Saturday, July 18, 2009

ಮೇಲು-ಕೀಳು ಭಾವನೆಯನ್ನು ವೇದವು ಒಪ್ಪದು

ಬ್ರಾಹ್ಮಣ

ಯಾವಾಗ ಅಜ್ಞಾನವೆಂಬುದು ಹೋಗುತ್ತದೆ,ಆಗ ಜ್ಞಾನವು ಲಭಿಸುತ್ತದೆ,ಈ ಅಜ್ಞಾನದವಿರುದ್ಧ ಹೋರಾಡಿದವನು ಬ್ರಾಹ್ಮಣನೆನಿಸಿದನು. ಇಲ್ಲಿ ಮತ್ತೆ ಜಾತಿ ಗಣನೆಗೆ ಬಾರದು.ಅವನ ಸ್ವಂತ ಯೋಗ್ಯತೆ, ಸಾಧನೆಯ ಮೇಲೆ ಅವನು ಬ್ರಾಹ್ಮಣನಾಗುತ್ತಾನೆ, ಅವನು ಯಾರ ಹೊಟ್ಟೆಯಲ್ಲಿ ಹುಟ್ಟಿದನೆಂಬುದು ಇಲ್ಲಿ ನಗಣ್ಯ. ಅವನು ಶ್ರಮ ವಹಿಸಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾನಾದ್ದರಿಂದ ಅವನು ಇಂಜಿನಿಯರ್, ಅಥವಾ ವೈದ್ಯಕೀಯ ಓದಿದ್ದರೆ ಡಾಕ್ಟರ್ ಅಥವಾ ಮತ್ಯಾರೋ.ಅವನು ಯಾರ ಮಗನೆಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಅಜ್ಞಾನದ ವಿರುದ್ಧವಾಗಿ ಇವನು ಹೋರಾಡುತ್ತಿದ್ದಾನಾದ್ದರಿಂದ ಇವನು ಬ್ರಾಹ್ಮಣ. ಇವನು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದರೇನು? ಅವನ ಹೆಸರು ಮಕಂದರ್ ಆದರೇನು? ಪೀರ್ಆದರೇನು? ಅವನು ಅವನ ಗುಣಕರ್ಮ ಸ್ವಭಾವದಿಂದ ಬ್ರಾಹ್ಮಣತ್ವ ಗಳಿಸಿದ್ದಾನಾದ್ದರಿಂದ ಅವನು ಬ್ರಾಹ್ಮಣ.ಅವರ ಅಪ್ಪ ಯಾರೂ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ.ಅವನ ಸಾಧನೆ ಏನು, ಅವನು ಸಮಾಜದ ಅಜ್ಞಾನ ಹೋಗಲಾಡಿಸಲು ಹೋರಾಡುತ್ತಿದ್ದರೆ, ಅವನು ಬ್ರಾಹ್ಮಣ.

ಕ್ಷತ್ರಿಯ

ಸಮಾಜದಲ್ಲಿರುವ ಎರಡನೆಯ ದುಷ್ಟಶಕ್ತಿ ಅನ್ಯಾಯ-ಅಧರ್ಮ.ಯಾರಲ್ಲಿ ಅನ್ಯಾಯ-ಅಧರ್ಮದ ವಿರುದ್ಧ ಹೋರಾಡುವ ಸ್ವಭಾವ ವಿದೆಯೋ, ಯಾರು ಈ ಹೋರಾಟಮಾಡುತ್ತಿದ್ದಾರೋ ಅವನು ಕ್ಷತ್ರಿಯ.ಯುದ್ಧದಲ್ಲಿ ಕಾದಾಡಿ ರುಂಡವನ್ನು ಚಂಡಾಡುವವನು ಕ್ಷತ್ರಿಯ ಎಂಬುದು ರೂಢಿಯಲ್ಲಿದೆ. ಆದರೆ ನಿಜವಾದ ಕ್ಷತ್ರಿಯ ಯಾರು? ಕ್ಷತಾತ್ ತ್ರಾಯತೇ ಇತಿ ಕ್ಷತ್ರಿಯ:, ಆಘಾತಗಳಿಂದ,ಅನ್ಯಾಯಗಳಿಂದ,ತೊಂದರೆಗಳಿಂದ ರಕ್ಷಿಸುವವನು ಕ್ಷತ್ರಿಯ.ತನ್ನ ಪ್ರಾಣವನ್ನು ಪಣವಾಗಿಟ್ಟು ಅನ್ಯಾಯ-ಅಧರ್ಮಗಳ ವಿರುದ್ಧ ಯಾರು ಹೋರಾಡುತ್ತಾನೋ ಅವನು ಕ್ಷತ್ರಿಯ. ಇಲ್ಲಿಯೂ ಕೂಡ ಅವನು ಹುಟ್ಟಿನಿಂದ ಯಾವ ಜಾತಿ[ ಈಗ ರೂಢಿಯಲ್ಲಿರುವಂತೆ] ಎಂಬುದು ನಗಣ್ಯ. ಯಾರಲ್ಲಿ ಈ ಗುಣಸ್ವಭಾವ ಇದೆಯೋ ಅವನು ಕ್ಷತ್ರಿಯ.

ವೈಶ್ಯ

ಇನ್ನೊಂದು ದುಷ್ಟ ಶಕ್ತಿ ಎಂದರೆ ಅಭಾವ. ಅಭಾವವೆಂದರೆಭಗವಂತನು ಕೊಟ್ತಿಲ್ಲ ವೆಂದು ಅಭಾವವಿದೆಯೆಂದಲ್ಲ.ಭಗವಂತನು ಕೊಟ್ಟಿದ್ದರೂ ಅದು ಸರಿಯಾಗಿ ಹಂಚಿಕೆಯಾಗಿಲ್ಲ.ಎಲ್ಲೋ ಒಂದುಕಡೆ ಹೆಚ್ಚು, ಮತ್ತೊಂದುಕಡೆ ಕಮ್ಮಿ, ಹೀಗೆ ಅಭಾವ ಸೃಷ್ಟಿಯಾಗಿದೆ.ಪ್ರಪಂಚದಲ್ಲಿರುವ ಸಂಪತ್ತನ್ನು ಕ್ರೋಢೀಕರಿಸಿ,ಅದನ್ನು ಬೆಳಸಿ ಸಮಾಜದಲ್ಲಿ ಸಮಾನವಾಗಿ ಹಂಚಿಕೆಮಾಡಿ ಯಾರು ಇಂತಾ ಅಭಾವವನ್ನು ನಾಶಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೋ ಅವನು ವೈಶ್ಯನೆನಸಿಕೊಳ್ಳುತ್ತಾನೆ. ಪಶುಪಾಲನೆ,ಗೋಪಾಲನೆ, ಕೃಷಿ, ಇವೆಲ್ಲಾ ವೈಷ್ಯನ ಕೆಲಸ.ಸಮಾಜದಲ್ಲಿ ಅಭಾವದ ವಿರುದ್ಧ ಹೋರಾಡುವ ಯಾವನೇಆಗಲೀ ಅವನು ವೈಷ್ಯ ನೆನಸಿಕೊಳ್ಳುತ್ತಾನೆ.

ಶೂದ್ರ

ಸಮಾಜದಲ್ಲಿರುವ ನಾಲ್ಕನೇ ಮತ್ತು ಅತಿ ದುಷ್ಟಶಕ್ತಿ ಎಂದರೆ ಆಲಸ್ಯ. ಆಲಸ್ಯ, ಸೋಮಾರಿತನ, ನಿಶ್ಕ್ರಿಯತೆಯ ವಿರುದ್ಧ ಹೋರಾಡುವವನು ಶೂದ್ರನೆನಸಿಕೊಳ್ಳುತ್ತಾನೆ.ಲವಲವಿಕೆಯಿಂದ ಕೆಲಸವನ್ನು ಮಾಡುತ್ತಾ, ಎಲ್ಲರಲ್ಲೂ ಸ್ಫೂರ್ತಿಯನ್ನುಂಟುಮಾಡುತ್ತಾ,ಎಲ್ಲರೂ ಕೂಡ ಉದ್ಯಮಶೀಲರಾಗುವುದಕ್ಕೆ ಪ್ರೋತ್ಸಾಹವನ್ನು ಕೊಡುವವನು ಶೂದ್ರ.ಇಲ್ಲೂ ಕೂಡ ಅವನು ಯಾವ ಜಾತಿಯಲ್ಲಿ[ಈಗಿನ ರೂಢಿಯಂತೆ] ಹುಟ್ಟಿದನೆಂಬುದು ಲೆಕ್ಖಕ್ಕೆ ಬರಲಿಲ್ಲ.

ಹೀಗೆ ಸಮಾಜದಲ್ಲಿರುವ ನಾಲ್ಕು ದುಷ್ಟಶಕ್ತಿಗಳಾದ ಅಜ್ಞಾನ,ಅನ್ಯಾಯ, ಅಭಾವ ಮತ್ತು ಆಲಸ್ಯದ ವಿರುದ್ಧ ಹೋರಾಡುವ ಕ್ರಿಯೆಗಳಲ್ಲಿ ತಮ್ಮ ತಮ್ಮ ಗುಣಸ್ವಭಾವಗಳಿಗನುಗುಣವಾಗಿ ಜೋಡಿಸಿಕೊಳ್ಳುವವರನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ವಿಭಾಗಿಸಲಾಯ್ತು. ಇಲ್ಲಿ ಸಮಾಜದಈ ದುಷ್ಟಶಕ್ತಿಗಳ ವಿರುದ್ಧವಾಗಿ ಸಮಾನವಾಗಿ ಹೋರಾಡುತ್ತಿರುವ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ, ಇವರಲ್ಲಿ ಮೇಲ್ಯಾರು? ಕೀಳ್ಯಾರು?

ಕಾಲಗತಿಯಲ್ಲಿ ಯಾರೋ ಅವಿವೇಕಿಗಳು ಈ ವರ್ಣವ್ಯವಸ್ಥೆಯಲ್ಲಿ ಮೇಲು ಕೀಳೆಂಬ ಭೇದ ಉಂಟುಮಾಡಿ ರೂಢಿಗೆ ಬಂದಿರುವುದು ಸುಳ್ಳಲ್ಲ. ಆದರೆ ಇದನ್ನು ವೇದವು ಒಪ್ಪುವುದಿಲ್ಲ.

ವೇದವು ಸ್ಪಷ್ಟವಾಗಿಹೇಳಿದೆ....

ಅಜ್ಯೇಷ್ಠಾಸೋ ಅಕನಿಷ್ಠಾಸ: ಏತೇ ಸಂಭ್ರಾತರೋ ವಾವೃಧು: ಸೌಭಗಾಯ| ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿ: ಸುದಿನಾ ಮರುಧ್ಭ್ಯ:||

[ಋಕ್.೫.೬೦.೫]

ಅಜ್ಯೇಷ್ಠಾಸೋ ಅಕನಿಷ್ಠಾಸ:

ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ, ಈ ಜೀವನಕ್ರಮವನ್ನು ಪಾಲನೆಮಾಡುವವರಲ್ಲಿ ಯಾರೂ ದೊಡ್ದವರಲ್ಲ, ಯಾರೂ ಚಿಕ್ಕವರೂ ಅಲ್ಲ.ಯಾರೂ ಮೇಲೂ ಅಲ್ಲ. ಯಾರೂ ಕೀಳೂ ಅಲ್ಲ.

ಭ್ರಾತರೋ:

ಎಲ್ಲರೂ ಪರಸ್ಪರ ಸೋದರರು.

ಸೌಭಗಾಯ ಸಂ ವಾವೃಧು:

ನಿಮ್ಮೆಲ್ಲರ ಸೌಭಾಗ್ಯಕ್ಕಾಗಿ,ನಿಮ್ಮೆಲ್ಲರ ಏಳಿಗೆಗಾಗಿ ಒಟ್ಟಿಗೆ ನಡೆಯುವವರಾಗಿ.

ಪುರುಷಸೂಕ್ತದ ಈ ಒಂದು ಮಂತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದರಂತೆ ನಡೆದದ್ದೇ ಆದರೆ ಸಮಾಜವು ಅಂದೇ ಸ್ವರ್ಗವಾಗುವುದಿಲ್ಲವೇ?

ನಾವೆಲ್ಲಾ ಹೇಗೆ ಸಹೋದರರು?

ಯುವಾ ಸ್ವಪಾ ರುದ್ರ: , ಏಷಾಂ ಪಿತಾ:

ಅಜರನೂ, ಆತ್ಮರಕ್ಷಕನೂ,ದುಷ್ಟರಿಗೆ ದಂಡನೀಡುವವನೂ ಆದ ಪ್ರಭುವು ಇವರೆಲ್ಲರ ತಂದೆ.ಆದ್ದರಿಂದಆಭಗವಂತನ ಮಕ್ಕಳಾದ ನಾವೆಲ್ಲಾ ಸೋದರರು.

ಸುದುಘಾ ಪೃಶ್ನಿ: ಸುದಿನಾ ಮರುಧ್ಭ್ಯ:

ಭೂತಾಯಿಯು ಈ ಮಾನವರಿಗೆಲ್ಲಾ ಉತ್ತಮಶಕ್ತಿಯನ್ನೆರೆಯುವವಳೂ, ಉತ್ತಮ ದಿನಗಳನ್ನು ತೋರಿಸುವವಳೂಆಗಿದ್ದಾಳೆ.

ನಮಗೆಲ್ಲಾ ಒಂದೇ ಭೂಮಿ. ನಮಗೆಲ್ಲಾ ಆಶ್ರಯವನ್ನು ಕೊಟ್ಟು, ಬದುಕಲು ದವಸಧಾನ್ಯಗಳನ್ನು ಕೊಟ್ಟು ಕಾಪಾಡುತ್ತಿರುವವಳು ಒಬ್ಬಳೇ ಭೂಮಾತೆ.ಆದ್ದರಿಂದ ನಾವೆಲ್ಲಾ ಒಬ್ಬನೇ ಭಗವಂತನ ಮಕ್ಕಳು.

ಸುಜಾತಾಸೋ ಜನುಷಾ ಪೃಶ್ನೀಮಾತರೋ ದಿವೋ ಮರ್ಯಾ:

[ಋಕ್.೫.೫೯.೬]

ಪೃಶ್ನೀಮಾತರ:

ಭೂತಾಯಿಯನ್ನೇ ತಾಯಿಯಾಗಿ ಹೊಂದಿದವರೂ

ದಿವ: ಮರ್ಯಾ:

ಜ್ಯೋತಿರ್ಮಯ ಪ್ರಭುವಿನ ಮಕ್ಕಳಾದ ಕಾರಣ

ಜನುಷಾ ಸುಜಾತಾಸ:

ಜನ್ಮದಿಂದ ಉತ್ತಮ ಕುಲದವರೇ ಆಗಿದ್ದಾರೆ.

ಅಥರ್ವವೇದವು ಹೇಳಿದೆ...

ಸಮಾನ ಮಂತ್ರ: ಸಮಿತಿ: ಸಮಾನೀ

ಸಮಾನ ವ್ರತಂ ಸಹ ಚಿತ್ತ ಮೇಷಾಂ|

ಸಮಾನೇನ ವೋ ಹವಿಷಾ ಜುಹೋಮಿ

ಸಮಾನಂ ಚೇತೋ ಅಭಿಸಂವಿಶಧ್ವಮ್||

[ಅಥರ್ವ ವೇದ ೬.೬೪.೨]

ಮಂತ್ರ:ಸಮಾನ:

ಎಲ್ಲರ ಮಂತ್ರವೂ ಸಮನಾಗಿರಲಿ

ಸಮಿತಿ: ಸಮಾನೀ

ಸಮಿತಿ ಸಮಾನವಾಗಿರಲಿ

ವ್ರತಂಸಮಾನಮ್

ವ್ರತವೂ ಸಮಾನವಾಗಿರಲಿ

ಏಷಾ ಚಿತ್ತಂ ಸಹ

ಇವರೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ

ವ: ಸಮಾನೇನ ಹವಿಷಾ ಜುಹೋಮಿ

ನಿಮ್ಮೆಲ್ಲರಿಗೂ ಸಮಾನವಾದ ಖಾದ್ಯಪೇಯಗಳನ್ನೇ ದಾನ ಮಾಡುತ್ತೇನೆ

ಸಮಾನಂ ಚೇತ:

ಸಮಾನವಾದ ಚೈತನ್ಯದಲ್ಲಿಯೇ

ಅಭಿಸಂವಿಶಧ್ವಮ್

ಎಲ್ಲೆಡೆಯಿಂದಲೂ ಪ್ರವೇಶಿಸಿರಿ

ಭಗವಂತನು ಇಷ್ಟು ಸ್ಪಷ್ಟವಾಗಿ ಸಮಾನತೆಯ ಸಂದೇಶವನ್ನು ಸಾರುತ್ತಿರುವಾಗ ಮಾನವರಲ್ಲಿ ಮೇಲ್ಯಾರು? ಕೀಳ್ಯಾರು? ಎಲ್ಲರೂ ಸೋದರರೇ ಅಲ್ಲವೇ?

[ಆಧಾರ: ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸ ಮತ್ತು ಪಂ.ಸುಧಾಕರ ಚತುರ್ವೇದೀ ಇವರ ಗ್ರಂಥ " ವೇದೋಕ್ತ ಜೀವನ ಪಥ"]

No comments: