಾವ್ ಬಂದಿರೋದೇ ಬೇರೆಯೋರ್ ಮನೆಗೆ, ಅಲ್ಲಿ ಹಾಗಿರ್ಬೇಕೂ, ಹೀಗಿರ್ಬೇಕೂ, ಅಂದ್ರೆ ಆಗುತ್ತಾ? ಆಮನೇಲಿ ಹೇಗಿರ್ತಾರೋ ಹಾಗೆ ಇರ್ಬೇಕಪ್ಪಾ,ಇಲ್ಲಾ ನಂದೇ ನಡೀ ಬೇಕೂ ಅಂದ್ರೆ ಕ್ಯಾರೇ ಅನ್ನೋರು ಯಾರಿರ್ತಾರೆ ಹೇಳಿ? ಮೊನ್ನೆ ಹೀಗೇ ಆಯ್ತು, ನನ್ನ ಆತ್ಮೀಯ ಮುಸ್ಲಿಮ್ ಮಿತ್ರನೊಬ್ಬನ ಮದುವೆಗೆ ಅಂತಾ ಹೋಗಿದ್ದೆ. ಜೊತೇಲೀ ನನ್ ಸ್ನೇಹಿತ್ರು ತುಂಬಾ ಜನನೇ ಇದ್ರು. ಅವ್ರ ಮದ್ವೆ ಗೊತ್ತಿದೆ ಯಲ್ಲಾ, ಮಂಟಪದಲ್ಲಿ ಹುಡುಗನ ಪಕ್ಕ ಮೌಲ್ವಿ ಇದ್ರು. ಹುಡ್ಗೀನಾ ಬೇರೆ ಕೋಣೆಯಲ್ಲಿ ಕೂರ್ಸಿದ್ರು. ಹುಡ್ಗೀ ಹತ್ರ ಹೆಂಗಸರು. ಹುಡುಗನಹತ್ರಾ ಗಂಡಸರು. ಮೌಲ್ವಿ ಅರೇಬಿಕ್ ಭಾಷೆಯಲ್ಲಿ ಏನೇನೋ ಹೇಳಿದ್ರು, ಒಳ್ಳೇ ಸಾಮವೇದ ಕೇಳಿದಹಾಗೆ ಹಿತವಾಗಿತ್ತು. ವೇದಾನೇ ಅರ್ಥವಾಗುಲ್ಲ. ಇನ್ನು ಕುರಾನ್ ಎಲ್ಲಿ ಅರ್ಥ ವಾಗುತ್ತೆ? ಅಂತೂ ಕಿವಿಗೆ ಹಿತವಾಗಿತ್ತು. ಸರಿ ಒಂದು ಪುಸ್ತಕದಲ್ಲಿ ಸೈನ್ ಮಾಡಿಸಿಕೊಂಡರು. ಹುದುಗನನ್ನು ಮೌಲ್ವಿ ತಬ್ಬಿ ಕೊಂಡರು. ಬಂದ ಗಂಡಸರೆಲ್ಲಾ ಹುಡುಗನನ್ನು ತಬ್ಬಿ ಕೊಂಡರು. ಮದ್ವೆ ಮುಗಿದೇ ಹೋಯ್ತು. ಹುಡುಗೀ ಬರಲೇ ಇಲ್ಲ. ನಂತರ ನೋಡಿ ಸಮಸ್ಯೆ ಶುರು ವಾಗಿದ್ದು, ಊಟದ ಮನೆ ದಾರಿ ತೋರ್ಸಿದ್ರು, ಒಂದುಕಡೆ ನಾನ್ ವೆಜ್, ಮತ್ತೊಂದು ಕಡೆ ವೆಜ್ ಊಟ. ಏನೇ ಆಗ್ಲೀ ವಾಸನೇಗೆ ಪಾರ್ಟೀಶನ್ ಹಾಕಲು ಸಾಧ್ಯವೇ? ವೆಜ್ ಜಾಗದಲ್ಲೂ ಅದೇ ಘಾಟು. ಬಂದವರೆಲ್ಲಾ ಭಾರೀ ಖುಶಿಯಾಗೇ ಊಟ ಮಾಡಿದ್ರು, ಆದರೆ ನಮ್ಮಿಬ್ಬರ ಪಾಡು ನಾಯಿ ಪಾಡು. ಆದರೆ ಯಾರ ಖುಷೀಗೂ ಬಂಗ ಮಾಡಲಿಲ್ಲ. ನಮ್ ಕಷ್ಟ ನಾವ್ ಅನುಭವಿಸಿದೆವು ಅಷ್ಟೆ. ನಿಜವಾಗ್ಲೂ ಇಲ್ಲೂ ನಿಷ್ಟೂರಕ್ಕೆ ಒಳಗಾಗುವಂತವರು ನಾವೇ. ನೋಡೀ ನಮ್ ಪರಿಸ್ಥಿತಿ ಹೇಗಿದೆ? ಮಿತ್ರನನ್ನು ಬಿಡಲಾರದ, ಪರಿಸ್ಥಿತಿ ಸಹಿಸಲಾರದ ಸಂದರ್ಭ. ಆದ್ರೂ ಅದೆಷ್ಟೊ ಜನರ ಕಣ್ಣಿಗೆ ನಾವು ಕೆಟ್ಟವರು. ಇರಲೀ ಬಿಡಿ. ಏನಪ್ಪ ಅಂದ್ರೆ "ಬಡವಾ ನೀನ್ ಮಡಗಿದಂಗಿರು" ಅನ್ನೋ ಮಾತ್ ನೆನಪಾಯ್ತು. ಪ್ರವಾಹದ ವಿರುದ್ಧ ಹೋಗಲು ಸಾಧ್ಯವೇ? ಆದರೆ ನದಿಯ ಹತ್ತಿರಕ್ಕೇ ಹೋಗದೆ ದೂರ ಇದ್ದು ಬಿಡಬಹುದು. ಏನ್ ಮಾಡೋದು....ದೂರ ಇರೋದೂ ಕಷ್ಟ. ಹತ್ತಿರ ಸೇರೋದೂ ಕಷ್ಟ.

----------------------------------------------------------

-೨-

ನಮ್ಮ ಅನೇಕ ಸಮಸ್ಯೆಗಳಿಗೆ ಜನರೇಶನ್ ಗ್ಯಾಪ್ ಕಾರಣವೆನ್ನುವುದು ಗೊತ್ತಾಗುವ ಹೊತ್ತಿಗೆ ನಮಗೂ ಸಾಕಾಗಿ ಹೋಗಿರುತ್ತೆ. ನಿತ್ಯವೂ ಎಲ್ಲಾರ ಮನೆಯಲ್ಲೂ ಟಿ.ವಿ.ಪ್ರೋಗ್ರಾಮ್ ದು ಕಾಮನ್ ಸಮಸ್ಯೆ. ಮನೆ ವಿಶಾಲವಾಗಿದ್ದರೆ ಚಿಂತೆಯಿಲ್ಲ. ಇಲ್ಲದಿದ್ದರೆ ನಿಜವಾಗಲೂ ನಮ್ಮಂತೋರಿಗೆ ಮನೆಯೇ ನರಕವೆನಿಸಿಬಿಡುತ್ತೆ. ಚಿಕ್ಕದೊಂದುಮನೆಯ ಹಾಲಿನಲ್ಲಿ ಟಿ.ವಿ. ಇದ್ದು ಮನೆಯಲ್ಲಿ ಕಾಲೇಜು ಓದೋ ವಯಸ್ಸಿನ ಮಕ್ಕಳಿದ್ದರೆ ನಮ್ಮಂತವರ ಕತೆ ಮುಗಿದಂತೆಯೇ. ಸದಾ ಒಂದಿಷ್ಟುಆಧುನಿಕ ಸಿನೆಮಾ ದೃಶ್ಯಗಳು, ಇಲ್ಲಾ ಅಂದ್ರೆ ಕ್ರಿಕೆಟ್, ಅಥವಾ ಅದೆಂತದೋ ಹೊಡೆದಾಟ. ಅಂತಾ ವಾತಾವರಣದಲ್ಲಿ ಕಣ್ಮುಚ್ಚಿ ಕೂರುವುದೆಂತು? ಪೂಜೆ ಮಾಡುವುದೆಂತು?ಅದು ಹೋಗಲೀ ನಮಗೆ ಆ ಹೊಡೆದಾಟ ಬಡಿದಾಟದ ದೃಶ್ಯ ಅಪ್ಪಿ ತಪ್ಪಿ ಕಣ್ಣಿಗೆ ಬಿದ್ದರೆ,ಆ ರಣಶಬ್ಧ ಕಿವಿಗೆ ಬಿದ್ದರೆ ತಲೆ ಸುತ್ತಿ ಬರುತ್ತೆ. ಇದು ನಮ್ಮಂತವರ ದೌರ್ಬಲ್ಯ.

ನೋಡಿ, ಮೊನ್ನೆ ಹಾಸನದ ಶಂಕರ ಮಠದಲ್ಲಿ ವೇದವಿದ್ವಾಂಸರ ಸಭೆ ನಡೆಯಿತು.ಆಮಂತ್ರಣ ಪತ್ರಿಕೆ ಸಿದ್ಧಮಾಡುವಾಗಲೇ ಕಷ್ಟ ಎದುರಾಯ್ತು. ಆಮಂತ್ರಣದಲ್ಲಿ ನಿಮ್ಮೆಲ್ಲರಿಗೂ ಸ್ವಾಗತ -ಅಂತಾ ಬರೆದರೆ ಬಂದವರಿಗೆಲ್ಲಾ ಎಷ್ಟು ಮುಜುಗರವಾಗುತ್ತಿತ್ತೆಂದು ನಮ್ಮಂತ ಕೆಲವರಿಗೆ ಗೊತ್ತಿತ್ತು. ವೇದ ವಿದ್ವಾಂಸರ ಸಭೆಗೆ ಅವರದೇ ಒಂದು ರೀತಿ-ನೀತಿ ಇದೆ.ವೇಷ-ಭೂಷಣಗಳಿವೆ.ಶಿಖೆ ಬಿಟ್ಟಿರುವ, ಪಂಚೆ ಉಟ್ಟು ಶಲ್ಯ ಹೊದ್ದಿರುವ ನೂರಾರು ವಿದ್ವಾಂಸರ ಮಧ್ಯೆ ಪ್ಯಾಂಟ್ ಶರ್ಟ್ ಧರಿಸಿರುವ ನಮ್ಮಂತವರಿಗೆ ಪ್ರವೇಶವಿಲ್ಲ. ಕಾರ್ಯಕ್ರಮ ಯೋಜಿಸಿರುವವರು ನಾವೇ ಆದರೂ ಅವರಂತಿದ್ದರೆ ನಮಗೆ ಪ್ರವೇಶ. ಇಲ್ಲದಿದ್ದರೆ ಇಲ್ಲ. ಅಶ್ಟೇ ಅಲ್ಲ , ಅಷ್ಟೊಂದು ವಿದ್ವಾಂಸರ ಮಧ್ಯೆ ಪ್ಯಾಂಟ್ ಶರ್ಟ್ ಧರಿಸಿ ಹೋಗಿದ್ದರೆ ಎಷ್ಟು ಜನರ ಕೆಂಗಣ್ಣಿಗೆ ತುತ್ತಾಗಬೇಕಿತ್ತೋ...

ಯಾಕೆ ಹೇಳ್ದೇ ಅಂದ್ರೆ , ಸಾಮಾನ್ಯ ಜನರ ಮಧ್ಯೆ[ಅಂದರೆ ನಮ್ಮಂತೋರು ಅಂತಾ] ಜುಟ್ಟು ಬಿಟ್ಕೊಂಡು ಒಬ್ಬ ಮನುಷ್ಯ ಬಂದಾ ಅಂದ್ರೆ ಅಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತಾನೆ. ಆದರೆ ಜುಟ್ಟು ಬಿಟ್ಟುಕೊಂಡು ವೈದಿಕ ವೇಷದಲ್ಲಿ ನೂರಾರು ಜನರ ಮಧ್ಯೆ ವೇದ ಪಠಣ ಮಾಡುತ್ತಿದ್ದಾಗ ನಮ್ಮಂತೋರು ಹೋದ್ರೆ ನಾವು ಅಪಹಾಸ್ಯಕ್ಕೆ ಒಳಗಾಗುತ್ತೀವಿ.ಅಲ್ವೇ?

ಒಟ್ಟಿನಲ್ಲಿ ನಾವ್ನಾವು ಬೆಳೆದಿರುವ ವಾತಾವರಣ ನಮ್ಮ ಮೆಲೆ ಪ್ರಭಾವ ಬೀರಿರುತ್ತೆ. ಅದು ನಮಗೆ ಸರಿ ಕಾಣುತ್ತೆ. ನಮ್ಮ ವಯೋ ಮಾನ ಕೂಡ ಗಣನೆಗೆ ಬರುತ್ತೆ.

ಸೋಗಲಾಡಿ ಸೊಸೆ

ಮೊನ್ನೆ ನನ್ನ ಸ್ನೇಹಿತ ಕಿಟ್ಟಿಯ ತಂದೆ ವಿಧಿವಶವಾದರು. ಆ ತಂದೆಗೆ ಮೂರು ಜನ ಗಂಡುಮಕ್ಕಳು. ಒಬ್ಬಳು ಹೆಣ್ಣುಮಗಳು. ಕಿಟ್ಟಿಯ ಅಣ್ಣಂದಿರು ತುಂಬಾ ಚೆನ್ನಾಗಿ ಬದುಕಿದ್ದಾರೆ. ಒಬ್ಬ ದಾವಣಗೆರೆಯಲ್ಲಿ ಡಾಕ್ಟರ್. ಮತ್ತೊಬ್ಬ ಬೆಂಗಳೂರಿನಲ್ಲಿ ಒಂದು ಕಂಪನಿಯಲ್ಲಿ ಮ್ಯಾನೇಜರ್.ವಯಸ್ಸಾದ ಕಾಲದಲ್ಲಿ ಪಾಪ ಆ ವೃದ್ಧರು ತಮ್ಮ ಮೂರನೆಯ ಮಗ ಕಿಟ್ಟಿಯ ಮನೆಯಲ್ಲಿದ್ದರು.ಕಿಟ್ಟಿಗೋ ಒಂದು ಒಳ್ಳೆಯ ನೌಕರಿಯೂ ಇಲ್ಲ. ನಾಲ್ಕಾರು ಅಂಗಡಿಗಳಲ್ಲಿ ಲೆಕ್ಖ ಬರೆದುಕೊಂಡಿದ್ದಾನೆ. ಹತ್ತಿರದಲ್ಲಿ ಕಿಟ್ಟಿಯ ತಂಗಿಯೂ ಇದ್ದಾರೆ. ಕಿಟ್ಟಿಯ ತಂದೆ ಆರು ತಿಂಗಳ ಹಿಂದೆ ಸೀರಿಯಸ್ಸಾಗಿ ಇನ್ನೇನು ಇಂದು ನಾಳೆಯಲ್ಲಿ ಪ್ರಾಣ ಹೋಗಬಹುದೆಂದು ತಿಳಿದಾಗ ಅವನ ಅಣ್ಣ ಡಾಕ್ಟರ್ ಬಂದು ನರ್ಸಿಂಗ್ ಹೋಂ ಗೆ ಸೇರಿಸಿದವರು ಮತ್ತೆ ಆ ಕಡೆ ತಲೆ ಹಾಕಿರಲಿಲ್ಲವಂತೆ.ಪಾಪ ನರ್ಸಿಂಗ್ ಹೋಮಿನ ಚಾರ್ಜ್ ಕಟ್ಟಲು ಊರತುಂಬಾ ಸಾಲ ಮಾಡಿ ಕಿಟ್ಟಿ ಸಾಕಾಗಿ ಹೋಗಿದ್ದ. ಪಾಪ, ಕಿಟ್ಟಿ ಅಪ್ಪನ ಶಿಶ್ರೂಶೆಯಲ್ಲಿ ಬಳಲಿ ಬೆಂಡಾಗಿ ಹೋಗಿದ್ದ. ಜೊತೆಗೆ ಹೆಂಡತಿ, ಆಗಿಂದಾಗ್ಗೆ ಬರುತ್ತಿದ್ದ ತಂಗಿ ಇದ್ದಿದ್ದರಿಂದ ಇವನಿಗೆ ಸ್ವಲ್ಪ ನಿದ್ರಿಸಲು ಅವಕಾಶವಿತ್ತು.

ಇಷ್ಟೆಲ್ಲಾ ಕಿಟ್ಟಿಪುರಾಣ ಏಕೆ ಹೇಳ್ದೇ ಅಂದ್ರೆ ಕಿಟ್ಟಿತಂದೆ ಸತ್ತ ದಿನ ಒಂದು ನಾಟಕ ನಡೆಯಿತು. ನೋಡಿದವರೆಲ್ಲಾ ದು:ಖಿಸುತ್ತಿದ್ದರೆ ನನಗೆ ನಾಟಕ ಮಾಡುವವರ ಮೇಲೆ ಸಿಕ್ಕಾಪಟ್ಟೆ ಸಿಟ್ಟುಬಂದಿತ್ತು.

ಕಿಟ್ಟಿತಂದೆ ರಾತ್ರಿ ೧೦ ಗಂಟೆಗೆ ಸತ್ತರು. ಪಾಪ ಆಬಡಪಾಯಿ ನನಗೂ ತಿಳಿಸಿ ಎಲ್ಲಾ ಅಣ್ಣಂದಿರಿಗೂ ಫೋನಾಯಿಸಿದ. ಐದು ನಿಮಿಷದಲ್ಲಿ ಎಲ್ಲರಿಗೂ ವಿಷಯ ಮುಟ್ಟಿತು. ನಾನೂ ಕೂಡ ಕಿಟ್ಟಿ ಸಂಸಾರದ ಜೊತೆಗೆ ನರ್ಸಿಂಗ್ ಹೋಮಿನಲ್ಲೇ ಜಾಗರಣೆ ಮಾಡಿದೆ.ಬೆಳಗಾಯ್ತು.ಕಿಟ್ಟಿಯ ಅಣ್ಣಂದಿರ ನಿರೀಕ್ಷೆಯಲ್ಲಿದ್ದೀವಿ. ಬೆಳಿಗ್ಗೆ ಹತ್ತಾದರೂ ಯಾರ ಸುಳಿವೂ ಇಲ್ಲ.ನರ್ಸಿಂಗ್ ಹೋಮಿನವರೋ ಬಿಲ್ ಸೆಟ್ಲ್ ಮಾಡಿ ಬಾಡಿ ಬೇಗ ತೆಗೆದುಕೊಂಡು ಹೋಗಿ ಅಂತಾ ಒತ್ತಡ ತರ್ತಾ ಇದ್ದಾರೆ.ಕಿಟ್ಟಿ ಕುಸಿದು ಹೋಗಿದ್ದ. ನನ್ನ ಸ್ನೇಹಿತನಿಗೆ ಫೋನ್ ಮಾಡಿ ಹಣತರಿಸಿ ಬಿಲ್ ಪಾವತಿಸಿ ಮೃತ ದೇಹವನ್ನು ಕಿಟ್ಟಿಮನೆ ಹತ್ತಿರ ತೆಗೆದುಕೊಂಡು ಹೋಗುತ್ತೇವೆ. ಮದ್ಯಾಹ್ನ ಒಂದು ಗಂಟೆಗೆ ಬೆಂಗಳೂರಿನಿಂದ, ಮೂರು ಗಂಟೆಗೆ ದಾವಣಗೆರೆಯಿಂದ ಅಣ್ಣಂದಿರು ಬಂದರು.ಬೆಂಗಳೂರಿನಿಂದ ಬಂದ ಕಿಟ್ಟಿಯ ಅತ್ತಿಗೆ ಮೃತ ದೇಹದ ಮೇಲೆ ತಲೆ ಇಟ್ಟು ಗೊಳೋ ಅಂತಾ ಅಳಲು ಶುರು ಮಾಡಿ ಬಿಡುವುದೇ!! " ದೇವ್ರ ತರಾ ಇದ್ರಿ, ನಮ್ಮನ್ನು ಬಿಟ್ಟು ಹೋಗ್ಬಿಟ್ರಲ್ಲಾ!..........ಇನ್ನೂ ಏನೇನೋ ಹೇಳಿಕೊಂಡು ಅತ್ತಿದ್ದೇನೂ , ಕರೆದಿದ್ದೇನೂ, ನೋಡುವವರಿಗೆ ಅವರ ಮೇಲೆ ಅದೇನೋ ಮರುಕ. ಪಾಪ! ನಿಜವಾಗಿ ತಮ್ಮ ಸೇವೆ ಮಾಡಿದ್ದವರು ಸೊರಗಿ ಸೊಪ್ಪಾಗಿ, ನಿತ್ರಾಣರಾಗಿ ಕುಳಿತಿದ್ದರೆ, ಆಯಮ್ಮನ ಆರ್ಬಟ ಕೇಳಿ ನನಗೆ ನಿಜವಾಗಿ ಸಿಟ್ಟೇ ಬಂತು.

" ಸಮಾಧಾನ ಪಟ್ಟುಕೊಳ್ಳಿ , ಮುಂದಿನ ಕೆಲಸಕ್ಕೆ ತಡವಾಗುತ್ತೆ" ಎಂದು ಏಳಿಸಿದ್ದಾಯ್ತು.

ಅಪ್ಪ ಅಮ್ಮ ಇದ್ದಾಗ ಹತ್ತಿರ ಸುಳಿಯದವರು ಅವರು ಸತ್ತಾಗ ಬಿಕ್ಕಿ ಬಿಕ್ಕಿ ಅಳುತ್ತಾ, ಶ್ರಾದ್ಧದ ಕೆಲಸ ಮಾಡುವ ದಿನಗಳಲ್ಲಿ ಬಿಡುವಾದಾಗಲೆಲ್ಲಾ ಮಾವನ ಗುಣಗಾನ ಮಾಡುವ ಸೊಸೆಯರು! ಇವರ ಬರಾಟೆಯಲ್ಲಿ ನಿದ್ದೆ ಗೆಟ್ಟು ಅಪ್ಪನ ಸೇವೆ ಮಾಡಿದ ಮಗ ಸೊಸೆ ತೆಪ್ಪನೆ ಕುಳಿತಿದ್ದನ್ನು ಕಂಡು ಅಯ್ಯೋ ಎನಿಸಿತು.

ಕೋಲುಬೆಲ್ಲ,

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇವತ್ತು ಒಂದು ಸುದ್ಧಿ ಓದಿದೆ. ಕಂಪ್ಲಿ ಶಾಸಕ ಸುರೇಶ್ ಬಾಬು ಮದುವೆ ವೈಭವ. ಎರಡು ಎಕರೆ ಪ್ರದೇಶದಲ್ಲಿ ಮದುವೆ ಚಪ್ಪರ. ಅದಕ್ಕೆ ಹವಾನಿಯಂತ್ರಣ ಸೌಲಭ್ಯ. ಅದಕ್ಕಾಗಿ ಇಪ್ಪತ್ತು ಜನರೇಟರ್, ನಾಲ್ಕು ಹೆಲಿಕ್ಯಾಪ್ಟರ್, ಬಳ್ಳಾರಿಯ ಬಹುತೇಕ ವಸತಿ ಗೃಹಗಳು ಮದುವೆಗೆ ಬಂದ ಅತಿಥಿಗಳಿಗಾಗಿ ಮೀಸಲು.ಸುಮಾರು ಆರು ಕೋಟಿ ರೂಪಾಯಿ ಖರ್ಚು. ರಾಜ್ಯಸರ್ಕಾರದ ಸಚಿವರ ದಂಡು.ಇಷ್ಟು ಸುದ್ಧಿ ಅಷ್ಟೆ.ಅದರ ವಿಮರ್ಶೆ ನಿಮಗೆ ಬಿಟ್ಟಿದ್ದು.

-------------------------------------------------------------

ನಾನು ಇವತ್ತು ಬರೀಬೇಕೂ ಅಂತಾ ಅಂದುಕೊಂಡಿದ್ದನ್ನು ಸರಿಯಾಗಿ ಬರೀತೀನೋ ಇಲ್ವೋ ಗೊತ್ತಿಲ್ಲ.ಕಾರಣಶಾಸಕರ ಮದುವೇ ಸುದ್ಧಿ ನನ್ ತಲೆಯನ್ನು ಆಕ್ರಮಿಸಿಕೊಂಡು ಬಿಟ್ಟಿದೆ. ಇರ್ಲಿ ವಿಚಾರಕ್ಕೆ ಬರ್ತೀನಿ."ಮುತ್ತುರತ್ನ ಗಳನು ಬಳ್ಳದಿಂದ ಅಳೆದು ಮಾರಿದಾ" ಅಂತಾ ಪ್ರೈಮರಿಶಾಲೆಯಲ್ಲಿ ಕನ್ನಡ ಪುಸ್ತಕದಲ್ಲೊಂದು ಪದ್ಯ ಓದಿದ್ದೆ.ಆಗ ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಣ್ಣಿಸುತ್ತಾ " ಎಂತಾ ನಾಡಿನಲ್ಲಿ ಹುಟ್ಟಿದ್ದೀವಿ ನಾವು! ನಾವೇ ಪುಣ್ಯವಂತರು" ಅಂತಾ ನಮ್ ಮೇಸ್ಟ್ರು ಹೆಮ್ಮೆಇಂದ ಹೇಳ್ತಾ ಇದ್ರೆ ನಮಗೂ ಸಂತೋಷ ಆಗ್ತ ಇತ್ತು. ಅದೇ ಕಾಲದಲ್ಲಿ ನಮ್ಮೂರಲ್ಲಿ ಮುತ್ತುರತ್ನಗಳಿರದಿದ್ದರೂ ನಮ್ಮೂರ ಜನರೇ ಮುತ್ತುರತ್ನಗಳಾಗಿದ್ದರು. ಹೇಗೆ ಅಂತೀರಾ?..ಮುಂದೆ ಓದಿ.. ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿರುವಾಗ, ಆ ಕಾಲದಲ್ಲಿ ಹಸು-ಎಮ್ಮೆ ಸಾಕಿದ್ದ ರೈತರು ಹಾಲು ಕರೆದು ,ಹೆಪ್ಪು ಹಾಕಿ, ಮೊಸರು ಕಡೆದು ಬೆಣ್ಣೆ ಮಾಡುವಾಗ ,ಬಂದ ಮಜ್ಜಿಗೆಯನ್ನು ಊರಲ್ಲಿದ್ದ ಬಡ ಬ್ರಾಹ್ಮಣರಿಗೆ ಪುಕ್ಕಟೆ ಹಂಚುತ್ತಿದ್ದರು. ಮಾಯಮ್ಮನ ಮನೆಗೆ ನಿತ್ಯವೂ ನಾನು ಹೋಗಿ " ಇವತ್ತು ಮೊಸರು ಕಡೆದಿದ್ದೀರಾ? ಅಂತಾ ಕೇಳಿ ಮಜ್ಜಿಗೆ ಇಸ್ಕೊಂಡ್ ಬರ್ತಿದ್ದೆ. ಕಣಗಾಲದಲ್ಲಿ ಯಾರ ಕಣಕ್ಕೆ ಹೋದರೂ ಐನೋರು ಬಂದವ್ರೆ ಒಂದು ಹೊರೆ ಹುಲ್ಲು ಕೊಡೋ ಮಗ ಅಂತಾ ಯಜಮಾನ ಹೇಳಿದ್ರೆ ನನ್ನ ಕೈಲಿ ಹೊರಲಾರದಷ್ಟು ಹುಲ್ಲನ್ನು ಕಟ್ಟಿ ಹೊರೆಸಿ ಕಳಿಸುತ್ತಿದ್ದರು. ಇನ್ನು ಆಲೆಮನೆ ಕಟ್ಟಿದಾಗ ನಮ್ಮಪ್ಪ ಅಲ್ಲಿ ಒಂದುಗೂಡುಮಾಡಿ ಗಣಪತಿ ಇಟ್ಟು ನಿತ್ಯ ಪೂಜೆಮಾಡಿ[ನಮ್ಮಪ್ಪನಿಗೆ ಮಂತ್ರವೇ ಬರುತ್ತಿರಲಿಲ್ಲ. ಅವನೂ ಒಬ್ಬ ರೈತ, ಒಂದು ಚೊಂಬು ನೀರು ತಗೊಂಡು ಹೋಗಿ ಅಲ್ಲಿ ಪ್ರೋಕ್ಷಣೆ ಮಾಡಿ ಊದುಗಡ್ಡಿ ಹಚ್ಚಿ ಕರ್ಪೂರದಲ್ಲಿ ಮಂಗಳಾರತಿ ಮಾಡಿದರೆ ಪೂಜೆ ಆಗ್ತಾಇತ್ತು ಅಂತಾನೆನಪು. ಆಲೆ ಮನೆಯವರು ನೈವೇದ್ಯಕ್ಕೆ ಒಂದು ಉಂಡೆ ಬೆಲ್ಲವನ್ನೇ ಇಡ್ತಾ ಇದ್ದರು.ನಾವೆಲ್ಲಾ ಆಲೆಮನೆಗೆ ಹೋದರೆ ಕುಡಿಯುವಷ್ಟು ಕಬ್ಬಿನಹಾಲು, ತಿನ್ನಲು ಕಬ್ಬು, ಕೋಲುಬೆಲ್ಲ, ಬಿಸಿಬಿಸಿಯಾಗಿ ಆಗತಾನೇ ತೆಗೆದಿದ್ದ ಬೆಲ್ಲ, ಎಲ್ಲಾ ಕೊಟ್ಟು ಕಳಿಸುತ್ತಿದ್ದ ಪುಣ್ಯಾತ್ಮರು ಅವರು. ಕೋಲು ಬೆಲ್ಲಾ ಅಂದ್ರೆ ಗೊತ್ತಾಗಲಿಲ್ಲವಾ? ಕೊಬ್ಬರಿಗೆಯಲ್ಲಿ ಕಬ್ಬಿನಹಾಲು ಕುದ್ದೂ ಕುದ್ದೂ ಇನ್ನೇನು ಪಾಕ ಬಂತೂ ಅಂತಾ ಘಮಘಮ ವಾಸನೆಯಿಂದ ಗೊತ್ತಾದಾಗ ಒಂದು ಕಬ್ಬಿನತುಂಡನ್ನು ಪಾಕದಲ್ಲಿ ಅದ್ದಿ ಸುತ್ತಿದರೆ ಕೋಲುಬೆಲ್ಲಾ ರಡಿ. ಅದು ಆರಿದಮೇಲೆ ತಿನ್ನೋದೇ ಒಂದು ಮಜ[ ಮಜ ಎನ್ನುವ ಪದ ಅಷ್ಟೊಂದು ನನಗೆ ಒಪ್ಪಿಗೆಯಾಗದ ಪದ, ಆದರೆ ಸಧ್ಯಕ್ಕೆ ಅದಕ್ಕೆ ಪರ್ಯಾಯ ಹುಡುಕುವ ಗೋಜಿಗೆ ಹೋಗುಲ್ಲ]

---------------------------------------------------------

ಇವತ್ತು ನಮ್ಮೂರು ಹೇಗಿದೆ ಅಂದ್ರೆ.... ಊರಲ್ಲಿ ನಿಜವಾದ ರೈತರೇ ಇಲ್ಲ.ಬೇಡುವ ಬಡ ಬ್ರಾಹ್ಮಣನೂ ಇಲ್ಲ.ಊರುಬಿಟ್ಟು ನಲವತ್ತು ವರ್ಷ ಆಗ್ತಾ ಬಂತು ಈಗ ನನ್ನ ಜೊತೆಗಾರರ ಮಕ್ಕಳು ಅವರ ಮಕ್ಕಳ ಕಾಲ. ನನಗೆ ಅವರುಗಳ ಪರಿಚಯವಾಗದಿದ್ದರೂ ಪಾಪ, ಅವರು ನನ್ನನ್ನು ಗುರುತಿಸುತ್ತಾರೆ.ಕಾರಣ ಆಗೊಮ್ಮೆ ಈಗೊಮ್ಮೆ ನಾನು ಊರಿಗೆ ಬರೋದನ್ನು ಅವರು ನೋಡಿದ್ರು. " ನಾಗಯ್ಯನೋರ ಮಗಾರಲ್ವಾ? ಚನ್ನಾಗಿದ್ದೀರಾ? ಮಕ್ಕಳೆಲ್ಲಾ ಚೆನ್ನಾಗಿ ಓದಿ ಇಂಜಿನಿಯರುಗಳಾಗಿದ್ದಾರಂತೆ, ಭಾರೀ ಸಂತೋಷ, ಅಂತಾರೆ." ಆದರೆ ನೀವು ಏನ್ ಮಾಡ್ತಾ ಇದ್ದೀರಿ? ಅಂತಾ ಅವ್ರನ್ನು ನಾನು ಕೇಳಿದರೆ " ನಾನು ಕಂಟ್ರಾಕ್ಟ್ ಮಾಡಿಸ್ತಾ ಇದ್ದೀನಿ, ಅಂತಾಲೇ ಎಲ್ರೂ ಹೇಳೋದು, ಎಲ್ಲರ ಹತ್ರ ಮೋಟಾರ್ ಬೈಕ್ ಇದೆ. ಎಲ್ರೂ ಕಂಟ್ರಾಕ್ಟರೇ,ಕೂಲಿಮಾಡೋರು,ಹೊಲ ಉಳೋರು ಯಾರೂ ಇಲ್ಲ. ಎಷ್ಟೋ ಜಮೀನಿನ ಹತ್ತಿರ ಕ್ರಶರ್ ಗಳು ಜೆಲ್ಲಿ ಕುಟ್ಟುತ್ತಿರುತ್ತವೆ, ಇಟ್ಟಿಗೆ ಮಾಡೊ ಫ್ಯಾಕ್ಟರಿ, ಅಥವಾ ಊರು ತುಂಬಾ ಹೋಟೆಲ್ ಮತ್ತು ಅಂಗಡಿಗಳು, ಮೊಬೈಲ್ ಶಾಪ್ ಗಳು. ಜಮೀನೆಲ್ಲಾ ಕಾಡು ಗಿಡ ಬೆಳೆದು ನಿಂತಿವೆ. ಕೇಳಿದರೆ " ಕೂಲಿ ಸಿಗುವುದಿಲ್ಲ ಏನ್ ಮಾಡೋದು ಅಂತಾರೆ? ಯಾರ ಅಪ್ಪಂದಿರು ಮೈ ಮುರಿದು ಗೇಯುತ್ತಿದ್ದರೋ ಅವರ ಮಕ್ಕಳು ಮೊಮ್ಮೊಕ್ಕಳು ಈಗ ಊರಿನ ಬಸ್ ಸ್ಟಾಂಡ್ ಸರ್ಕಲ್ ನ ಕಟ್ಟೆ ಮೇಲೆ ಸದಾ ಕೂತಿರ್ತಾರೆ, ಏನಪ್ಪಾ ಮಾಡ್ತೀಯಾ, ಅಂದ್ರೆ ಕಂಟ್ರಾಕ್ಟ್ ಅಂತಾರೆ. -----------------------------------------------------------------

ಇಂತಾ ನಮ್ಮೂರಿಗೆ ಹೋಗಿ ನಮ್ ಹಳ್ಳೀಜನರೊಡನೆ ಬದುಕುವ ಆಸೆ ಇನ್ನೂ ತಪ್ಪಿಲ್ಲ.