ನನ್ ಮಗ ಹೇಳಿಯೇ ಬಿಟ್ಟ "ಏನೋ ನಾನೇನ್ ತಪ್ಪು ಮಾಡ್ದೆ ,ಅಂತಾ ಹೀಗೆ ಮಾತಾಡ್ತಾ ಇದ್ದೀಯೋ ಅಂದ್ರೆ " ನಿನಗೆಷ್ಟು ಹೇಳಿದರೂ ಪ್ರಯೋಜನವಿಲ್ಲ ಬಿಡು" ಅಂತಾ ಅಂತಿಮ ತೀರ್ಮಾನಕ್ಕೆ ಬಂದೇ ಬಿಟ್ಟಿದ್ದ. ವಿಷಯ ಏನಪ್ಪಾ ಅಂದ್ರೆ ನಾನು ಸಂಪದ ನೋಡೋದೇ ಅವನಿಗೆ ಇಷ್ಟವಿಲ್ಲ ವಂತೆ." ನಿಮ್ಮ ವಯಸ್ಸಲ್ಲಿ ನಿಮಗೆ ಮನಸ್ಸಿಗೆ ಒಪ್ಪೋ ಹಾಗೆ ಎಲ್ಲಾದ್ರೂ ಕೂತ್ಕೊಂಡು ಧ್ಯಾನವೋ,ಪೂಜೆಯೋ, ಪುನಸ್ಕಾರವೋ ಮಾಡ್ಕೊಂಡು ಇರೋದ್ಬಿಟ್ಟು ನಿಮಗ್ಯಾಕೆ ಬೇಕಿತ್ತು-ಈ ಸಹವಾಸ? ಅಂತಾನೆ.ಅವ್ನು ನನ್ನ ಎಲ್ಲಾ ಬರಹಗಳನ್ನೂ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನೂ ನಾನು ಬರೆಯುವ ಪ್ರತಿಕ್ರಿಯೆಗಳನ್ನೂ ಓದ್ತಾನೆ, ಆದ್ರೆ ಏನೂ ಬರೆಯುಲ್ಲ. ಅವ್ನ ಮಾತು ನಿಜಾ ಅನ್ನಿಸ್ತು, ಆದರೆ ಏನ್ ಮಾಡ್ಲೀ ಇದೂ ಒಂತರಾ ದೌರ್ಬಲ್ಯ. ನನ್ ಮನಸ್ಸಲ್ಲಿ ಬಂದದ್ದನ್ನು ಬರೆಯೋ ಚಟ. ಅದು ಯಾರಿಗಾದರೂ ಒಳ್ಳೇದ್ ಆಗಬಹುದೆಂಬ ಕೆಟ್ಟಾಸೆ ಬೇರೆ. ನಿಜವಾಗ್ಲೂ ಈ ಬರೆಯೋ ಚಟ ಇದ್ಯಲ್ಲಾ, ಇದು ಎಲ್ಲಕ್ಕಿಂತ ಕೆಟ್ಟ ಚಟ ರೀ. ತುಂಬಾ ಓದಿದೋರ್ ಬರೆಯೋ ದೇನೋ ಸರೀ, ಅವ್ರು ಓದಿರ್ತಾರೆ ಅದ್ರಿಂದ ಅವ್ರು ಕಲ್ತಿದ್ದನ್ನ ಬರೀತಾರೆ. ನಮ್ಮಂತೋರು ನೋಡಿದ್ದನ್ನ , ಅನುಭವಿಸಿದ್ದನ್ನ ಬರೀತೀವಲ್ಲಾ, ಅದೇ ಕಷ್ಟ. ಬೇಡವೆಂದರೂ ಬೇರೆಯವರಮೇಲೆ ಒತ್ತಡ ತಂದಂದಾಗುತ್ತೆ. ಸುಮ್ನೆ ಇರೋಣಾ ಅಂದ್ರೆ ಆಗ್ಲೇ ಹೇಳಿದ್ನಲ್ಲಾ, ಕಂಡಿದ್ದನ್ನ ,ಕೇಳಿದ್ದನ್ನ ಬರೆಯೋ ಚಟ. ಅಲ್ದೇ ನಮ್ಮ ಪ್ರತಿಷ್ಟೆ ನೋಡಿ" ನಾವ್ ಬಂದಿರೋದೇ ಬೇರೆಯೋರ್ ಮನೆಗೆ, ಅಲ್ಲಿ ಹಾಗಿರ್ಬೇಕೂ, ಹೀಗಿರ್ಬೇಕೂ, ಅಂದ್ರೆ ಆಗುತ್ತಾ? ಆಮನೇಲಿ ಹೇಗಿರ್ತಾರೋ ಹಾಗೆ ಇರ್ಬೇಕಪ್ಪಾ,ಇಲ್ಲಾ ನಂದೇ ನಡೀ ಬೇಕೂ ಅಂದ್ರೆ ಕ್ಯಾರೇ ಅನ್ನೋರು ಯಾರಿರ್ತಾರೆ ಹೇಳಿ? ಮೊನ್ನೆ ಹೀಗೇ ಆಯ್ತು, ನನ್ನ ಆತ್ಮೀಯ ಮುಸ್ಲಿಮ್ ಮಿತ್ರನೊಬ್ಬನ ಮದುವೆಗೆ ಅಂತಾ ಹೋಗಿದ್ದೆ. ಜೊತೇಲೀ ನನ್ ಸ್ನೇಹಿತ್ರು ತುಂಬಾ ಜನನೇ ಇದ್ರು. ಅವ್ರ ಮದ್ವೆ ಗೊತ್ತಿದೆ ಯಲ್ಲಾ, ಮಂಟಪದಲ್ಲಿ ಹುಡುಗನ ಪಕ್ಕ ಮೌಲ್ವಿ ಇದ್ರು. ಹುಡ್ಗೀನಾ ಬೇರೆ ಕೋಣೆಯಲ್ಲಿ ಕೂರ್ಸಿದ್ರು. ಹುಡ್ಗೀ ಹತ್ರ ಹೆಂಗಸರು. ಹುಡುಗನಹತ್ರಾ ಗಂಡಸರು. ಮೌಲ್ವಿ ಅರೇಬಿಕ್ ಭಾಷೆಯಲ್ಲಿ ಏನೇನೋ ಹೇಳಿದ್ರು, ಒಳ್ಳೇ ಸಾಮವೇದ ಕೇಳಿದಹಾಗೆ ಹಿತವಾಗಿತ್ತು. ವೇದಾನೇ ಅರ್ಥವಾಗುಲ್ಲ. ಇನ್ನು ಕುರಾನ್ ಎಲ್ಲಿ ಅರ್ಥ ವಾಗುತ್ತೆ? ಅಂತೂ ಕಿವಿಗೆ ಹಿತವಾಗಿತ್ತು. ಸರಿ ಒಂದು ಪುಸ್ತಕದಲ್ಲಿ ಸೈನ್ ಮಾಡಿಸಿಕೊಂಡರು. ಹುದುಗನನ್ನು ಮೌಲ್ವಿ ತಬ್ಬಿ ಕೊಂಡರು. ಬಂದ ಗಂಡಸರೆಲ್ಲಾ ಹುಡುಗನನ್ನು ತಬ್ಬಿ ಕೊಂಡರು. ಮದ್ವೆ ಮುಗಿದೇ ಹೋಯ್ತು. ಹುಡುಗೀ ಬರಲೇ ಇಲ್ಲ. ನಂತರ ನೋಡಿ ಸಮಸ್ಯೆ ಶುರು ವಾಗಿದ್ದು, ಊಟದ ಮನೆ ದಾರಿ ತೋರ್ಸಿದ್ರು, ಒಂದುಕಡೆ ನಾನ್ ವೆಜ್, ಮತ್ತೊಂದು ಕಡೆ ವೆಜ್ ಊಟ. ಏನೇ ಆಗ್ಲೀ ವಾಸನೇಗೆ ಪಾರ್ಟೀಶನ್ ಹಾಕಲು ಸಾಧ್ಯವೇ? ವೆಜ್ ಜಾಗದಲ್ಲೂ ಅದೇ ಘಾಟು. ಬಂದವರೆಲ್ಲಾ ಭಾರೀ ಖುಶಿಯಾಗೇ ಊಟ ಮಾಡಿದ್ರು, ಆದರೆ ನಮ್ಮಿಬ್ಬರ ಪಾಡು ನಾಯಿ ಪಾಡು. ಆದರೆ ಯಾರ ಖುಷೀಗೂ ಬಂಗ ಮಾಡಲಿಲ್ಲ. ನಮ್ ಕಷ್ಟ ನಾವ್ ಅನುಭವಿಸಿದೆವು ಅಷ್ಟೆ. ನಿಜವಾಗ್ಲೂ ಇಲ್ಲೂ ನಿಷ್ಟೂರಕ್ಕೆ ಒಳಗಾಗುವಂತವರು ನಾವೇ. ನೋಡೀ ನಮ್ ಪರಿಸ್ಥಿತಿ ಹೇಗಿದೆ? ಮಿತ್ರನನ್ನು ಬಿಡಲಾರದ, ಪರಿಸ್ಥಿತಿ ಸಹಿಸಲಾರದ ಸಂದರ್ಭ. ಆದ್ರೂ ಅದೆಷ್ಟೊ ಜನರ ಕಣ್ಣಿಗೆ ನಾವು ಕೆಟ್ಟವರು. ಇರಲೀ ಬಿಡಿ. ಏನಪ್ಪ ಅಂದ್ರೆ "ಬಡವಾ ನೀನ್ ಮಡಗಿದಂಗಿರು" ಅನ್ನೋ ಮಾತ್ ನೆನಪಾಯ್ತು. ಪ್ರವಾಹದ ವಿರುದ್ಧ ಹೋಗಲು ಸಾಧ್ಯವೇ? ಆದರೆ ನದಿಯ ಹತ್ತಿರಕ್ಕೇ ಹೋಗದೆ ದೂರ ಇದ್ದು ಬಿಡಬಹುದು. ಏನ್ ಮಾಡೋದು....ದೂರ ಇರೋದೂ ಕಷ್ಟ. ಹತ್ತಿರ ಸೇರೋದೂ ಕಷ್ಟ.
----------------------------------------------------------
-೨-
ನಮ್ಮ ಅನೇಕ ಸಮಸ್ಯೆಗಳಿಗೆ ಜನರೇಶನ್ ಗ್ಯಾಪ್ ಕಾರಣವೆನ್ನುವುದು ಗೊತ್ತಾಗುವ ಹೊತ್ತಿಗೆ ನಮಗೂ ಸಾಕಾಗಿ ಹೋಗಿರುತ್ತೆ. ನಿತ್ಯವೂ ಎಲ್ಲಾರ ಮನೆಯಲ್ಲೂ ಟಿ.ವಿ.ಪ್ರೋಗ್ರಾಮ್ ದು ಕಾಮನ್ ಸಮಸ್ಯೆ. ಮನೆ ವಿಶಾಲವಾಗಿದ್ದರೆ ಚಿಂತೆಯಿಲ್ಲ. ಇಲ್ಲದಿದ್ದರೆ ನಿಜವಾಗಲೂ ನಮ್ಮಂತೋರಿಗೆ ಮನೆಯೇ ನರಕವೆನಿಸಿಬಿಡುತ್ತೆ. ಚಿಕ್ಕದೊಂದುಮನೆಯ ಹಾಲಿನಲ್ಲಿ ಟಿ.ವಿ. ಇದ್ದು ಮನೆಯಲ್ಲಿ ಕಾಲೇಜು ಓದೋ ವಯಸ್ಸಿನ ಮಕ್ಕಳಿದ್ದರೆ ನಮ್ಮಂತವರ ಕತೆ ಮುಗಿದಂತೆಯೇ. ಸದಾ ಒಂದಿಷ್ಟುಆಧುನಿಕ ಸಿನೆಮಾ ದೃಶ್ಯಗಳು, ಇಲ್ಲಾ ಅಂದ್ರೆ ಕ್ರಿಕೆಟ್, ಅಥವಾ ಅದೆಂತದೋ ಹೊಡೆದಾಟ. ಅಂತಾ ವಾತಾವರಣದಲ್ಲಿ ಕಣ್ಮುಚ್ಚಿ ಕೂರುವುದೆಂತು? ಪೂಜೆ ಮಾಡುವುದೆಂತು?ಅದು ಹೋಗಲೀ ನಮಗೆ ಆ ಹೊಡೆದಾಟ ಬಡಿದಾಟದ ದೃಶ್ಯ ಅಪ್ಪಿ ತಪ್ಪಿ ಕಣ್ಣಿಗೆ ಬಿದ್ದರೆ,ಆ ರಣಶಬ್ಧ ಕಿವಿಗೆ ಬಿದ್ದರೆ ತಲೆ ಸುತ್ತಿ ಬರುತ್ತೆ. ಇದು ನಮ್ಮಂತವರ ದೌರ್ಬಲ್ಯ.
ನೋಡಿ, ಮೊನ್ನೆ ಹಾಸನದ ಶಂಕರ ಮಠದಲ್ಲಿ ವೇದವಿದ್ವಾಂಸರ ಸಭೆ ನಡೆಯಿತು.ಆಮಂತ್ರಣ ಪತ್ರಿಕೆ ಸಿದ್ಧಮಾಡುವಾಗಲೇ ಕಷ್ಟ ಎದುರಾಯ್ತು. ಆಮಂತ್ರಣದಲ್ಲಿ ನಿಮ್ಮೆಲ್ಲರಿಗೂ ಸ್ವಾಗತ -ಅಂತಾ ಬರೆದರೆ ಬಂದವರಿಗೆಲ್ಲಾ ಎಷ್ಟು ಮುಜುಗರವಾಗುತ್ತಿತ್ತೆಂದು ನಮ್ಮಂತ ಕೆಲವರಿಗೆ ಗೊತ್ತಿತ್ತು. ವೇದ ವಿದ್ವಾಂಸರ ಸಭೆಗೆ ಅವರದೇ ಒಂದು ರೀತಿ-ನೀತಿ ಇದೆ.ವೇಷ-ಭೂಷಣಗಳಿವೆ.ಶಿಖೆ ಬಿಟ್ಟಿರುವ, ಪಂಚೆ ಉಟ್ಟು ಶಲ್ಯ ಹೊದ್ದಿರುವ ನೂರಾರು ವಿದ್ವಾಂಸರ ಮಧ್ಯೆ ಪ್ಯಾಂಟ್ ಶರ್ಟ್ ಧರಿಸಿರುವ ನಮ್ಮಂತವರಿಗೆ ಪ್ರವೇಶವಿಲ್ಲ. ಕಾರ್ಯಕ್ರಮ ಯೋಜಿಸಿರುವವರು ನಾವೇ ಆದರೂ ಅವರಂತಿದ್ದರೆ ನಮಗೆ ಪ್ರವೇಶ. ಇಲ್ಲದಿದ್ದರೆ ಇಲ್ಲ. ಅಶ್ಟೇ ಅಲ್ಲ , ಅಷ್ಟೊಂದು ವಿದ್ವಾಂಸರ ಮಧ್ಯೆ ಪ್ಯಾಂಟ್ ಶರ್ಟ್ ಧರಿಸಿ ಹೋಗಿದ್ದರೆ ಎಷ್ಟು ಜನರ ಕೆಂಗಣ್ಣಿಗೆ ತುತ್ತಾಗಬೇಕಿತ್ತೋ...
ಯಾಕೆ ಹೇಳ್ದೇ ಅಂದ್ರೆ , ಸಾಮಾನ್ಯ ಜನರ ಮಧ್ಯೆ[ಅಂದರೆ ನಮ್ಮಂತೋರು ಅಂತಾ] ಜುಟ್ಟು ಬಿಟ್ಕೊಂಡು ಒಬ್ಬ ಮನುಷ್ಯ ಬಂದಾ ಅಂದ್ರೆ ಅಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತಾನೆ. ಆದರೆ ಜುಟ್ಟು ಬಿಟ್ಟುಕೊಂಡು ವೈದಿಕ ವೇಷದಲ್ಲಿ ನೂರಾರು ಜನರ ಮಧ್ಯೆ ವೇದ ಪಠಣ ಮಾಡುತ್ತಿದ್ದಾಗ ನಮ್ಮಂತೋರು ಹೋದ್ರೆ ನಾವು ಅಪಹಾಸ್ಯಕ್ಕೆ ಒಳಗಾಗುತ್ತೀವಿ.ಅಲ್ವೇ?
ಒಟ್ಟಿನಲ್ಲಿ ನಾವ್ನಾವು ಬೆಳೆದಿರುವ ವಾತಾವರಣ ನಮ್ಮ ಮೆಲೆ ಪ್ರಭಾವ ಬೀರಿರುತ್ತೆ. ಅದು ನಮಗೆ ಸರಿ ಕಾಣುತ್ತೆ. ನಮ್ಮ ವಯೋ ಮಾನ ಕೂಡ ಗಣನೆಗೆ ಬರುತ್ತೆ.
No comments:
Post a Comment